ಬೆಳಗಾವಿ ಎಸ್ಪಿ ಹೆಸರಿನಲ್ಲಿ ನಕಲಿ ಫೆಸ್ಬುಕ್ ಅಕೌಂಟ್ ತೆರೆದು ಹಣ ಎಗರಿಸಲು ಯತ್ನಿಸಿದ ಖದೀಮರು
ಬೆಳಗಾವಿ : ಸಾಮಾಜಿಕ ಜಾಲತಾಣ ದುರ್ಬಳಕೆ ಮಾಡಿಕೊಂಡು ಹಣ ವಸೂಲಿ ಮಾಡುವ ಗ್ಯಾಂಗ್ ಗೆ ಕಡಿವಾಣ ಇಲ್ಲವಾ ಎಂಬ ಪ್ರಶ್ನೆ ಮೂಡಿದೆ. ಇತ್ತೀಚಿನ ದಿನಗಳಲ್ಲಿ ಹಿರಿಯ ಅಧಿಕಾರಿಗಳು, ರಾಜಕಾರಣಿಗಳು ಹಾಗೂ ಖ್ಯಾತನಾಮರ ಹೆಸರಿನಲ್ಲಿ ನಕಲಿ ಅಕೌಂಟ್ ತೆರೆದು ಹಣ ಎಗರಿಸುವ ಖದೀಮರು ದಿನಗಳೆದಂತೆ ಹೆಚ್ಚಾಗುತ್ತಿದ್ದಾರೆ.
ಹೌದು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೆದ್ ಅವರ ಹೆಸರಿನಲ್ಲಿ ನಕಲಿ ಫೆಸ್ಬುಕ್ ಖಾತೆ ತೆರೆದು ಜನರಿಂದ ಹಣ ಎಗರಿಸುತ್ತಿರುವ ಘಟನೆ ಬೆಳಕಿಗೆ ಬಂದಿದೆ. ಎಸ್ಪಿಯವರ ಭಾವಚಿತ್ರ ಬಳಸಿಕೊಂಡು ಜನರನ್ನು ಕ್ಷಣಾರ್ಧದಲ್ಲಿ ಮಂಗ ಮಾಡುವ ಈ ಗ್ಯಾಂಗ್ ವಿರುದ್ಧ ಸಧ್ಯ ಪ್ರಕರಣ ದಾಖಲಾಗಿದೆ.
ಕೆಲ ದಿನಗಳ ಹಿಂದೆ ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣದ ಸಂತೋಷ್ ಅರಭಾವಿ ಎಂಬುವವರಿಗೆ ಎಸ್ಪಿ ಹೆಸರಿನ ನಕಲಿ ಫೆಸ್ಬುಕ್ ಅಕೌಂಟ್ ನಿಂದ ಮೆಸೆಜ್ ಬಂದಿದೆ. ಮೊದಲಿಗೆ ಪರಿಚಯದ ಮೆಸೇಜ್ ಮಾಡಿ, ಮೋಬೈಲ್ ನಂಬರ್ ಪಡೆದಿದ್ದಾರೆ. ನಂತರ ನಿಮಗೆ ನನ್ನ ಸ್ನೇಹಿತನ ಮೋಬೈಲ್ ನಂಬರ್ ಒಂದನ್ನು ಕೊಡುತ್ತೇನೆ ಅವರ ಜೊತೆ ಮಾತಾಡಿ ಎಂದು ಹೇಳುತ್ತಾನೆ.
ಸಂತೋಷ್ ಕುಮಾರ್ ಎಂಬಾತ ಎಂದು ಹೇಳಿ ಮೆಸೇಜ್ ಮಾಡುವ ವ್ಯಕ್ತಿ, ನಾನು ಸಿ ಆರ್ ಪಿ ಎಫ್ ನಲ್ಲಿ ಕೆಲಸ ಮಾಡುತ್ತಿದ್ದು ಬೇರೆಡೆಗೆ ವರ್ಗಾವಣೆ ಆಗಿದೆ. ಮನೆ ಬಳಕೆ ವಸ್ತುಗಳನ್ನು ಕಡಿಮೆ ಬೆಲೆಗೆ ಕೊಡುತ್ತೇನೆ. 1 ಲಕ್ಷ 20 ಸಾವಿರ ಹಣ ಕೊಟ್ಟರೆ ನಿಮಗೆ ವಸ್ತುಗಳನ್ನು ತಲುಪಿಸುವುದಾಗಿ ಹೇಳಿ ವಂಚನೆಗೆ ಮುಂದಾಗುತ್ತಾರೆ. ಇದೇ ರೀತಿಯಲ್ಲಿ ಹಲವಾರು ಜನರಿಗೆ ಮೋಸ ಮಾಡಿದ್ದು ಬೆಳಕಿಗೆ ಬಂದಿದೆ.
ಕಳೆದ ಕೆಲ ತಿಂಗಳ ಹಿಂದೆ ಬೆಳಗಾವಿ ನಗರದಲ್ಲಿ ಪಿಯು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ನಿಮಗೆ ಎಂಬಿಬಿಎಸ್ ಸೀಟು ಕೊಡಿಸುವುದಾಗಿ ವಂಚಿಸಿ ಕೋಟ್ಯಾಂತರ ರು. ಹಣ ಎಗರಿಸಿದ್ದ. ಈ ಪ್ರಕರಣದಲ್ಲಿ ಪೊಲೀಸರು ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದರು. ಇದೇ ರೀತಿಯಲ್ಲಿ ಇನ್ನೂ ಅನೇಕ ಸೈಬರ್ ಪ್ರಕರಣಗಳು ಹೆಚ್ಚಾಗುತ್ತಿದ್ದು ಜನ ಈ ಕುರಿತು ಮತ್ತಷ್ಟು ಜಾಗೃತರಾಗಬೇಕು.
ಫರ್ನೀಚರ್ ಮಾರುವಷ್ಟು ಸಮಯ ಎಸ್ಪಿಗೆ ಅವರಿಗೆ ಇರುತ್ತಾ…?
ಜನರು ಸೋಶಿಯಲ್ ಮೀಡಿಯಾ ಬಳಕೆ ಮಾಡುವ ಸಂದರ್ಭದಲ್ಲಿ ಕೆಲವು ಸಾಮಾನ್ಯ ಜ್ಞಾನ ಹೊಂದಿರಬೇಕಾಗುತ್ತದೆ. ಒಬ್ಬ ಜಿಲ್ಲೆಯ ಹಿರಿಯ ಅಧಿಕಾರಿಗೆ ತನ್ನದೇ ಕೆಲಸ ಒತ್ತಡ ಇರುತ್ತದೆ. ಈ ಮಧ್ಯೆ ಬೆರೆಯವರ ಫರ್ನಿಚರ್ ಮಾರುವಷ್ಟು ಸಮಯ ಎಲ್ಲಿಂದ ಬರುತ್ತದೆ ಎಂಬ ಸಾಮಾನ್ಯ ತಿಳುವಳಿಕೆ ಅತೀ ಮುಖ್ಯ.
ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡುವ ಸಂದರ್ಭದಲ್ಲಿ ಕೊಂಚ ಅನುಮಾನ ಬಂದರೆ ಸಂಭಂದಿಸಿದವರ ಗಮನಕ್ಕೆ ತರುವುದು ಒಳಿತು. ಹಣ ಕೇಳಿದ ತಕ್ಷಣ ಮೂರ್ಖರಂತೆ ತಲೆ ಅಲ್ಲಾಡಿಸುವ ಬದಲು ಪೂರ್ವಾಪರ ಪರಾಮರ್ಶೆ ಮಾಡುವುದು ತುಂಬಾ ಅವಶ್ಯ. ಸಧ್ಯ ಸೈಬರ್ ವಂಚಕರು ಬಳಸುವ ವಾಮಮಾರ್ಗದ ಕುರಿತು ಅರಿವು ಮೂಡಿಸುವ ಕಾರ್ಯ ನಡೆಯುತ್ತಿದ್ದು, ಜನ ಇನ್ನಷ್ಟು ಜಾಗೃತರಾಗಬೇಕಾದ ಅವಶ್ಯಕತೆ ಇದೆ.
ನಕಲಿ ಫೆಸ್ಬುಕ್ ಖಾತೆ ತೆರೆದು ಹಣಕ್ಕೆ ಭೇಡಿಕೆ ಇಟ್ಟಿದ್ದು ನನ್ನ ಗಮನಕ್ಕೆ ಬಂದಿದೆ. ಈ ಕುರಿತು ಪ್ರಕರಣ ದಾಖಲಾಗಿದೆ. ಸಧ್ಯ ಸೈಬರ್ ವಂಚನೆ ಕುರಿತು ಜನ ಜಾಗೃತರಾಗಬೇಕು. ಸಾಮಾಜಿಕ ಜಾಲತಾಣ ಬಳಸುವಾಗ ಎಚ್ಚರಿಕೆ ವಹಿಸಬೇಕು. ಅನುಮಾನ ಬಂದರೆ ಮುಂದೆ ಬಂದು ಪ್ರಕರಣ ದಾಖಲಿಸಬೇಕು.
ಡಾ. ಭೀಮಾಶಂಕರ ಗುಳೆದ್
ಎಸ್ಪಿ, ಬೆಳಗಾವಿ


