ಬೈಲಹೊಂಗಲ ; ಈಶ್ವರನ ಸನ್ನಿಧಿಯಲ್ಲಿ ಅದ್ವೈತ ಶ್ರೇಷ್ಠರ ಸಮಾಗಮ
ಬೈಲಹೊಂಗಲ: ಎತ್ತ ನೋಡಿದರೂ ಜನವೋ ಜನ, ಎಲ್ಲಿ ನೋಡಿದರೂ ಹರ್ಷೋದ್ಗಾರ, ಮಹಾಶರಣರಿಗೆ ನಿರಂತರ ಜೈಕಾರ, ಭಕ್ತರ ಬಾಯಲ್ಲಿ ಓಂ ನಮ: ಶಿವಾಯ ನಾಮಸ್ಮರಣೆ ಇದು ಕಂಡು ಬಂದಿದ್ದು ಭಾನುವಾರ ಪಟ್ಟಣದಲ್ಲಿ ಜನರ ಮನ ರೋಮಾಂಚನಗೊಳಿಸಿತು.
ಪಟ್ಟಣದ ಗೊಂಬಿಗುಡಿ ಈಶ್ವರ ದೇವಸ್ಥಾನದಲ್ಲಿ ಡಾ.ಶಿವಾನಂದ ಭಾರತಿ ಸ್ವಾಮಿಜಿ ಹಾಗೂ ದೇಶದ ವಿವಿಧ ಮೂಲೆಗಳಿಂದ ಆಗಮಿಸಿದ ಮಹಾಮಂಡಲೇಶ್ವರರು, ವಿವಿಧ ಮಠಾಧೀಶರ ಸಾನಿದ್ಯದಲ್ಲಿ ಪೂಜೆ ಸಲ್ಲಿಸಿ, ಜಗದ್ಗುರು ಸಿದ್ದಾರೂಡರ ಕಥಾಮೃಥದ ಶತಮಾನೋತ್ಸವದ ಶೋಭಾಯಾತ್ರೆಗೆ ಚಾಲನೆ ನೀಡಲಾಯಿತು.
ಸುಕ್ಷೇತ್ರ ಇಂಚಲದ ಶ್ರೀ ಶಿವಯೋಗೀಶ್ವರ ಸಾಧು ಸಂಸ್ಥಾನಮಠದ ಡಾ.ಶಿವಾನಂದ ಭಾರತಿ ಸ್ವಾಮಿಜಿ ಅವರ 85 ನೇ ವರ್ಧಂತಿ ಮಹೋತ್ಸವ, ಶ್ರೀಗಳ 55 ನೇ ಪೀಠಾರೋಹಣ, 55 ನೇ ಅಖಿಲ ಭಾರತ ವೇದಾಂತ ಪರಿಷತ ಕಾರ್ಯಕ್ರಮ ನಿಮಿತ್ತ ನಡೆದ ಈ ಭವ್ಯ ಮೆರವಣ ಗೆಯಲ್ಲಿ ಆನೆ ಮೇಲೆ ಸಿದ್ದಾರೂಡರ ಮೂರ್ತಿ, ಬೆಳ್ಳಿ ಸಾರೋಟಿನಲ್ಲಿ ಮಹಾಮಂಡಲೇಶ್ವರರು, ಮಠಾಧೀಶರು, ಜಗದ್ಗುರುಗಳು, ಮಾತೆಯರನ್ನು ಅಲಂಕರಿಸಿದ ಭವ್ಯ ಮೆರವಣಗೆಯು ಪಟ್ಟಣದ ಪ್ರಮುಖ ಬಜಾರ ರಸ್ತೆಯ ಮೂಲಕ ರಾಯಣ್ಣ ವೃತ್ತ, ಬಸ್ ನಿಲ್ದಾಣ, ಇಂಚಲ ಕ್ರಾಸ ಮಾರ್ಗವಾಗಿ ಶ್ರೀಮಠಕ್ಕೆ ತಲುಪಿತು.
ಮೆರವಣಿಗೆ ಉದ್ದಕ್ಕೂ ಸಹಸ್ರಾರು ಸುಮಂಗಲೆಯರು ಕುಂಭಮೇಳ, ಪುಷ್ಪ ಸುರಿಮಳೆ, ಕೇಸರಿ ಪರಪರಿ, ಬಣ್ಣ ಬಣ್ಣದ ಬಲೂನು ಕಟ್ಟಿ ಹಬ್ಬದ ವಾತಾವರಣ ನಿರ್ಮಾಣವಾಗಿ ಜೈ ಕಾರದ ಘೋಷಣೆಗಳು ಮುಗಿಲು ಮುಟ್ಟುವಂತಾಗಿತ್ತು.
ಬೆಳ್ಳಿ ಸಾರೋಟಿನಲ್ಲಿ ಬೀದರನ ಶಿವಕುಮಾರೇಶ್ವರ ಸ್ವಾಮಿಜಿ, ಮುಂಬಯಿ ಹರಿದ್ವಾರದ ಮಹಾಮಂಡಲೇಶ್ವರ ದಿವ್ಯಾನಂದ ಪುರಿಜಿ ಸ್ವಾಮಿಜಿ, ಹೈದ್ರಾಬಾದನ ಸಂಪೂರ್ಣಾನಂದ ಗಿರಿ ಸ್ವಾಮಿಜಿ,
ಉತ್ತರಕಾಶಿ ಮುಂಬೈನ ಸುಖದೇವಾನಂದಗಿರಿ ಸ್ವಾಮಿಜಿ, ತಿರುಪತಿಯ ಸ್ವರೂಪಾನಂದಗಿರಿ ಸ್ವಾಮಿಜಿ, ದೇವರಹುಬ್ಬಳ್ಳಿಯ ಸಿದ್ದ ಶಿವಯೋಗಿಗಳು, ಕಲಬುರ್ಗಿ ಮಾತೋಶ್ರೀ ಲಕ್ಷ್ಮೀದೇವಿ, ರಾಣೆಬೆನ್ನೂರಿನ ಮಲ್ಲಯ್ಯ ಸ್ವಾಮಿಜಿ, ದಾವಣಗೆರೆಯ ಶಿವಾನಂದ ಸ್ವಾಮಿಜಿ, ಮಲ್ಲಾಪುರದ ಚಿದಾನಂದ ಸ್ವಾಮಿಜಿ, ದೇವದುರ್ಗ ಶಾಸಕಿ ಜಿ.ಕರೆಯಮ್ಮ ಇದ್ದರು.
ಈ ಸಂದರ್ಭದಲ್ಲಿ ಶಾಸಕ ಮಹಾಂತೇಶ ಕೌಜಲಗಿ, ಮಾಜಿ ಶಾಸಕ ಮಹಾಂತೇಶ ದೊಡಗೌಡರ, ಉದ್ಯಮಿ ವಿಜಯ ಮೆಟಗುಡ್ಡ, ತಹಸೀಲ್ದಾರ ಎಚ್.ಎನ್.ಶಿರಹಟ್ಟಿ, ಚಿತ್ರನಟ ಶಿವರಂಜನ ಬೋಳನ್ನವರ, ಪುರಸಭೆ ಸದಸ್ಯ ಬಸವರಾಜ ಜನ್ಮಟ್ಟಿ, ಸಮಾಜ ಸೇವಕ ನಾಗಪ್ಪ ಮೇಟಿ, ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು, ಅಂಗ ಸಂಸ್ಥೆಗಳ ಎಲ್ಲ ಸಿಬ್ಬಂದಿ ವರ್ಗ, ರಾಜ್ಯ ಹಾಗೂ ಹೊರ ರಾಜ್ಯದಿಂದ ಆಗಮಿಸಿದ ಭಕ್ತರು ಇದ್ದರು.


