ಬೆಳಗಾವಿ : ಲೋಕೋಪಯೋಗಿ ಇಲಾಖೆಯ ಸಚಿವ ಸತೀಶ್ ಜಾರಕಿಹೊಳಿ ಅವರ ಅಳಿಯನ ಮನೆ ಮೇಲೆ ನಡೆದ ಇಡಿ ದಾಳಿ ಪ್ರಕರಣದ ಬೆನ್ನಲ್ಲೇ, ಬೆಳಗಾವಿ ಅಬಕಾರಿ ಹೆಚ್ಚುವರಿ ಆಯುಕ್ತ ವೈ. ಮಂಜುನಾಥ ಅವರ ನಿವಾಸದ ಮೇಲೂ ಇಡಿ ಅಧಿಕಾರಿಗಳು ಸುದೀರ್ಘ ಶೋಧ ಕಾರ್ಯ ನಡೆಸಿದ್ದಾರೆ.

ನಗರದ ಟಿವಿ ಸೆಂಟರ್ ಪ್ರದೇಶದಲ್ಲಿರುವ ಮಂಜುನಾಥ ಅವರ ಮನೆಯಲ್ಲಿ ನಿನ್ನೆ ಬೆಳಗ್ಗೆ 5.30ರಿಂದ ಗುರುವಾರ ಬೆಳಗ್ಗೆ 6 ಗಂಟೆಯವರೆಗೆ, ಸುಮಾರು 24 ಗಂಟೆಗಳ ಕಾಲ ನಿರಂತರವಾಗಿ ಪರಿಶೀಲನೆ ನಡೆದಿದೆ.

ಶೋಧ ಕಾರ್ಯದ ಅವಧಿಯಲ್ಲಿ ಅಧಿಕಾರಿಗಳು ಮನೆಯಿಂದ ಹೊರಗೆ ತೆರಳದೇ ಉಪಹಾರ ಹಾಗೂ ಊಟವನ್ನು ಮನೆಗೆ ತರಿಸಿಕೊಂಡೇ ದಾಖಲೆಗಳ ತಪಾಸಣೆ ನಡೆಸಿದರು. ಇದೇ ವೇಳೆ ಮನೆಯಲ್ಲಿ ಇದ್ದ ಮಂಜುನಾಥ ಅವರ ಪತ್ನಿಯನ್ನೂ ವಿಚಾರಣೆ ನಡೆಸಿ, ಹಲವು ಮಹತ್ವದ ಪ್ರಶ್ನೆಗಳನ್ನು ಕೇಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಶೋಧದ ವೇಳೆ ಬೇನಾಮಿ ಬಾರ್ ಪರವಾನಗಿ ಸಂಬಂಧಿತ ದಾಖಲೆಗಳು, ಅಕ್ರಮ ಆಸ್ತಿ ದಾಖಲೆಗಳು, ಚಿನ್ನ ಹಾಗೂ ಬೆಳ್ಳಿ ಪತ್ತೆಯಾಗಿರುವ ಮಾಹಿತಿ ಲಭ್ಯವಾಗಿದೆ.

ಬೆಳಗಾವಿಯ 6 ಕಡೆ ಸೇರಿದಂತೆ ರಾಜ್ಯದ ಒಟ್ಟು 10 ಕಡೆಗಳಲ್ಲಿ ಏಕಕಾಲದಲ್ಲಿ ನಡೆದ ಇಡಿ ದಾಳಿಯಲ್ಲಿ ಮಹತ್ವದ ದಾಖಲೆಗಳು ಹಾಗೂ ಮಾಹಿತಿ ಅಧಿಕಾರಿಗಳ ಕೈ ಸೇರಿರುವುದಾಗಿ ತಿಳಿದುಬಂದಿದೆ.