Select Page

ಹರಿಹರ ಪಂಚಮಸಾಲಿ ಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಚಾಟನೆ ; ಟ್ರಸ್ಟಿಗಳಿಂದ ಮಹತ್ವದ ‌ನಿರ್ಧಾರ…!

ಹರಿಹರ ಪಂಚಮಸಾಲಿ ಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಚಾಟನೆ ; ಟ್ರಸ್ಟಿಗಳಿಂದ ಮಹತ್ವದ ‌ನಿರ್ಧಾರ…!



ದಾವಣಗೆರೆ : ಹರಿಹರ ಪಂಚಮಸಾಲಿ ಪೀಠದಲ್ಲಿ (Panchamasali Jagadguru Peetha) ಭಾರೀ ಹೈಡ್ರಾಮಾ ನಡೆದಿದೆ. ಲೆಕ್ಕ ಕೊಡಿ ಅಭಿಯಾನ ತೀವ್ರಗೊಂಡ ಬೆನ್ನಲ್ಲೇ ವಚನಾನಂದ ಶ್ರೀಗಳನ್ನು (Vachanananda Swamiji) ಪೀಠದಿಂದ ಉಚ್ಚಾಟನೆ ಮಾಡಲು ಟ್ರಸ್ಟಿಗಳು ಇಂದಿನ ಸಭೆಯಲ್ಲಿ ನಿರ್ಧರಿಸಿದ್ದಾರೆ.

ʻಲೆಕ್ಕ ಕೊಡಿʼ ಅಭಿಯಾನದ ತೀವ್ರಗೊಂಡ ಬೆನ್ನಲ್ಲೇ ಇಂದು ನಡೆಸಿದ ಸಭೆಯಲ್ಲಿ 15 ಟ್ರಸ್ಟಿಗಳ ಪೈಕಿ 13 ಮಂದಿ ಭಾಗವಹಿಸಿ ನಿರ್ಣಯ ಕೈಗೊಂಡಿದ್ದಾರೆ. ಮಠದ ಟ್ರಸ್ಟಿಗಳು ನಿರ್ಣಯ ಕೈಗೊಂಡು ಸ್ವಾಮೀಜಿಗಳನ್ನ ಪೀಠದಿಂದ ಉಚ್ಛಾಟಿಸಲಾಗಿದೆ ಎಂದು ಟ್ರಸ್ಟಿ ಬಸವರಾಜ್ ದಿಂಡೂರು ಮಾಧ್ಯಮಗಳಿಗೆ ತಿಳಿಸಿದ್ದಾರೆ. 

ಸರ್ಕಾರದಿಂದ (Karnataka Government) 2008 ರಿಂದ ಬಂದ ಅನುದಾನ ಹಾಗೂ ಭಕ್ತರ ದೇಣಿಗೆ ಹಣವನ್ನ ಟ್ರಸ್ಟಿಗಳು ದುರ್ಬಳಕೆ ಮಾಡಿಕೊಂಡಿದ್ದಾರೆ. ಪ್ರಧಾನ ಧರ್ಮಧರ್ಶಿ ಬಿಸಿ ಉಮಾಪತಿ, ಟ್ರಸ್ಟಿ ಚಂದ್ರಶೇಖರ್ ಪೂಜಾರ್ ಸೇರಿದಂತೆ ಹಲವು ಟ್ರಸ್ಟಿಗಳ ವಿರುದ್ಧ ಹಣ ದುರ್ಬಳಕೆ ಆರೋಪ ಹೊರಿಸಲಾಗಿದೆ.

ಕಳೆದ ಕೆಲ ದಿನಗಳ ಹಿಂದೆ ನಡೆದ ಟ್ರಸ್ಟಿಗಳ ಸಭೆಯಲ್ಲಿ ಗಲಾಟೆಯಾಗಿ ಆಡಳಿತಾಧಿಕಾರಿ ಮೇಲೆ ಹಲ್ಲೆ ನಡೆದಿತ್ತು. ಲೆಕ್ಕ ಕೇಳಿದ್ದಕ್ಕೆ ಟ್ರಸ್ಟಿಗಳೇ ಆಡಳಿತಾಧಿಕಾರಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆಡಳಿತಾಧಿಕಾರಿ ರಾಜ್‌ಕುಮಾರ್‌ ಆರೋಪಿಸಿದ್ದರು. ಅಂದಿನಿಂದ ಲೆಕ್ಕ ಕೊಡಿ ಅಭಿಯಾನ ಆರಂಭಿಸಲಾಗಿತ್ತು.

ಹರಿಹರ ಪಂಚಮಸಾಲಿ ಪೀಠದ ಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಇಂದು ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಲಿಂಗಾಯತ ಗುರುಪೀಠದ ಧರ್ಮದರ್ಶಿ ಮಂಡಳಿ ಹಾಗೂ ಭಕ್ತರ ನಡುವಿನ ಸಂಘರ್ಷ ಮಠದ ಆವರಣದಲ್ಲಿ ಹೈಡ್ರಾಮಾ ಸೃಷ್ಟಿಸಿತ್ತು. ಹೀಗಾಗಿ ಮಠದ ಆವರಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು, ಪೀಠದ ಆಡಳಿತ ಮತ್ತು ನಡೆಯ ಬಗ್ಗೆ ಲೆಕ್ಕಪತ್ರ ನೀಡುವಂತೆ ಭಕ್ತರು ಆಗ್ರಹಿಸಿದ್ದರು.

ಇಂದು ಪಂಚಮಸಾಲಿ ಗುರುಪೀಠದಲ್ಲಿ ನಡೆದ ಟ್ರಸ್ಟಿಗಳ ಸಭೆಯಲ್ಲಿ ಮಠದ ಭಕ್ತರು ಹಾಗೂ ಟ್ರಸ್ಟಿಗಳ ನಡುವೆ ವಾಗ್ವಾದ ನಡೆದಿತ್ತು. ಈ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಮಠದ ಆವರಣ ಸುತ್ತ 163 ಕಲಂ ಅನ್ವಯ ತಹಶೀಲ್ದಾರ್‌ ಸಂತೋಷ್‌ ಕುಮಾರ್‌ ನಿಷೇದಾಜ್ಞೆ ಜಾರಿಗೊಳಿಸಿದ್ದರು.

ಆದಾಗ್ಯೂ ಮಠದ ಗೇಟ್‌ ಬಳಿಯೇ ಭಕ್ತರು ಪ್ರತಿಭಟನೆ ನಡೆಸಿದ್ದರು. ಈ ವೇಳೆ 100ಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ಪಡೆದರು. ಇದರ ಮಧ್ಯೆ ಸಭೆ ನಡೆಸಿದ ಟ್ರಸ್ಟಿಗಳು ವಚನಾನಂದ ಶ್ರೀಗಳನ್ನು ಉಚ್ಛಾಟಿಸಲು ನಿರ್ಧಾರ ತೆಗೆದುಕೊಂಡರು.

ಇನ್ನೂ ಈ ವಿಚಾರಕ್ಕೆ ಸಂಬಂಧಿಸಿದಂತೆ ಪಂಚಮಸಾಲಿ ಗುರುಪೀಠದ ಟ್ರಸ್ಟಿ ಬಾವಿ ಬೆಟ್ಟಪ್ಪ ಮಾತನಾಡಿದ್ದು, ಸ್ವಾಮೀಜಿಗಳನ್ನು ತೆಗೆದು ಹಾಕಲು ಸರ್ವ ಟ್ರಸ್ಟಿಗಳ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ಸ್ವಾಮೀಜಿಗಳಿಗೆ ಒಂದು ನಿರ್ಣಯಕ್ಕೆ ಬನ್ನಿ ಎಂದು ಗಡುವು ನೀಡಿದ್ದೇವು. 

ಮಾರ್ಚ್ 24 ಕ್ಕೆ ನಿರ್ಣಯಕ್ಕೆ ಗಡುವು ನೀಡಿದ್ದೆವು, ಇದರ ಬಗ್ಗೆ ಯಾವುದೇ ಮಾಹಿತಿ ನೀಡಿದ ಹಿನ್ನೆಲೆ ಉಚ್ಛಾಟನೆ ನಿರ್ಧರಿಸಲಾಯಿತು. ನೀವು ಶ್ವಾಸ ಪೀಠದಲ್ಲಿ ಇರಬೇಕು ಇಲ್ಲ ಹರಿಹರ ಪಂಚಮಸಾಲಿ ಪೀಠದಲ್ಲಿ ಇರಬೇಕು ಎಂದು ಗಡುವು ನೀಡಲಾಗಿತ್ತು. ಆದರೆ ಎರಡು ಕಡೆ ಒಮ್ಮತ ಇರುವುದರಿಂದ ತೆಗೆದುಹಾಕಲಾಗಿದೆ. ಸ್ವಾಮಿಜಿಗಳು ಗೌರವಯುತವಾಗಿ ಮಠವನ್ನ ಬಿಡಬೇಕು ಎಂದು ಮನವಿ ಮಾಡಲಾಗಿದೆ.

Advertisement

Leave a reply

Your email address will not be published. Required fields are marked *

error: Content is protected !!