
ದಯವಿಟ್ಟು ಈ ಪರಿಸ್ಥಿತಿಗೆ ತರಬೇಡಿ..! ಕಣ್ಣೀರಿಟ್ಟ ಶ್ರೀಗಳು

ಕೊಪ್ಪಳ : ಕೊಪ್ಪಳ ಗವಿಸಿದ್ದೇಶ್ವರ ಅದ್ಧೂರಿ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಗವಿಮಠದ ಗವಿಸಿದ್ದೇಶ್ವರ ಶ್ರೀಗಳು ಅಕ್ಷರಶಃ ಭಾವುಕರಾದರು. ಭಕ್ತರ ಬಳಿ ಮಹತ್ವದ ಬೇಡಿಕೆ ಇಟ್ಟ ಶ್ರೀಗಳು ಈ ಪರಿಸ್ಥಿತಿಗೆ ತರಬೇಡಿ ಎಂದು ವಿನಂತಿಸಿಕೊಂಡರು.
ಇತ್ತೀಚಿನ ದಿನಗಳಲ್ಲಿ ಗವಿಮಠದ ಶ್ರೀಗಳನ್ನು ರಾಜ್ಯದ ಬೇರೆ, ಬೇರೆ ಸ್ವಾಮೀಜಿ ಗಳಿಗೆ ಹೋಲಿಕೆ ಮಾಡುವುದು, ಮಠವನ್ನು ಹೋಲಿಕೆ ಮಾಡಲಾಗುತ್ತಿದ್ದು, ಇದಕ್ಕೆ ಸ್ವಾಮೀಜಿ ಮಹತ್ವದ ಹೇಳಿಕೆ ಮೂಲಕ ಭಕ್ತರಲ್ಲಿ ಮನವಿ ಮಾಡಿದ್ದಾರೆ. ಅಷ್ಟೇ ಅಲ್ಲದೆ ಗವಿಮಠವನ್ನು ಬೇರೆ ಮಠಗಳಿಗೆ ಹೋಲಿಕೆ ಮಾಡದಂತೆ ಮನವಿ ಮಾಡಿದ್ದಾರೆ.
ಯಾವುದೇ ಸಂಸ್ಥೆಗೆ ಹೆಸರಿಡುವಂತೆ, ನನಗೆ ಪ್ರಶಸ್ತಿ ನೀಡುವಂತೆ ಹಾಗೂ ಬೇರೊಂದು ಮಠದ ಜೊತೆಗೆ ಹೋಲಿಕೆ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಬೇಡಿ ಎಂದು ಗವಿಮಠದ ಗವಿಸಿದ್ದೇಶ್ವರ ಸ್ವಾಮೀಜಿ ಭಕ್ತರಲ್ಲಿ ಮನವಿ ಮಾಡಿದರು.
ನಗರದ ಗವಿಮಠದ ಕೈಲಾಸ ಮಂಟಪದ ವೇದಿಕೆಯಲ್ಲಿ ಆಯೋಜಿಸಿದ್ದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ. ರೈಲ್ವೇ ನಿಲ್ದಾಣ ಸೇರಿ ಯಾವುದೇ ಸಂಸ್ಥೆಗೆ ಗವಿಸಿದ್ದೇಶ್ವರನ ಹೆಸರು ಇಡುವಂತೆ ಅಭಿಯಾನ ಮಾಡುವುದು. ಮತ್ತೊಂದು ಸಂಘ ಬೇಡ ಎನ್ನುವುದು. ಇವೆಲ್ಲ ನನಗೆ ಬೇಡ. ಗವಿಸಿದ್ದೇಶ್ವರ ನಿಮ್ಮ ಉಸಿರಿನಲ್ಲಿ ಇರುವಾಗ ಹೆಸರು ಏಕೆ ಎಂದು ಶ್ರೀಮಠದ ಭಕ್ತರನ್ನು ಗವಿಶ್ರೀ ಪ್ರಶ್ನಿಸುವಾಗ ಕಂಠ ತುಂಬಿ ಗದ್ಗದಿತರಾಗಿದ್ದರು.
ನಾನು ಇಡೀ ನಾಡಿನ ಶರಣರ ಪಾದದ ಧೂಳಾಗಿ ಬದುಕಬೇಕು ಎಂದುಕೊಂಡವನು. ಅದಕ್ಕಾಗಿ ಗವಿಮಠವನ್ನು ಇನ್ನೊಂದು ಮಠದ ಜೊತೆಗೆ, ಶ್ರೀಮಠದ ಸ್ವಾಮೀಜಿಯನ್ನು ಮತ್ತೊಂದು ಮಠದ ಶ್ರೀಗಳ ಜೊತೆಗೆ ಹೋಲಿಕೆ ಮಾಡುವುದು ಸರಿಯಲ್ಲ ಇದನ್ನು ಯಾವುದೇ ಭಕ್ತರು ಮಾಡಬಾರದು ಎಂದು ಭಾವುಕರಾಗಿ ತಾಕೀತು ಮಾಡಿದರು.
ಬರುವ ಪ್ರಶಸ್ತಿ ತಿರಸ್ಕರಿಸುವ ಅರ್ಹತೆ ನನಗೆ ಇಲ್ಲ. ಬೇಡ ಎನ್ನುವ ವಿನಂಭ್ರತೆ ಮಾತ್ರ ಇದೆ. ಅದಕ್ಕಾಗಿ ನನಗೆ ಆ ಪ್ರಶಸ್ತಿ, ಈ ಪ್ರಶಸ್ತಿ ನೀಡಬೇಕು ಎಂದು ಸಮಾಜಿಕ ಜಾಲ ತಾಣದಲ್ಲಿ ಅಭಿಯಾನವನ್ನು ಯಾರೂ ಮಾಡಬಾರದು. ಇನ್ನು ನನ್ನನ್ನು ಯಾವುದೇ ಜಾತಿ- ಧರ್ಮದ ಗೋಜಿಗೆ ಎಳೆದು ತರಬೇಡಿ.
ಎಲ್ಲರನ್ನೂ ಪ್ರೀತಿಸುವುದು ಮತ್ತು ಎಲ್ಲರಿಗೂ ಸೇವೆ ಮಾಡುವುದೇ ನನ್ನ ಧರ್ಮದ ಪರಿಭಾಷೆ. ಅದಕ್ಕಾಗಿ ಜಾತಿ- ಧರ್ಮದ ವಿಚಾರದಲ್ಲಿ ನನ್ನನ್ನು ಎಳೆದು ತರಬೇಡಿ ಎಂದು ಭಕ್ತರಲ್ಲಿ ಮನವಿ ಮಾಡಿದರು.
ಶ್ರೀಮಠ, ಮಠದ ಯಾವುದೇ ಸಂಸ್ಥೆಯಲ್ಲಿ ನನ್ನ ಫೋಟೊ ಇಲ್ಲ. ಬದಲಾಗಿ ಮಠದಲ್ಲಿ ಶಿವಶಾಂತವೀರ ಸ್ವಾಮೀಜಿಗಳ ಫೋಟೊ ಇದೆ. ಮನೆಯಲ್ಲಿ ಮಾಲೀಕರ ಫೋಟೊ ಇರುವಂತೆ ಅವರ ಫೋಟೊ ಇದೆ. ನಾನು ಕೇವಲ ಮನೆಯ ಆಳು ಮಗನಂತೆ. ಇರುವಷ್ಟು ದಿನ ಸೇವೆ ಮಾಡಿಕೊಂಡು ಇರುತ್ತೇನೆ.
ಎಂದು ಗವಿಸಿದ್ದೇಶ್ವರ ಸ್ವಾಮೀಜಿ ಹೇಳಿದ್ದಾರೆ.