ವಂಟಮೂರಿ ಮಹಿಳೆ ಹಲ್ಲೆ ಪ್ರಕರಣ ; ಸಹಾಯಕ್ಕೆ ಬಾರದ ಸಾರ್ವಜನಿಕರಿಗೆ ದಂಡ ಹಾಕುವಂತೆ ಹೈಕೋರ್ಟ್ ಸೂಚನೆ
ಬೆಂಗಳೂರು : ವಂಟಮೂರಿ ಮಹಿಳೆಯನ್ನು ವಿವಸ್ತ್ರಗೊಳಿಸಿದ ಸಂದರ್ಭದಲ್ಲಿ ಸಹಾಯಕ್ಕೆ ಬಾರದೆ ಮೂಕ ಪ್ರೇಕ್ಷಕರಾಗಿ ನಿಂತಿದ್ದ ಗ್ರಾಮಸ್ಥರಿಗೆ ಶಿಕ್ಷೆಯಾಗುವಂತಹ ಅಥವಾ ದಂಡ ವಿಧಿಸಬಹುದಾದ ಯೋಜನೆಯನ್ನು ರೂಪಿಸಿ, ಸಂತ್ರಸ್ತೆಗೆ ಪರಿಹಾರ ನೀಡುವಂತೆ ರಾಜ್ಯ ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.
ಬೆಳಗಾವಿಯ ವಂಟಮೂರಿ ಗ್ರಾಮದಲ್ಲಿ ನಡೆದ ಮಹಿಳೆ ವಿವಸ್ತ್ರ ಪ್ರಕರಣ ಸಂಬಂಧ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಗ್ರಾಮದ ಸಾರ್ವಜನಿಕರ ವರ್ತನೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು.
ಅರ್ಜಿ ವಿಚಾರಣೆಯನ್ನು ಕೆಗೆತ್ತಿಕೊಂಡ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಗಳಾದ ಪ್ರಸನ್ನ.ಬಿ ವರಾಳೆ ಹಾಗೂ ಕೃಷ್ಣ ದೀಕ್ಷಿತ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠ, ಬ್ರಿಟಿಷರ ಕಾಲದಲ್ಲಿದ್ದ ಪುಂಡ ಕಂದಾಯ ತೆರಿಗೆಯನ್ನು ಹಾಕಿ ಸಾರ್ವಜನಿಕರಿಂದ ದಂಡ ವಸೂಲಿ ಮಾಡುವಂತೆ ಸೂಚನೆ ಕೊಟ್ಟಿದೆ.
ಬ್ರಿಟಿಷ್ ಆಡಳಿತದಲ್ಲಿ ವಿಲಿಯಂ ಬೆಂಟಿಂಕ್ ಎಂಬುವರು ಕಳ್ಳತನ ಮಾಡುವವರಿದ್ದ ಗ್ರಾಮಕ್ಕೆ ವಿಭಿನ್ನ ರೀತಿಯ ತೆರಿಗೆಯನ್ನು ವಿಧಿಸುತ್ತಿದ್ದರು. ಅದೇ ರೀತಿಯಲ್ಲಿ ಈಗ ತೆರಿಗೆಯನ್ನು ವಿಧಿಸಿದಲ್ಲಿ ಗ್ರಾಮಗಳಲ್ಲಿ ಜನರಿಗೆ ಸ್ವಲ್ಪ ಜವಾಬ್ದಾರಿ ಹೆಚ್ಚಾಗಲಿದೆ.
ಇಂತಹ ಘಟನೆಗಳು ನಡೆಯುತ್ತಿದ್ದ ಸಂದರ್ಭದಲ್ಲಿ ಜನರು ಮೌನವಾಗಿದ್ದರೆ ನಾಗರಿಕ ಸಮಾಜಕ್ಕೆ ಏನು ಸಂದೇಶ ಹೋಗುತ್ತದೆ ಎಂದು ಪ್ರಶ್ನೆ ಮಾಡಿದ್ದಾರೆ.
ಸ್ವಾರ್ಥದ ಪರ ಹೇಡಿತನ ತೋರಿರುವ ಜನರಿಗೆ ಸಮುದಾಯಿಕ ಹೊಣೆಗಾರಿಕೆ ಏನೆಂಬುದು ತಿಳಿಯಬೇಕು. ಮಹಿಳೆಯನ್ನು ಕಂಡು ಮೂಕ ಪ್ರೇಕ್ಷಕರಾಗಿದ್ದರಿಂದಲೇ ಇದನ್ನು ಸಹಿಸಿಕೊಳ್ಳುವುದಾದರೂ ಹೇಗೆ ಎಂದು ಅಸಮಾಧಾನ ಹೊರಹಾಕಿದ್ದಾರೆ.


