ಸತೀಶ್ ಜಾರಕಿಹೊಳಿ ಪರ ನಿಂತ ಬಿಜೆಪಿ ಶಾಸಕ ; ಕುತೂಹಲ ಘಟ್ಟಕ್ಕೆ ಸಿಎಂ ಬದಲಾವಣೆ
ಬೆಳಗಾವಿ : ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ತನಿಖೆಗೆ ಅನುಮತಿ ನೀಡಿದ್ದನ್ನು ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದ್ದ ಸಿಎಂ ಸಿದ್ದರಾಮಯ್ಯ ಪ್ರಕರಣ ಕೊನೆಯ ಘಟ್ಟಕ್ಕೆ ಸಿಲುಕಿದ್ದು ಸಪ್ಟೆಂಬರ್. 12 ಅಥವಾ ನಂತರದ ಒಂದೆರಡು ದಿನದಲ್ಲಿ ಆದೇಶ ಹೊರಬೀಳಲಿದೆ.
ಆದರೆ ಇದೇ ವಿಚಾರವಾಗಿ ಕಾಂಗ್ರೆಸ್ ನಲ್ಲಿ ಸಿಎಂ ಬದಲಾವಣೆ ಕುರಿತು ಆರೋಪ ಪ್ರತ್ಯಾರೋಪಗಳು ನಡೆಯುತ್ತಿದ್ದು, ಸಿಎಂ ಹುದ್ದೆಯ ಮೇಲೆ ಅನೇಕರು ಕಣ್ಣಿಟ್ಟಿದ್ದಾರೆ. ಈ ಮಧ್ಯೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮುಂದಿನ ಸಿಎಂ ಎಂದು ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಪೋಸ್ಟ್ ಮಾಡುವ ಮೂಲಕ ಬೆಂಬಲ ಸೂಚಿಸಿದ್ದಾರೆ.
ಈ ವಿಚಾರಕ್ಕೆ ಇನ್ನಷ್ಟು ಟ್ವಿಸ್ಟ್ ಸಿಕ್ಕಿದ್ದು ಸಚಿವ ಸತೀಶ್ ಜಾರಕಿಹೊಳಿ ಬೆಂಬಲಕ್ಕೆ ಸ್ವತಃ ಬಿಜೆಪಿ ಶಾಸಕ ನಿಂತಿದ್ದು ಬೆಳಗಾವಿಯವರಿಗೆ ಸಿಎಂ ಸ್ಥಾನ ಲಭಿಸಿದರೆ ಸಂತೋಷ, ವೈಯಕ್ತಿಕವಾಗಿ ಸ್ವಾಗತಿಸುತ್ತೇನೆ ಎಂದು ಹೇಳುವ ಮೂಲಕ ಸತೀಶ್ ಜಾರಕಿಹೊಳಿ ಪರ ಬ್ಯಾಟ್ ಬೀಸಿದ್ದಾರೆ.
ರಾಯಬಾಗ ಬಿಜೆಪಿ ಶಾಸಕ ದುರ್ಯೋಧನ ಐಹೊಳೆ ಬಿಜೆಪಿ ಹಿರಿಯ ಶಾಸಕರಲ್ಲಿ ಒಬ್ಬರು. ಚಿಕ್ಕೋಡಿ ತಾಲೂಕಿನ ಕರಗಾಂವ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಇವರು. ಸಿಎಂ ಬದಲಾವಣೆ ಆದರೆ ಬೆಳಗಾವಿ ಜಿಲ್ಲೆಯವರಿಗೆ ಅವಕಾಶ ಸಿಗಲಿ. ನಮ್ಮವರೇ ಸಿಎಂ ಆದರೆ ಸಂತೋಷ ಎಂದು ಹೇಳುವ ಮೂಲಕ ಸಚಿವ ಸತೀಶ್ ಜಾರಕಿಹೊಳಿ ಪರ ಬ್ಯಾಟ್ ಬೀಸಿದ್ದಾರೆ.


