ಧಾರವಾಡ : ಕಾಮುಕ ಪ್ರೊಫೆಸರ್ ಓರ್ವ ವಿದ್ಯಾರ್ಥಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದದ್ದಲ್ಲದೇ ಆಕೆ ಕಾಲೇಜು ಬಿಟ್ಟು ಹೋದ ಬಳಿಕವೂ ಅವಳನ್ನ ಕರೆಯಿಸುವಂತೆ ಇತರ ವಿದ್ಯಾರ್ಥಿಗಳ ಮೇಲೆ ಒತ್ತಡ ಹಾಕುತ್ತಿದ್ದ ಘಟನೆ ಬೆಳಕಿಗೆ ಬಂದಿದೆ.

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಈ ಘಟನೆ ನಡೆದಿದೆ. ಪ್ರೊಫೆಸರ್‌ ದೇವರಾಜ ತಂಗುದೊರೈ ಎಂಬಾತ ವಿದ್ಯಾರ್ಥಿನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಸಸ್ಯಶಾಸ್ತ್ರ ವಿಭಾಗದ ಪ್ರೊಫೆಸರ್ ಆಗಿರುವ ಈತನಿಗೆ ಹುಡುಗಿಯರ ಚಪಲ.

ಈತನ ಬಳಿ ಪಿಹೆಚ್‌ಡಿ ಮಾಡಲು ಬಂದಿದ್ದ ವಿಜಯಪುರ ಮೂಲದ ವಿದ್ಯಾರ್ಥಿನಿಯೋರ್ವಳನ್ನ ಪಟಾಯಿಸಿ ಆಕೆಯೊಂದಿಗೆ ಕಳೆದ ಕೆಲ ವರ್ಷಗಳಿಂದ ದೈಹಿಕ ಸಂಪರ್ಕವನ್ನೂ ಬೆಳೆಸಿದ್ದಾನೆ. ಈ ವಿಷಯ ಆಕೆಯ ಮನೆಯವರಿಗೆ ಗೊತ್ತಾಗ್ತಿದ್ದಂತೆ ಅರ್ಧಕ್ಕೆ ಪಿಹೆಚ್‌ಡಿ ನಿಲ್ಲಿಸಿ ಮನೆಗೆ ಕರೆದುಕೊಂಡು ಹೋಗಿದ್ದಾರೆ.

ಇದರಿಂದ ಸೈಕೋ ರೀತಿ ವರ್ತಿಸುತ್ತಿದ್ದ ಪ್ರೊ.ದೇವರಾಜ್ ಬಳಿ ಅದೇ ವಿಜಯಪುರ ಮೂಲದ ವೇದವ್ಯಾಸ್ ಚೌಹಾಣ್ ಎಂಬುವವರು ಆತನ ಬಳಿ ಪಿಎಚ್‌ಡಿ ಗೈಡ್ ಪಡೆಯಲು ಹೋಗಿದ್ದರು. ಮೊದಮೊದಲು ವೇದವ್ಯಾಸ್‌ಗೆ ಗೈಡ್

ಮಾಡಿರುವ ಪ್ರೊ.ದೇವರಾಜ್, ಪಿಹೆಚ್‌ಡಿ ಮುಗಿಯುವ ಹಂತ ಬಂದಾಗ ತನ್ನನ್ನು ಬಿಟ್ಟು ಹೋದ ಆ ವಿದ್ಯಾರ್ಥಿನಿಯನ್ನ ಮರಳಿ ಕರೆಯಿಸುವಂತೆ ಕಿರುಕುಳ ನೀಡಿದ್ದಾನೆ. ಆಕೆಯನ್ನು ಮರಳಿ ಕರೆಸಿದರೆ ಮಾತ್ರ ಪಿಹೆಚ್‌ಡಿ ಪೂರ್ಣ ಮಾಡಿಕೊಡುತ್ತೇನೆ. ಇಲ್ಲದಿದ್ರೆ ಇಲ್ಲ ಎಂದು ಬೆದರಿಕೆ ಹಾಕಿದ್ದಾನೆ.

ಇದರಿಂದ ಕಂಗಾಲಾದ ವೇದವ್ಯಾಸ್ ಕುಲಸಚಿವರಿಗೆ ಹಾಗೂ ವಿದ್ಯಾರ್ಥಿ ಸಂಘಟನೆಯವರಿಗೆ ದೂರು ನೀಡಿದ್ದಾರೆ. ಅಲ್ಲದೇ ಆ ವಿದ್ಯಾರ್ಥಿನಿ ಜೊತೆಗೆ ತಾನು ಹೇಗಿದ್ದ ಎಂಬುದರ ಕುರಿತಾಗಿಯೂ ವೇದವ್ಯಾಸ್‌ಗೆ ಪ್ರೊ.ದೇವರಾಜ ವಿವರಣೆ ನೀಡಿದ್ದಾನಂತೆ. ಆ ಕುರಿತ ಆಡಿಯೋ, ಫೋಟೋಗಳನ್ನು ಹಂಚಿಕೊಂಡಿದ್ದಾನೆ.

ವಿದ್ಯಾರ್ಥಿನಿ ಜೊತೆಗೆ ತೆಗೆಸಿಕೊಂಡಿದ್ದ ಕೆಲ ಫೋಟೋಗಳನ್ನ ತನ್ನ ಇನ್‌ಸ್ಟಾಗ್ರಾಮ್‌ನಲ್ಲೂ ಹಾಕಿಕೊಂಡಿದ್ದಾನೆ. ಅಲ್ಲದೇ ಆಕೆಗೆ 3 ಬಾರಿ ಅಬಾರ್ಷನ್ ಕೂಡ ಮಾಡಿಸಿದ್ದಾನಂತೆ. ಕಾಮುಕ ಪ್ರೊಫೆಸರ್ ಮೇಲೆ ಶಿಸ್ತು ಕ್ರಮ ಕೈಗೊಂಡು ಆತನನ್ನ ಅಮಾನತು ಮಾಡಬೇಕು. ಪೊಲೀಸರಿಗೆ ದೂರು ನೀಡಬೇಕು ಎಂದು ಕವಿವಿ ವಿದ್ಯಾರ್ಥಿ ಸಂಘಟನೆ ಆಗ್ರಹಿಸಿದೆ. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದೆ.