
ಸುರಿಯುವ ಮಳೆಯಲ್ಲಿ ಅದ್ದೂರಿಯಾಗಿ ಜರುಗಿದ ಅವರೊಳ್ಳಿ-ಬಿಳಕಿ ಗ್ರಾಮ ದೇವಿಯರ ಹೊನ್ನಾಟ

ಖಾನಾಪುರ : ಸುರಿಯುವ ಮಳೆಯಲ್ಲಿಯೇ ದೇವಿಯರ ಹೊನ್ನಾಟ ನಡೆಯುವ ವಿಶೇಷತೆಹೊಂದಿರುವ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಅವರೊಳ್ಳಿ-ಬಿಳಕಿ ಗ್ರಾಮದೇವಿಯರ ಜಾತ್ರೆ ಈ ಸಲವೂ ಸುರಿಯುವ ಮಳೆಯ ಮಧ್ಯೆಯೇ ಅದ್ದೂರಿಯಾಗಿ ನಡೆಯಿತು.
ಪ್ರತಿ ಐದು ವರ್ಷಕ್ಕೊಮ್ಮೆ ಐದು ದಿನಗಳ ಕಾಲ ನಡೆಯುವ ಜಾತ್ರೆಯಲ್ಲಿ ಮೊದಲ ಎರಡು ದಿನದ ಹೊನ್ನಾಟ ಯಶಸ್ವಿಯಾಗಿ ನಡೆಯುತ್ತಿದೆ. ಸಾಮಾನ್ಯವಾಗಿ ಗ್ರಾಮದೇವಿಯರ ಜಾತ್ರೆಗಳಲ್ಲಿ ಭಂಡಾರದ ಮಧ್ಯೆ ಹೊನ್ನಾಟ ನಡೆಯೋ ಸಂಪ್ರದಾಯವಿದೆ. ಆದರೆ ಅವರೊಳ್ಳಿ-ಬಿಳಕಿ ದೇವಿಯರ ಜಾತ್ರೆಯಲ್ಲಿ ಭಂಡಾರದ ಜೊತೆಗೆ ಸುರಿಯುವ ಮಳೆಯಲ್ಲಿ ದೇವಿಯರ ಹೊನ್ನಾಟ ನಡೆಯುತ್ತದೆ.
ಎರಡು ದಿನದ ಹೊನ್ನಾಟದ ಬಳಿಕ ದೇವಿಯರನ್ನು ವಿಶೇಷವಾಗಿ ದಂಡ ಯುದ್ಧದ ಮೂಲಕ ಸೀಮೆಗೆ ಕಳುಹಿಸಿಕೊಡಲಾಯಿತು. ಗ್ರಾಮದ ಪ್ರತಿಯೊಂದು ಮನೆಯಿಂದ ಒಬ್ಬೊಬ್ಬರು ಒಂದೊಂದು ಕೋಲು ಅಥವಾ ದಂಡವನ್ನು ತೆಗೆದುಕೊಂಡು ಬಂದು,
ದೇವಿಯ ಎದುರಿಗೆ ಒಂದಕ್ಕೊಂದು ಕೋಲು ಹೊಡೆಯುತ್ತ, ಯುದ್ಧವನ್ನು ಮಾಡುತ್ತ, ಹುಯ್… ಹುಯ್.. ಎಂಬ ಹೂಂಕಾರದೊಂದಿಗೆ ದೇವಿಯನ್ನು ಸೀಮೆಗೆ ಕರೆದುಕೊಂಡು ಹೋದರು. ಇನ್ನು ಎರಡು ದಿನದ ಮಧ್ಯೆ ಬಂದ ರಾತ್ರಿಯಲ್ಲಿಯೂ ಸಹ ದೇವಿಯರು ವಿಶ್ರಾಂತಿ ಇಲ್ಲದೇ ಹೊನ್ನಾಟ ಆಡಿದರು. ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ದೇವಿಯರಿಗೆ ಪ್ಲಾಸ್ಟಿಕ್ ಹೊದಿಕೆ ಹಾಕಲಾಗಿತ್ತು.