ಪಂಚಮಸಾಲಿ ಮಠಕ್ಕೆ ಬೀಗ ; ಶ್ರೀಗಳ ವಿರುದ್ಧ ತಿರುಗಿಬಿದ್ದ ಕಾಶಪ್ಪನವರ್
ಬಾಗಲಕೋಟೆ : ಕೂಡಲಸಂಗಮ ಬಸವ ಜಯಮೃತ್ಯಂಜಯ ಶ್ರೀಗಳಿಗೆ ಸಂಕಷ್ಟ ಎದುರಾಗಿದೆ. ಸಮುದಾಯದ ಮುಖಂಡರೇ ಈಗ ಶ್ರೀಗಳ ವಿರುದ್ಧ ತಿರುಗಿ ಬಿದ್ದಿದ್ದು ಮಠಕ್ಕೆ ಬೀಗ ಹಾಕಲಾಗಿದೆಮ.
ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನಲ್ಲಿರುವ ಕೂಡಲಸಂಗಮದ ಪಂಚಮಸಾಲಿ ಪೀಠದ ಮಠದಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದು ಭಕ್ತರನ್ನು ಮಾತನಾಡಿಸುವವರು ಯಾರೂ ಇಲ್ಲದ ಕಾರಣಕ್ಕೆ ಬೀಗ ಹಾಕಲಾಗಿದೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿಕೆ ನೀಡಿದ್ದಾರೆ.
ಮಠಕ್ಕೆ ಹಾಕಿದ್ದ ಬೀಗವನ್ನು ಸ್ವಾಮೀಜಿ ಬೆಂಬಲಿಗರು ಒಡೆದಿದ್ದಾರೆ. ಪೀಠದ ಬೀಗ ಮುರಿದಿದ್ದಾರೆ ಎಂದು ಕಾಶಪ್ಪನವರ ಬೆಂಬಲಿಗ ಚಂದ್ರಶೇಖರ ಚಿತ್ತರಗಿ ಅವರು ಹುನಗುಂದ ಪೊಲೀಸ್ ಠಾಣೆಯಲ್ಲಿ 7 ಜನರ ವಿರುದ್ಧ ದೂರು ದಾಖಲಿಸಿದ್ದರು. ಈ ಸಂಬಂಧ ಎಫ್ಐಆರ್ ದಾಖಲಾಗಿದೆ.
ಮಠಕ್ಕೆ ಬೀಗ ಹಾಕಲಾಗಿದೆ, ನೀವೆಲ್ಲ ಮುಖಂಡರು ಸೇರಿ ಪೀಠಕ್ಕೆ ಹೋಗೋಣ ಅಂದ್ರೆ ಬರುತ್ತೇನೆ. ಇಲ್ಲದಿದ್ರೆ ಹುನಗುಂದ (Hanagunda) ಪಟ್ಟಣದಲ್ಲಿರುವ ಯಾವುದಾದ್ರೂ ಭಕ್ತರ ಮನೆಯಲ್ಲೇ ಇರುತ್ತೇನೆ ಎಂದು ಬಸವ ಜಯ ಮೃತ್ಯುಂಜಯ ಸ್ವಾಮೀಜಿ (Basava Jaya Mruthyunjaya Swamiji) ಭಾವುಕರಾಗಿ ನುಡಿದಿದ್ದಾರೆ.
ಪೀಠಕ್ಕೆ ಬೀಗ ಹಾಕಿದ ವಿಚಾರ ವಿವಾದವಾಗುತ್ತಿದ್ದಂತೆ ಸ್ವಾಮೀಜಿ ಹುನಗುಂದ ಪಟ್ಟಣದ ಬಸವ ಮಂಟಪದಲ್ಲಿ ತಮ್ಮ ಬೆಂಬಲಿಗರ ಸಭೆ ನಡೆಸಿದರು. ಸಭೆಯಲ್ಲಿ ಬೆಂಬಲಿಗರು ಹೇಳಿದಂತೆ ಮುನ್ನಡೆಯುವ ನಿರ್ಧಾರ ಕೈಗೊಂಡರು. ಸಭೆಯಲ್ಲಿ ಪೀಠಕ್ಕೆ ಬೀಗ ಹಾಕಿರುವ ವಿಚಾರದ ಬಗ್ಗೆ ಸ್ವಾಮೀಜಿ ಮಾತನಾಡುತ್ತ ಭಾವುಕರಾದ್ರು. ನಂತರ ಸಮಾಜದ ಮುಖಂಡರ ನಿರ್ಧಾರದಂತೆ ನಾನು ಮುನ್ನೆಡೆಯುತ್ತೇನೆ ಎಂದರು.


