
ಸೋಲಿಗೆ ಎದೆಗುಂದುವುದು ಬೇಡ : ಹೆಬ್ಬಾಳಕರ್ ಗೆ ಧೈರ್ಯ ಹೇಳಿದ ಕೂಡಲಸಂಗಮ ಶ್ರೀ

ಬೆಳಗಾವಿ : ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋತಿದ್ದಕ್ಕೆ ಎದೆಗುಂದುವುದು ಬೇಡ. ಏನೋ ತಪ್ಪಾಗಿದೆ. ಇಡೀ ಸಮಾಜ ನಿಮ್ಮ ಜೊತೆಗಿರುತ್ತದೆ. ಮೃಣಾಲ್ ಹೆಬ್ಬಾಳಕರ್ ಯುವ ನಾಯಕ. ಜನರ ಹೃದಯದಲ್ಲಿದ್ದಾರೆ. ಆದರೆ, ಚುನಾವಣಾ ರಾಜಕೀಯವೇ ಬೇರೆ ಎಂದು ಕೂಡಲಸಂಗಮ ಬಸವ ಜಯಮೃತ್ಯುಂಜಯ ಶ್ರೀಗಳು ಸಚಿವೆ ಹೆಬ್ಬಾಳಕರ್ ಅವರಿಗೆ ಧೈರ್ಯ ತುಂಬಿದರು.
ಗುರುವಾರ ಕೂಡಲ ಸಂಗಮದ ಪಂಚಮಸಾಲಿ ಸಮಾಜದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿಯವರ ನೇತೃತ್ವದ ನಿಯೋಗ ಹೆಬ್ಬಾಳಕರ್ ಅವರನ್ನು ಭೇಟಿಯಾದ ಸಂದರ್ಭದಲ್ಲಿ ಮಾತನಾಡಿದ ಇವರು. ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ
ಸಿಗುವ ನಿಟ್ಟಿನಲ್ಲಿ ಮೊದಲಿನಿಂದಲೂ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಮಂಚೂಣಿಯಲ್ಲಿ ನಿಂತು ಹೋರಾಟ ಮಾಡಿದ್ದರು. ಕಳೆದ ಬಿಜೆಪಿ ಸರ್ಕಾರದಲ್ಲಿ 2ಡಿ ಮೀಸಲಾತಿ ಕೊಟ್ಟಿತ್ತು. ಅದು ನಮಗೆ ಬೇಡ. 2ಎ ಮೀಸಲಾತಿ ನೀಡಬೇಕೆಂದು ಹೋರಾಟ ಮತ್ತೆ ಮುಂದುವರೆಸಿದ್ದೇವೆ ಎಂದರು.
ಸಚಿವ ಸಂಪುಟ ಸಭೆಯಲ್ಲಿ ಲಕ್ಷ್ಮೀ ಹೆಬ್ಬಾಳಕರ್ ಮತ್ತು ಈಶ್ವರ್ ಖಂಡ್ರೆ ಅವರು ಮೀಸಲಾತಿ ಪರವಾಗಿ ನೇರವಾಗಿ ಮಾತನಾಡಿದ್ದಾರೆ. ಈ ಅಧಿವೇಶನದಲ್ಲೂ ಮಾತನಾಡುವ ವಿಶ್ವಾಸವಿದೆ. ಎಲ್ಲರೂ ಸೇರಿ ಧ್ವನಿ ಎತ್ತಿದರೆ ಮುಖ್ಯಮಂತ್ರಿಗಳು ಕ್ರಮಕೈಗೊಳ್ಳುತ್ತಾರೆ. ಇಡೀ ಸಮಾಜವೇ ಅವರ ಜೊತೆಗಿರುತ್ತದೆ ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿಗಳು ಹೇಳಿದರು.
ಈ ವೇಳೆ ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ, ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳಕರ್, ಆರ್.ಕೆ.ಪಾಟೀಲ್, ಗುಂಡು ಪಾಟೀಲ್, ಶಿವಾನಂದ ತಂಬಾಕಿ, ನಂದು ಕಾರಜೋಳ, ಬಸವರಾಜ
ಪಾಟೀಲ್, ಸಿದ್ದನಗೌಡ ಪಾಟೀಲ್, ಆನಂದ ಗುಡಸ, ರಾವಸಾಬ್ ಪಾಟೀಲ್, ರಾಜು ಮಗದುಮ್ಮ, ಬಸವರಾಜ ಕೊಟ್ಟೂರಶೆಟ್ಟಿ, ಸುರೇಶ ಹೊಸಪೇಟ, ಶಿವಪ್ಪ ಸವದಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.