ಚಿಕ್ಕೋಡಿ – ಐಎಎಸ್ ಅಧಿಕಾರಿ ಮಾಧವ ಗಿತ್ತೆ ಎತ್ತಂಗಡಿ
ಬೆಳಗಾವಿ ದೊಡ್ಡ ಜಿಲ್ಲೆಯಾಗಿರುವ ಹಿನ್ನೆಲೆಯಲ್ಲಿ ಚಿಕ್ಕೋಡಿ ಉಪವಿಭಾಗಗಕ್ಕೆ ಪ್ರೊಬೆಷನರಿ ಐಎಎಸ್ ಅಧಿಕಾರಿ ಮಾಧವ ಗಿತ್ತೆ ಅವರನ್ನು ಸರ್ಕಾರ ನೇಮಕ ಮಾಡಿತ್ತು. ಆದರೆ ಜನರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ವಿಫಲ ಹಾಗೂ ಒಂದಿಲ್ಲೊಂದು ವಿವಾದದ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಐಎಎಸ್ ಅಧಿಕಾರಿ ಗಿತ್ತೆ ಅವರಿಗೆ ಯಾವುದೇ ಹುದ್ದೆ ತೋರಿಸದೇ ಎತ್ತಂಗಡಿ ಮಾಡಿ ಬುಧವಾರ ಸರ್ಕಾರ ಆದೇಶ ಹೊರಡಿಸಿದೆ.
ಐಎಎಸ್ ಅಧಿಕಾರಿ ಮಾಧವ ಗಿತ್ತೆ ಅವರ ತೆರವಾದ ಸ್ಥಾನಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಧಾರವಾಡದ ವಿಶೇಷ ಭೂಸ್ವಾಧಿನಾಧಿಕಾರಿ ಸುಭಾಷ ಸಂಪಗಾಂವಿ ಅವರನ್ನು ನೇಮಕ ಮಾಡಲಾಗಿದೆ. ಕಳೆದ ಒಂದು ವರ್ಷದಿಂದ ಚಿಕ್ಕೋಡಿ ಉಪವಿಭಾಗಾಧಿಕಾರಿ ಸೇವೆ ಸಲ್ಲಿಸಿದ ಐಎಎಸ್ ಅಧಿಕಾರಿ ಮಾಧವ ಗಿತ್ತೆ ಅವರು, ತಮ್ಮ ಸೇವಾವಧಿಯಲ್ಲಿ ವಕೀಲರೊಂದಿಗೆ ಸಂಘರ್ಷ, ಜಮೀನು ಉತಾರಗಳ ಪ್ರಕರಣಗಳನ್ನು ಇತ್ಯರ್ಥ ಪಡಿಸದೇ ಕಾಲಹರಣ ಮಾಡಿದ್ದರು.
ಇದಲ್ಲದೇ ಚಿಕ್ಕೋಡಿ ಉಪವಿಭಾಗದ ಜನರು ಕಾರ್ಯ ನಿಮಿತ್ತ ಕಚೇರಿ ಆಗಮಿಸುವ ಜನರಿಗೆ ಸರಿಯಾದ ಸ್ಪಂದನೆ ಇಲ್ಲದಿರುವದರಿಂದ ವರ್ಷಗಟ್ಟಲೇ ಕಚೇರಿಯಿಂದ ಕಚೇರಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಕೇವಲ ಅಧಿಕಾರಿ ಮಾಧವ ಗಿತ್ತೆ ಅಷ್ಟೇ ಅಲ್ಲದೇ ,ಇಂತಹ ಬೇವಾಬ್ದಾರಿ ಅಧಿಕಾರಿಗಳನ್ನು ಉಳಿಸಿಕೊಂಡ ಜನಪ್ರತಿನಿಧಿಗಳ ವಿರುದ್ಧವೂ ಕೆಂಡಕಾರಿದ್ದರು.
ಸಾರ್ವಜನಿಕರ ಒತ್ತಡಕ್ಕೆ ಮಣಿದ ಜನಪ್ರತಿನಿಧಿಗಳು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದರು. ಈ ಹಿನ್ನೆಲೆಯಲ್ಲಿ ಮಾಧವ ಗಿತ್ತೆ ಅವರನ್ನು ಯಾವುದೇ ಹುದ್ದೆ ತೋರಿಸದೇ ಎತ್ತಂಗಡಿ ಮಾಡಿ ಆದೇಶ ಹೊರಡಿಸಿದೆ. ತೆರವಾದ ಸ್ಥಾನಕ್ಕೆ ಈ ಹಿಂದೆ ಚಿಕ್ಕೋಡಿ ತಹಶೀಲ್ದಾರ, ಹಿಪ್ಪರಗಿ ಜಲಾಶಯ, ಮಲಪ್ರಭಾ ಯೋಜನೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಧಾರವಾಡದ ವಿಶೇಷ ಭೂಸ್ವಾಧಿನಾಧಿಕಾರಿ ಸೇವೆ ಸಲ್ಲಿಸಿರುವ ಸುಭಾಷ ಸಂಪಗಾಂವಿ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.
ಇನ್ನೂ ಬೆಳಗಾವಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ (ಬೀಮ್ಸ್) ಆಡಳಿತಾಧಿಕಾರಿಯಾಗಿದ್ದ ಪ್ರೀತಂ ನಸಲಾಪೂರೆ ಅವರನ್ನು ಬಾಗಲಕೋಟೆಯಲ್ಲಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವಿಶೇಷ ಭೂಸ್ವಾಧಿನಾಧಿಕಾರಿ ಹುದ್ದೆಗೆ ವರ್ಗ ಮಾಡಲಾಗಿದೆ. ತೆರವಾದ ಸ್ಥಾನಕ್ಕೆ ಹೆಸ್ಕಾಂ ಹುಬ್ಬಳಿ ಕಚೇರಿಯಲ್ಲಿ ಆಡಳಿತ ಮತ್ತು ಮಾನಸಂಪನ್ಮೂಲ ವಿಭಾಗದ ಪ್ರಧಾನ ವ್ಯವಸ್ಥಾಪಕರಾಗಿದ್ದ ಡಾ. ಸಿದ್ದಪ್ಪ ಹುಲ್ಲೋಳ್ಳಿ ಅವರನ್ನು ನೇಮಕ ಮಾಡಿದೆ.


