CRIME : ಪ್ರೇಮ ಪ್ರಕರಣ ಬಹಿರಂಗವಾದ ಬೆನ್ನಲ್ಲೇ ಯುವತಿ ಸಾವು – ಮದುವೆ ರದ್ದಾಗಿದ್ದಕ್ಕೆ ಮನನೊಂದು ಆತ್ಮಹ*ತ್ಯೆ!
ವಿಜಯಪುರ ಜಿಲ್ಲೆಯಲ್ಲಿ ಮದುವೆ ನಿಶ್ಚಯವಾಗಿದ್ದ ಯುವತಿಯೊಬ್ಬಳು ಅವಮಾನ ತಡೆಯಲು ಆಗದೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಮನಕಲಕುವ ಘಟನೆ ನಡೆದಿದೆ.
ಪ್ರೇಮ ಪ್ರಕರಣವನ್ನು ಹಳೆಯ ಪ್ರಿಯಕರನೇ ಮದುವೆ ಆಗಲಿದ್ದ ವರನ ಕಡೆಯವರಿಗೆ ಹೇಳಿದ ಹಿನ್ನೆಲೆಯಲ್ಲಿ, ಅವಮಾನ ತಾಳಲಾರದೆ ಸಿಂದಗಿ ತಾಲೂಕಿನ ಬಂದಾಳ ಗ್ರಾಮದ ಜಯಶ್ರೀ ಬಿರಾದಾರ್ (22) ಎಂಬ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಜಯಶ್ರೀಗೆ ಇದೇ ಏಪ್ರಿಲ್ 27ರಂದು ವಿವಾಹವಾಗಲು ಸಕಲ ಸಿದ್ಧತೆಗಳು ನಡೆದಿದ್ದವು. ಮನೆಯಲ್ಲಿ ಮದುವೆಯ ಸಂಭ್ರಮ ಮನೆಮಾಡಿತ್ತು. ಆದರೆ ಅಷ್ಟರಲ್ಲೇ ಹಳೆಯ ಪ್ರಿಯಕರ ಶ್ರೀಶೈಲ್ ಬಡಾನೂರ್ ಎಂಬಾತನ ಕಿಡಿಗೇಡಿತನ ಯುವತಿಯ ಪ್ರಾಣಕ್ಕೆ ಕುತ್ತು ತಂದಿದೆ.
ಮೃತ ಜಯಶ್ರೀ ತನ್ನೊಂದಿಗೆ ಇದ್ದ ಫೋಟೋಗಳನ್ನು ಶ್ರೀಶೈಲ್ ಮದುವೆ ನಿಶ್ಚಯವಾಗಿದ್ದ ವರನ ಮನೆಯವರಿಗೆ ಕಳುಹಿಸಿದ್ದಾನೆ. ಜಯಶ್ರೀ ಬೇರೆ ಯುವಕನ ಜೊತೆ ಇರುವ ಫೋಟೋಗಳನ್ನು ಕಂಡ ವರನ ಕಡೆಯವರು ಕೂಡಲೇ ಮದುವೆಯನ್ನು ರದ್ದುಗೊಳಿಸಿದ್ದಾರೆ. ಇದರಿಂದ ಕಂಗಾಲಾದ ಯುವತಿ, ತನ್ನ ಪ್ರೀತಿಯ ಬಗ್ಗೆ ಗೊತ್ತಾಯಿತು, ಮತ್ತು ಮದುವೆ ಮುರಿದು ಬಿದ್ದಿದ್ದರಿಂದ ತನ್ನ ಮಾನ-ಮರ್ಯಾದೆ ಹೋದಂತಾಯಿತು ಎಂದು ತೀವ್ರವಾಗಿ ಮನನೊಂದಿದ್ದಳು.
ಈ ಘಟನೆಯಿಂದ ತೀವ್ರ ಬೇಸರದಲ್ಲಿದ್ದ ಜಯಶ್ರೀ ಅವಮಾನ ಮತ್ತು ಮರ್ಯಾದೆಗೆ ಅಂಜಿ ಬಂದಾಳ ಗ್ರಾಮದ ಮದಿನಾ ಮಸೀದಿ ಪಕ್ಕದಲ್ಲಿರುವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಬಾವಿಯಲ್ಲಿ ಯುವತಿಯ ಶವ ಪತ್ತೆಯಾಗಿದೆ.
ತನ್ನ ಮಗಳ ಸಾವಿಗೆ ಶ್ರೀಶೈಲ್ ಕಾರಣ ಎಂದು ಜಯಶ್ರೀ ತಾಯಿ ಸಾವಿತ್ರಿ ಆಕ್ರೋಶ ಹೊರಹಾಕಿದ್ದು, ಮಗಳ ಬಲಿ ಪಡೆದ ಆತನನ್ನು ತಕ್ಷಣವೇ ಬಂಧಿಸಬೇಕೆಂದು ಆಗ್ರಹಿಸಿದ್ದಾರೆ. ಗ್ರಾಮದಲ್ಲಿ ಈ ಘಟನೆಯಿಂದಾಗಿ ಶೋಕದ ಛಾಯೆ ಆವರಿಸಿದೆ.

