ಮರಾಠಿ ಬರಲ್ಲ ಎಂದಿದ್ದಕ್ಕೆ ಹೊಡೆದರು ಸರ್ ; ಕಣ್ಣೀರಿಟ್ಟ ಕಂಡಕ್ಟರ್
ಬೆಳಗಾವಿ : ಮರಾಠಿ ಮಾತನಾಡಲು ಬರುವುದಿಲ್ಲ ಕನ್ನಡ ಮಾತನಾಡಿ ಎಂದು ಹೇಳಿದ್ದಕ್ಕೆ ಸಿಟ್ಟಿಗೆದ್ದು ಮರಾಠಿ ಭಾಷಿಕ ಯುವಕರ ಗುಂಪು ಸಾರಿಗೆ ಬಸ್ ಚಾಲಕ ಹಾಗೂ ನಿರ್ವಾಹಕನ ಮೇಲೆ ಹಲ್ಲೆ ನಡೆಸಿರುವ ಘಟನೆ ಶುಕ್ರವಾರ ಬೆಳಗಾವಿಯ ಬಾಳೇಕುಂದ್ರಿ ಗ್ರಾಮದಲ್ಲಿ ನಡೆದಿದೆ.
ನಗರದ ಕೇಂದ್ರ ಬಸ್ ನಿಲ್ದಾಣದಿಂದ ಬಾಳೇಕುಂದ್ರಿ ತೆರಳುವ ಬಸ್ ನಲ್ಲಿ ಟಿಕೆಟ್ ವಿಚಾರಕ್ಕೆ ನಿರ್ವಾಹಕ ಮಹಾದೇವ ಹುಕ್ಕೇರಿ ಜೊತೆ ಜಗಳ ಪ್ರಾರಂಭವಾಗಿದೆ. ಕನ್ನಡ ಭಾಷೆಯಲ್ಲಿ ಟಿಕೆಟ್ ತಗೆದುಕೊಳ್ಳಿ ಎಂದು ಹೇಳಿದ್ದಕ್ಕೆ ಸಿಟ್ಟಿಗೆದ್ದ ಯುವಕ
ಮರಾಠಿಯಲ್ಲಿ ಮಾತನಾಡುವಂತೆ ಆಗ್ರಹಿಸಿದ್ದಾನೆ. ಇದಕ್ಕೆ ನಿರ್ವಾಹಕ ವಿರೋಧಿಸಿದ್ದಕ್ಕೆ ಬಾಳೇಕುಂದ್ರಿ ಗ್ರಾಮದಲ್ಲಿ ಹತ್ತಾರು ಯುವಕರು ಸೇರಿ ಚಾಲಕ ಹಾಗೂ ನಿರ್ವಾಹಕನ ಮೇಲೆ ಹಲ್ಲೆ ಮಾಡಿದ್ದಾರೆ.
ಹಲ್ಲೆಗೊಳಗಾದ ಬಸ್ ನಿರ್ವಾಹಕ ಮಹಾದೇವ ಹುಕ್ಕೇರಿ ಸಧ್ಯ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಕುರಿತು ವಿವರಣೆ ನೀಡಿದ ಇವರು. ಕೇಂದ್ರ ಬಸ್ ನಿಲ್ದಾಣದಲ್ಲಿ ಓರ್ವ ಯುವಕ ಹಾಗೂ ಯುವತಿ ಸಾರಿಗೆ ಬಸ್ ಹತ್ತಿದ್ದರು. ಈ
ಸಂದರ್ಭದಲ್ಲಿ ಯುವತಿ ಎರಡು ಟಿಕೆಟ್ ಪಡೆದುಕೊಂಡಿದ್ದಾರೆ.
ಪಕ್ಕದಲ್ಲೇ ಇದ್ದ ಯುವಕನಿಗೆ ಟಿಕೆಟ್ ತೆಗೆದುಕೊಳ್ಳಲು ಹೇಳಿದಾಗ ಆತ ಉಚಿತ ಟಿಕೆಟ್ ಇದೆ ಎಂದು ವಾದಿಸಿದ್ದಾನೆ.
ಈ ಸಂದರ್ಭದಲ್ಲಿ ಟಿಕೆಟ್ ತಗೆದುಕೊಳ್ಳುವಂತೆ ಹೇಳಿದಾಗ ಮರಾಠಿ ಮಾತನಾಡುವಂತೆ ಜಗಳಕ್ಕೆ ನಿಂತಿದ್ದಾನೆ.
ಮರಾಠಿ ಮಾತನಾಡಬೇಕು ಇಲ್ಲವಾದರೆ ಬಾಳೇಕುಂದ್ರಿಯಲ್ಲಿ ನಿನ್ನನ್ನು ನೋಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿದ ಯುವಕ ಸುಳೆಬಾವಿ ದಾಟಿತ್ತಿದ್ದಂತೆ ಹತ್ತಾರು ಜನಕ್ಕೆ ಬಾಳೆಕುಂದ್ರಿಗೆ
ಬರಿವಂತೆ ತಿಳಿಸಿದ್ದಾನೆ. ಬಾಳೇಕುಂದ್ರಿ ಗ್ರಾಮಕ್ಕೆ ಬಸ್ ಬರುತ್ತಿದ್ದಂತೆ ಮರಾಠಿ ಭಾಷಿಕ ಯುವಕರ ಗುಂಪು ನನ್ನ ಹಾಗೂ ಬಸ್ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಕಣ್ಣೀರು ಹಾಕಿದರು.


