ಕಾಗವಡ – ಭೀಕರ ರಸ್ತೆ ಅಪಘಾತ ; ಪ್ರತ್ಯೇಕ ಅಪಘಾತದಲ್ಲಿ ಇಬ್ಬರು ಸಾವು
ಕಾಗವಾಡ : ಪೊಲೀಸ್ ಠಾಣೆ ವ್ಯಾಪ್ತಿಯ ಕಾಗವಾಡ-ಶೇಡಬಾಳ ರಸ್ತೆ ಯ ಉಪ್ಪಾರವಾಡಿ ಗ್ರಾಮದ ಬಳಿ ಶೇಡಬಾಳದಿಂದ ಕಾಗವಾಡ ಕಡೆಗೆ ಹೊರಟಿದ್ದ ಬೈಕೊಂದು ಅದೇ ಮಾರ್ಗದಲ್ಲಿ ಹೊರಟಿದ್ದ ಮಾರುತಿ ಸ್ವಿಫ್ಟ್ ಕಾರು ಒಂದಕ್ಕೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಮೇಲೆ ಪ್ರಯಾಣಿಸುತ್ತಿದ್ದ ಮಹಾರಾಷ್ಟ್ರದ ಮಿರಜ್ ತಾಲೂಕಿನ ಸಾವಳಿ ಗ್ರಾಮದ ಮಹಾನಂದಾ ಸಚಿನ್ ಚೌಗುಲೆ (38) ಸ್ಥಳದಲ್ಲಿ ಸಾವನ್ನಪ್ಪಿದ್ದು, ಬೈಕ್ ಸವಾರ ಮೃತಳ ಪತಿ ಸಚಿನ್ ಚೌಗುಲೆ (44) ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಮಿರಜ್ ಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇನ್ನೂ ಮಿರಜ-ಚಿಕ್ಕೋಡಿ ರಸ್ತೆಯ ಶಿರಗುಪ್ಪಿ ಗ್ರಾಮದ ಬಳಿ ರಾಜ್ಯ ರಸ್ತೆ ಸಾರಿಗೆ ಬಸ್ಸಿಗೆ ಬೈಕ್ ಚಾಲಕ ರಾಯಬಾಗ ತಾಲೂಕಿನ ನಿಡಗುಂದಿ ಗ್ರಾಮದ ವಿಠ್ಠಲ್ ಬಸಪ್ಪ ಅಕ್ಕಿಮರಡಿ (50) ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ಎರಡೂ ಘಟನೆಗಳು ಕಾಗವಾಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದ್ದು, ಸ್ಥಳಕ್ಕೆ ಎಎಸ್ಐ ಜೆ.ಎ. ಸೋನಾವನೆ ಭೇಟಿ ನೀಡಿ, ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

