ಮತದಾರರಿಗೆ ಹಣ ಹಂಚಿ ನಿರ್ದೇಶಕನಾದರೆ ಸಹಕಾರಿ ಕ್ಷೇತ್ರಕ್ಕೆ ಪೆಟ್ಟು ; ಲಕ್ಷ್ಮಣ ಸವದಿ
ಅಥಣಿ : ಸಹಕಾರಿ ಚಳುವಳಿಯ ಮೂಲ ಉದ್ದೇಶ ಹಾಳಾಗುತ್ತಿದೆ. ಸಹಕಾರಿ ಸಂಘಗಳಿಗೆ ನಡೆಯುವ ಚುನಾವಣೆಯಲ್ಲಿ ಮತದಾರರಿಗೆ ಹಣ ಹಂಚಿ ನಿರ್ದೇಶಕನಾದವರಿಂದ ಸಹಕಾರಿ ಸಂಘಗಳು ಬೆಳವಣಿಗೆ ಹೊಂದಲು ಸಾಧ್ಯವಿಲ್ಲ ಎಂದು ಶಾಸಕ ಲಕ್ಷ್ಮಣ ಸವದಿ ಕಳವಳ ವ್ಯಕ್ತಪಡಿಸಿದರು.
ಅವರು ಗುರುವಾರ ಪಟ್ಟಣದ ಅಥಣಿ ತಾಲೂಕಾ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ ನಿಯಮಿತ ಅಥಣಿ ಇದರ ನವೀಕರಣ ಕಟ್ಟಡ ಉದ್ಘಾಟಿಸಿ ಮಾತನಾಡಿದರು.
ಮತದಾರರಿಗೆ ಹಣ ಹಂಚಿ ನಿರ್ದೇಶಕನಾಗುವ ಭ್ರಷ್ಟ ವ್ಯವಸ್ಥೆಯಿಂದ ಸಹಕಾರಿ ಸಂಘಗಳು ಮತ್ತು ಸಹಕಾರಿ ಕ್ಷೇತ್ರ ಅವನತಿ ಹೊಂದುವುದರಲ್ಲಿ ಯಾವುದೇ ಸಂದೇಹವಿಲ್ಲ. ಹಣ ಹೂಡಿಕೆ ಮಾಡಿ ಸಹಕಾರಿಯ ಕ್ಷೇತ್ರಕ್ಕೆ ಬಂದವನು ಇಲ್ಲಿ ಪಾರದರ್ಶಕತೆಯಿಂದ ಏನು ಮಾಡಬಲ್ಲ ಎಂಬುದನ್ನು ಒಮ್ಮೆ ಯೋಚಿಸಿ ನೋಡಿ.
ಸಹಕಾರಿ ಸಂಘಗಳು ಮತ್ತು ಸಹಕಾರಿ ಕ್ಷೇತ್ರ ಉಳಿಸಿಕೊಂಡು , ಬೆಳೆಸಿಕೊಂಡು ಹೋಗಬೇಕಾದರೆ ಪ್ರಜ್ಞಾವಂತ ಮತದಾರರು ಯಾವುದೇ ಆಮಿಷಕ್ಕೆ ಒಳಗಾಗದೆ ಉತ್ತಮ ಸಹಕಾರಿಗಳನ್ನು ಬೆಂಬಲಿಸಬೇಕೆಂದು ಸಹಕಾರಿ ಸಂಘದ ರೈತರಿಗೆ ಕರೆ ನೀಡಿದರು.
ಅಥಣಿ ಪಿ ಎಲ್ ಡಿ ಬ್ಯಾಂಕ್ ಅನೇಕ ವರ್ಷಗಳಿಂದ ಸಂಕಷ್ಟದಲ್ಲಿದ್ದು, ಕಟ್ಟಡ ನವೀಕರಣಕ್ಕೂ ಹಣಕಾಸಿನ ಕೊರತೆ ಇತ್ತು. ನಾನು ಮತ್ತು ಕಾಗವಾಡ ಶಾಸಕ ರಾಜು ಕಾಗೆ ಅನುದಾನ ಒದಗಿಸಿದಾಗ ಈ ಕಟ್ಟಡ ನಿರ್ಮಾಣವಾಗಿದೆ.
ಮುಂಬರುವ ದಿನಗಳಲ್ಲಿ ಈ ಪಿ ಎಲ್ ಡಿ ಬ್ಯಾಂಕ್ ಅಭಿವೃದ್ಧಿ ಹೊಂದಬೇಕಾದರೆ ಆಡಳಿತ ಮಂಡಳಿಯ ಸದಸ್ಯರು ಮೊದಲು ತಾವು ಠೇವಣಿ ಇಡುವ ಮೂಲಕ ತಾಲೂಕಿನ ರೈತರಿಂದ ಠೇವಣಿಗಳನ್ನ ಸಂಗ್ರಹಿಸಬೇಕು.
ಸ್ವಾವಲಂಬಿ ಆರ್ಥಿಕ ವೈವಾಟುಗಳನ್ನು ನಡೆಸಲು ಸದೃಢ ಆಗಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರ ನೀಡುವ ಆರ್ಥಿಕ ನೆರವಿನಲ್ಲಿ ರೈತರಿಗೆ ಸಾಲದ ಸೌಲಭ್ಯಗಳನ್ನು ಒದಗಿಸುವ ಮೂಲಕ ವಾರದರ್ಶಕ ಆಡಳಿತದೊಂದಿಗೆ ಮುನ್ನಡೆಸಬೇಕು.
ರೈತರು ಕೂಡ ಪಡೆದುಕೊಂಡ ಸಾಲಗಳನ್ನು ಸಕಾಲಕ್ಕೆ ಮರುಪಾವತಿಸಿ ಸಹಕಾರಿ ಸಂಘದ ಬೆಳವಣಿಗೆಗೆ ಸಹಕರಿಸಬೇಕು. ಆಡಳಿತ ಮಂಡಳಿಯ ಸದಸ್ಯರು ಪಾರದರ್ಶಕತೆಯಿಂದ ಆಡಳಿತ ನಡೆಸಿ ಬ್ಯಾಂಕಿನ ಏಳಿಗೆಗೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.


