ಬೈಲಹೊಂಗಲದಲ್ಲಿ ಸಂಭ್ರಮದಿಂದ ರಂಜಾನ್ ಹಬ್ಬ ಆಚರಣೆ
ಬೈಲಹೊಂಗಲ: ಬಡ ಜನತೆಯ ಬದುಕು ಹಸನಾಗಿ ಹೊಸ ಬದುಕು ಕಟ್ಟಿಕೊಳ್ಳಲು ಅಲ್ಲಾನು ಆಶೀರ್ವದಿಸಲೆಂದು ಮೌಲಾನಾ ಹಾಫೀಜ್ ಕೊರವಿನಕೊಪ್ಪ ಹೇಳಿದರು.
ಪಟ್ಟಣದ ಈದ್ಗಾ ಮೈದಾನದಲ್ಲಿ ರಂಜಾನ್ ಹಬ್ಬ ಅಂಗವಾಗಿ ಗುರುವಾರ ನಡೆದ ಮುಸ್ಲಿಂ ಸಮಾಜ ಬಾಂಧವರ ಸಾಮೂಹಿಕ ಪ್ರಾರ್ಥನೆ ನೇತೃತ್ವವಹಿಸಿ ಅವರು ಮಾತನಾಡಿದರು.
ಪ್ರಕೃತಿ ಮಾತೆ ಮುನಿದರೆ ಏನೆಲ್ಲಾ ಸಂಕಷ್ಟಗಳು ಎದುರಾಗುತ್ತವೆ ಎಂಬುವುದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಮಾನವನ ದುರಾಸೆಯಿಂದ ಅರಣ್ಯ ನಾಶ ಮಾಡಿ ತಮ್ಮ ಜೀವನಕ್ಕೆ ನಾವೇ ಕುತ್ತು ತಂದುಕೊಳ್ಳುತ್ತಿರುವುದು ದುಃಖದ ಸಂಗತಿಯಾಗಿದೆ.
ಇನ್ನಾದರೂ ಪ್ರತಿಯೊಬ್ಬರು ಪ್ರಕೃತಿ ಮಾತೆಗೆ ಕೇಡು ಬಯಸದೆ ಸಸಿಗಳನ್ನು ನೆಟ್ಟು, ಅವುಗಳ ಲಾಲನೆ, ಪೋಷಣೆ ಮಾಡಿ ಪ್ರಕೃತಿ ಸಂಪತ್ತನ್ನು ಉಳಿಸಿ, ಬೆಳೆಸಿಕೊಂಡು ಹೋಗಬೇಕು. ಸಮಾಜದಲ್ಲಿ ಶಾಂತಿ, ಸಹಬಾಳ್ವೆ, ಸಹೋದರತೆ, ಸೌಹಾರ್ದತೆ ಸದಾಕಾಲ ಇರಬೇಕು. ಈ ವರ್ಷ ಮಳೆ, ಬೆಳೆ ಚನ್ನಾಗಿ ಆಗಿ ನಾಡು ಸಮೃದ್ಧಿಯಿಂದ ಕೂಡಿರಲೆಂದು ಅಲ್ಲಾಹುವಿನಲ್ಲಿ ಪ್ರತಿಯೊಬ್ಬರು ಶ್ರದ್ಧೆ, ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಬೇಕು ಎಂದರು.
ಮೌಲಾನಾ ಉಭೇದುಲ್ಲಾಸಾಬ ಪ್ರಾರ್ಥಿಸಿದರು. ಮೌಲಾನಾ ಮಾಝ್ ನಮಾಜ ಮಾಡಿಸಿದರು. ಸಮಾಜ ಮುಖಂಡರಾದ ಜೆ.ಡಿ.ಬಾಗವಾನ, ಅಬ್ದುಲ್ರಹಿಮ್ ಹುಬ್ಬಳ್ಳಿ, ಅಕ್ಬರ್ ತಾಳಿಕೋಟಿ, ಡಾ.ಐಜಾಜ್ ಬಾಗೇವಾಡಿ, ಅಕ್ತರ ತಾಳಿಕೋಟಿ, ಜೆ.ಕೆ.ರೀಝಾ, ಝಡ್.ಎ.ಗೋಕಾಕ, ಅಬ್ದುಲ್ವಹಾಬ ಗದಗ, ಬುಡ್ಡೇಸಾಬ ಶಿರಸಂಗಿ, ಆರ್.ಎ.ಅರಭಾವಿ, ಮಹ್ಮದಷಾ ನದಾಫ, ಎಂ.ಎಂ.ಲೋದಿ,
ಬಾಬುಸಾಬ ಸುತ್ತಗಟ್ಟಿ, ನಿಸ್ಸಾರಅಹ್ಮದ ತಿಗಡಿ, ಹಸನ್ ಗೊರವನಕೊಳ್ಳ, ಮಹ್ಮದಶಫೀ ಅಂಕಲಗಿ, ಜಮೀಲಅಹ್ಮದ ಸಂಗೊಳ್ಳಿ, ಅಣ್ಣಾಸಾಹೇಬ ಶೇಖ್, ಬಾಬುಸಾಬ ಸಂಗೊಳ್ಳಿ, ಸುಭಾನಿ ಸಯ್ಯದ, ಕೆ.ಐ.ಮುಲ್ಲಾ, ಆರ್.ಎಫ್.ಮಾಗಿ, ಶರೀಫ ನದಾಫ, ಯುನಸ್ ಬಡೇಘರ, ೧೧ ಮಸೀದಿಗಳ ಹಿರಿಯರು, ಮುಖಂಡರು, ಯುವಕರು, ಸಂಘಟನೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಪ್ರಮುಖ ಬಜಾರ ರಸ್ತೆಯಿಂದ ರಾಯಣ್ಣ ವೃತ್ತ, ಬಸ್ ನಿಲ್ದಾಣ, ಇಂಚಲ ಕ್ರಾಸ್ ಮಾರ್ಗವಾಗಿ ಅಲ್ಲಾನ ಪ್ರಾರ್ಥನೆಯೊಂದಿಗೆ ಮುಸ್ಲಿಂ ಸಮಾಜ ಬಾಂಧವರು ಈದ್ಗಾ ಮೈದಾನಕ್ಕೆ ತೆರಳಿ ಶ್ರದ್ಧೆ, ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿದರು. ಶಾಸಕ ಮಹಾಂತೇಶ ಕೌಜಲಗಿ ಮುಸ್ಲಿಂ ಬಾಂಧವರ ಮೆರವಣ ಗೆಗೆ ಪುಷ್ಪ ಮಳೆ ಸುರಿಸಿದರು. ಈದ್ಗಾ ಮೈದಾನದಲ್ಲಿ ಮಕ್ಕಳು, ಯುವಕರು ಹೊಸ ಭಟ್ಟೆ ತೊಟ್ಟು ಹಬ್ಬದ ಸಂಭ್ರಮ ಸವಿದರು. ಡಿವೈಎಸ್ಪಿ ರವಿ ನಾಯಕ ನೇತೃತ್ವದಲ್ಲಿ ಸಿಪಿಐ ಎಂ.ಎಸ್.ಹೂಗಾರ ಬಿಗಿ ಪೊಲೀಸ್ ಬಂದುಬಸ್ತ್ ಕೈಕೊಂಡಿದ್ದರು.


