ಬೆಳಗಾವಿ ಡಿಸಿ ಬೆನ್ನಿಗೆ ನಿಂತ ಕನ್ನಡಿಗರು ; ಸಂಸದ ಶೆಟ್ಟರ್ ಮಹತ್ವದ ನಿರ್ಧಾರ
ಬೆಳಗಾವಿ : ಗಡಿ ವಿಚಾರವಾಗಿ ಕನ್ನಡಿಗರಿಗೆ ಪದೇ, ಪದೇ ಅನ್ಯಾಯ ಎಸಗುವ ಮಹಾರಾಷ್ಟ್ರ ನಾಯಕರು ಮತ್ತೊಮ್ಮೆ ಬಾಲ ಬಿಚ್ಚಿದ್ದಾರೆ. ಕಾನೂನು ಪ್ರಕಾರವಾಗಿ ಕೈಗೊಂಡ ನಿರ್ಧಾರ ಪ್ರಶ್ನಿಸಿ ಬೆಳಗಾವಿ ಡಿಸಿ ವಿರುದ್ಧ ಕ್ರಮಕ್ಕೆ ಲೋಕಸಭೆ ಮೆಟ್ಟಿಲೇರಿದ್ದಾರೆ.
ನವೆಂಬರ್ 1 ರಂದು ಬೆಳಗಾವಿಯಲ್ಲಿ ಎಂಇಎಸ್ ಆಚರಿಸುವ ಕರಾಳ ದಿನ ಆಚರಣೆಗೆ ಅವಕಾಶ ನಿರಾಕರಿಸಿದ ಕಾರಣಕ್ಕೆ ಬೆಳಗಾವಿ ಜಿಲ್ಲಾಧಿಕಾರಿ ವಿರುದ್ಧ ಹಕ್ಕು ಉಲ್ಲಂಘನೆ ಪ್ರಕರಣ ದಾಖಲಿಸುವಂತೆ ಸಂಸದ ಧೈರ್ಯಶೀಲ್ ಮಾನೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಗಡಿ ಭಾಗದಲ್ಲಿ ಕನ್ನಡ ಹಾಗೂ ಮರಾಠಿ ಭಾಷಿಕರ ಮಧ್ಯೆ ದ್ವೇಷ ಭಾವನೆ ಬಿತ್ತುವ ಮಹಾರಾಷ್ಟ್ರ ನಾಯಕರಿಂದ ನಗರದ ಕಾನೂನು ಸುವ್ಯವಸ್ಥೆಗೆ ದಕ್ಕೆಯಾಗುತ್ತದೆ ಎಂಬ ಕಾರಣಕ್ಕೆ ಗಡಿ ಪ್ರವೇಶ ನಿಷೇಧ ಹೇರಲಾಗುತ್ತದೆ.
ಆದರೆ ಇದೆಲ್ಲವನ್ನೂ ಬಚ್ಚಿಟ್ಟು ಮಹಾರಾಷ್ಟ್ರದ ಶಿವಸೇನೆ ಸಂಸದ ದೈರ್ಯಶೀಲ ಮಾನೆ ಬೆಳಗಾವಿ ಜಿಲ್ಲಾಧಿಕಾರಿ ವಿರುದ್ಧ ಕ್ರಮಕ್ಕೆ ಲೋಕಸಭಾ ಸ್ಪೀಕರ್ ಅವರಿಗೆ ಮನವಿ ಸಲ್ಲಿಸಿದ್ದನ್ನು ಕರವೇ ಖಂಡಿಸಿದೆ.
ಓಂ ಬಿರ್ಲಾ ಅವರಿಗೆ ಶೆಟ್ಟರ್ ಪತ್ರ : ಬೆಳಗಾವಿ ಜಿಲ್ಲಾಧಿಕಾರಿ ವಿರುದ್ಧ ಮಹಾರಾಷ್ಟ್ರ ಸಂಸದ ದೈರ್ಯಶೀಲ ಮಾನೆ ದೂರು ಪ್ರಕರಣಕ್ಕೆ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಸಂಸದ ಜಗದೀಶ್ ಶೆಟ್ಟರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದಾರೆ.
ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರ ವಿರುದ್ಧ ದಾಖಲಾಗಿರುವ ದೂರಿನ ಅನ್ವಯ ವಿಷಯವನ್ನು ಸಂಪೂರ್ಣವಾಗಿ ಪರಿಗಣಿಸದೆ ಕ್ರಮ ಕೈಗೊಳ್ಳಬಾರದೆಂದು ಮನವಿ ಮಾಡಿದ್ದಾರೆ.

