ಗೃಹಲಕ್ಷ್ಮೀ ಹಣದಲ್ಲಿ “ಬೋರವೆಲ್” ಕೊರೆಸಿದ ಅತ್ತೆ, ಸೊಸೆ ಕಾರ್ಯಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹರ್ಷ….!
ಬೆಳಗಾವಿ : ಗೃಹಲಕ್ಷ್ಮೀ ಯೋಜನೆ ಹಣ ನೀಡುವ ಮೂಲಕ ಸರ್ಕಾರ ಅತ್ತೆ-ಸೊಸೆ ನಡುವೆ ಜಗಳ ತಂದಿಡುವ ಕೆಲಸ ಮಾಡುತ್ತಿದೆ ಎಂದು ಆರೋಪಿಸುತ್ತಿದ್ದ ವಿಪಕ್ಷಗಳಿಗೆ ಗದಗದ ಅತ್ತೆ-ಸೊಸೆ ಗೃಹಲಕ್ಷ್ಮೀ ಹಣ ಕೂಡಿಟ್ಟು ಬೋರ್ ವೆಲ್ ಕೊರೆಸಿ ಉತ್ತರ ನೀಡಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.
ಭಾನುವಾರ ಗೃಹ ಕಚೇರಿಯಲ್ಲಿ ಮಾತನಾಡಿದ ಅವರು, ಗದಗದ ಅತ್ತೆ, ಸೊಸೆ ಎಲ್ಲರಿಗೂ ಮಾದರಿ ಆಗಿದ್ದಾರೆ ಎಂದರು.
ಗದಗ ಜಿಲ್ಲೆಯ ಗಜೇಂದ್ರಗಡದ ಅತ್ತೆ, ಸೊಸೆ ಕಾರ್ಯ ನೋಡಿ ತುಂಬಾ ಖುಷಿ ಆಯಿತು. ಗೃಹಲಕ್ಷ್ಮೀ ಯೋಜನೆಯ ಹಣ ಅತ್ತೆಗೊ, ಸೊಸೆಗೊ ಎಂದು ಹೇಳುವ ಮೂಲಕ ವಿರೋಧ ಪಕ್ಷದವರು ಜಗಳ ಹಚ್ಚುವ ಕೆಲಸ ಮಾಡುತ್ತಿದ್ದರು. ಈಗ ಅತ್ತೆ, ಸೊಸೆ ಇಬ್ಬರೂ ಕೂಡಿಟ್ಟ ಹಣದಿಂದ ಬೊರವೆಲ್ ಕೊರೆಸಿ, ಮಾದರಿಯಾಗಿದ್ದಾರೆ ಎಂದರು.
ಬೋರ್ ವೆಲ್ ನಿಂದ ನೀರು ಹರಿಸಿ, ವ್ಯವಸಾಯ ಮಾಡುತ್ತಿದ್ದಾರೆ. ಗದಗದ ಅತ್ತೆ, ಸೊಸೆ ನಿಜವಾಗಿಯೂ ಆದರ್ಶವಾದಿಗಳು ಆಗಿದ್ದಾರೆ. ಮಹಿಳೆಯರ ಆರ್ಥಿಕ ಸಬಲೀಕರಣ ಮಾಡುವ ಸಲುವಾಗಿ ಎರಡು ಸಾವಿರ ಹಣ ಕೊಡಲಾಗುತ್ತಿದೆ. ಈ ರೀತಿಯ ಹಣವನ್ನ ಕೂಡಿಟ್ಟು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.
ಐತಿಹಾಸಿಕ ಗಾಂಧಿ ಭಾರತ ಕಾರ್ಯಕ್ರಮ : ಇದೇ 26,27 ರಂದು ಬೆಳಗಾವಿಯಲ್ಲಿ ನಡೆಯಲಿರುವ ಎಐಸಿಸಿ ಅಧಿವೇಶನ ಐತಿಹಾಸಿಕ ಕಾರ್ಯಕ್ರಮವಾಗಲಿದೆ. ಮಹಾತ್ಮಗಾಂಧಿ ಅವರ ಸಾರಥ್ಯದಲ್ಲಿ ನಡೆದ ಏಕೈಕ ಅಧಿವೇಶನ ಅದಾಗಿತ್ತು. ಆ ಅಧಿವೇಶನ 100 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಇದೀಗ ಎರಡು ದಿನಗಳ ಕಾಲ ಅದ್ದೂರಿ ಕಾರ್ಯಕ್ರಮ ನಡೆಯಲಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
***************
ಗೃಹಲಕ್ಷ್ಮಿ ಹಣದಿಂದ ಬೋರವೆಲ್ : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆ ಅನುಷ್ಠಾನಗೊಂಡಾಗಿನಿಂದ ರಾಜ್ಯದಲ್ಲಿ ತನ್ನದೇ ಆದ ಸದ್ದನ್ನು ಮಾಡುತ್ತಿದ್ದು, ಲಕ್ಷಾಂತರ ಕೆಲಸ ಕಾರ್ಯಗಳಿಗೆ ಗೃಹಲಕ್ಷ್ಮಿಯ ಹಣ ವರದಾನವಾಗಿದೆ.
ಯೋಜನೆಯಡಿ ಪ್ರತಿ ತಿಂಗಳು ನೀಡುತ್ತಿರುವ 2,000/- ರೂ, ಹಣ ಕೂಡಿಟ್ಟು ಗದಗ ಜಿಲ್ಲೆಯ ಗಜೇಂದ್ರಗಡ್ ಪಟ್ಟಣದ ಮಾಲದಾರ ಓಣಿಯ ಅತ್ತೆ ಹಾಗೂ ಸೊಸೆ ಬೊರವೆಲ್ ಹಾಕಿಸಿದ್ದು, ಬೊರವೆಲ್ ನಿಂದ ಒಳ್ಳೆಯ ನೀರನ್ನು ಪಡೆದಿದ್ದಾರೆ.
ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಅತ್ತೆ ಮಾಬುಬೀ ಹಾಗೂ ಸೊಸೆ ರೋಷನ್ ಬೇಗಂ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಬೊರವೆಲ್ ಹಾಕಿಸಲು ಒಟ್ಟು 60 ಸಾವಿರ ರೂ,ಗಳು ಖರ್ಚಾಗಿದ್ದು, ಗೃಹಲಕ್ಷ್ಮಿ ಯೋಜನೆಯ 44 ಸಾವಿರ ಬಳಕೆ ಮಾಡಲಾಗಿದೆ, ಇನ್ನುಳಿದ ಹಣ ಮಗ ನೀಡಿರುವುದಾಗಿ ತಿಳಿದು ಬಂದಿದೆ.


