
ಶಾಸಕರ ಹುಟ್ಟು ಹಬ್ಬ ಆಚರಿಸಲು ಸಾಮೂಹಿಕ ರಜೆ ತಗೆದುಕೊಂಡ ಸರ್ಕಾರಿ ನೌಕರರು

ದಾವಣಗೆರೆ : ಜನರ ಸೇವೆ ಮಾಡಬೇಕಾದ ಸರ್ಕಾರಿ ಅಧಿಕಾರಿಗಳು ಜನಪ್ರತಿನಿಧಿಗಳ ಸೇವೆಗೆ ಮುಂದಾದರೆ ಏನು ಮಾಡಬೇಕು ಎಂಬ ಪರಿಸ್ಥಿತಿ ಜನರಾದ್ದಾಗಿದೆ. ಶಾಸಕರ ಹುಟ್ಟು ಹಬ್ಬ ಆಚರಿಸುವ ಹಿನ್ನಲೆಯಲ್ಲಿ ಸಾಮೂಹಿಕ ರಜೆ ಪಡೆಯುವ ಮೂಲಕ ಈ ಸರ್ಕಾರಿ ಅಧಿಕಾರಿಗಳು ಸುದ್ದಿಯಾಗಿದ್ದಾರೆ.
ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಸರ್ಕಾರಿ ಅಧಿಕಾರಿಗಳು ಶಾಸಕ ಶಿವಗಂಗಾ ಬಸವರಾಜ್ ಹುಟ್ಟು ಹಬ್ಬ ಆಚರಿಸಲು ಸಾಮೂಹಿಕ ರಜೆ ಪಡೆದುಕೊಂಡು ತಿರುಪತಿ ಪ್ರಯಾಣ ಬೆಳೆಸಿದ್ದಾರೆ.
ತಾಲೂಕಿನ ಗ್ರೇಡ್ – ೦೧ ಹಾಗೂ ಗ್ರೇಡ್ – ೦೨ ನ 20 ಕ್ಕೂ ಹೆಚ್ಚು ಅಧಿಕಾರಿಗಳು ಸಾಮೂಹಿಕ ರಜೆ ಪಡೆದ ಪರಿಣಾಮ ಸಾರ್ವಜನಿಕರು ತಮ್ಮ ಕೆಲಸಕ್ಕಾಗಿ ಅಲೆದಾಡುವ ಪರಿಸ್ಥಿತಿ ತಾಲೂಕಿನಲ್ಲಿ ನಿರ್ಮಾಣವಾಗಿದೆ. ಇತ್ತ ಕೆಲಸವೂ ಆಗದೆ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಸರ್ಕಾರಿ ನೌಕರರು ತಿರುಪತಿಗೆ ಹೋಗಿ ಶಾಸಕರ ಹೆಸರಿನಲ್ಲಿ ಪೂಜೆ ಮಾಡಿಸುತ್ತಿಲ್ಲ. ಬದಲಾಗಿ ಶುಕ್ರವಾರ ಶಾಸಕರ ಜನ್ಮದಿನದಂದು ತಿರುಪತಿ ಸಮೀಪದ ರೆಸಾರ್ಟೊಂದರಲ್ಲಿ ಪಾರ್ಟಿ ಮಾಡಲಿದ್ದಾರೆ ಎಂದು ಹೇಳಲಾಗಿದ್ದು, ಇದಕ್ಕಾಗಿ
ಶಕ್ರವಾರದಿಂದ ಎರಡು ದಿನ ರಜೆ ಹಾಕಿದ್ದು, ಭಾನುವಾರ ರಜಾ ದಿನವಾಗಿದ್ದರಿಂದ ಒಟ್ಟಾರೆ ಮೂರು ದಿನ ರಜೆಯ ಮೋಜು ಸವಿದು ಸೋಮವಾರ ಕರ್ತವ್ಯಕ್ಕೆ ಹಾಜರಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಸರ್ಕಾರಿ ಅಧಿಕಾರಿಗಳು ಎರಡು ದಿನ ಸೇವೆಯಲ್ಲಿ ಇಲ್ಲದ ಕಾರಣ ಸಾರ್ವಜನಿಕರು 2 ದಿನ ಸರ್ಕಾರಿ ಕಚೇರಿಗಳಿಗೆ ಅಲೆದಾಡುತ್ತಾ ಶಾಪ ಹಾಕುವಂತಾಗಿದೆ.
ಅಧಿಕಾರಿಗಳು ರಜೆ ಪಡೆಯುವುದು ಅವರ ಹಕ್ಕು. ಆದರೆ ವೈಯಕ್ತಿಕ ಕಾರಣಗಳಿಗಾಗಿ ರಜೆ ಪಡೆಯುವುದು ಸರಿ. ಆದರೆ ಶಾಸಕರ ಬರ್ತಡೆಗಾಗಿ ಮೋಜು ಮಾಡಲು ಸಾಮೂಹಿಕವಾಗಿ ರಜೆ ಹಾಕುವುದು ಎಷ್ಟು ಸರಿ?
ಈ ರೀತಿ ಸಾಮೂಹಿಕವಾಗಿ ರಜೆ ಪಡೆದು ಸಾರ್ವಜನಿಕರಿಗೆ ತೊಂದರೆ ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ರೈತ ಮುಖಂಡ ಹಾಗೂ ಮಾಜಿ ಸಿಎಂ ಪುತ್ರ ತೇಜಸ್ವಿ ಪಾಟೀಲ್ ಪತ್ರ ಬರೆದಿದ್ದಾರೆ.