ಯರನಾಳ ಮಠದ ಸಮಾಜಮುಖಿ ಕಾರ್ಯ ಶ್ಲಾಘನೀಯ : ರಮೇಶ್ ಕತ್ತಿ
ಹುಕ್ಕೇರಿ : ನಾಡಿನ ಮಠ ಮಾನ್ಯಗಳ ಪರಂಪರೆಯಲ್ಲಿ ಯರನಾಳ ಕಾಳಿಕಾದೇವಿ ಮಠವು ತನ್ನದೇಯಾದ ಅಮೂಲ್ಯ ಕೊಡುಗೆ ನೀಡುತ್ತಿದೆ. ಆಧ್ಯಾತ್ಮಿಕ ಕೇಂದ್ರವಾಗಿ ಹೊರಹೊಮ್ಮಿದ್ದು ದೇಶದ ಧಾರ್ಮಿಕ ಪರಂಪರೆಯನ್ನು ಬಿತ್ತರಿಸುವಲ್ಲಿ ಮುಂಚೂಣಿಯಲ್ಲಿದೆ. ಈ ಮಠದಿಂದ ಅನೇಕ ಸಮಾಜಮುಖಿ ಕಾರ್ಯ ನಡೆಯುತ್ತಿರುವುದು ಹೆಮ್ಮೆಯ ಸಂಗತಿ ಎಂದು ಮಾಜಿ ಸಂಸದ ರಮೇಶ ಕತ್ತಿ ಅಭಿಪ್ರಾಯಪಟ್ಟರು.
ತಾಲೂಕಿನ ಯರನಾಳ ಗ್ರಾಮದ ಕಾಳಿಕಾದೇವಿ ಯಾತ್ರಾ ಮಹೋತ್ಸವದಲ್ಲಿ ಮಾತನಾಡಿದ ಅವರು, ಅನ್ನ, ಅಕ್ಷರ, ಆಶ್ರಯ ತ್ರೀವಿಧ ದಾಸೋಹ ಮೂಲಕ ಧರ್ಮ ಪ್ರಸಾರದಲ್ಲಿ ತೊಡಗಿರುವ ಈ ಸುಕ್ಷೇತ್ರವು ಧಾರ್ಮಿಕ ತಳಹಳದಿಯ ನೆಲೆಗಟ್ಟಿನಲ್ಲಿ ಈ ಭಾಗದಲ್ಲಿ ಧರ್ಮ ಪ್ರಸಾರ ಮತ್ತು ಸಮಾಜ ಕೈಂಕರ್ಯದಲ್ಲಿ ತೊಡಗಿಸಿಕೊಂಡಿದೆ ಎಂದರು.
ನಿಡಸೋಸಿ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಮಾತನಾಡಿ, ಅಪಾರ ಭಕ್ತ ಸಮೂಹವನ್ನೇ ಆಸ್ತಿಯನ್ನಾಗಿ ಮಾಡಿ ಕೊಂಡಿರುವ ಶ್ರೀಮಠದ ಈ ಯಾತ್ರಾ ಮಹೋತ್ಸವದಲ್ಲಿ ಕರ್ನಾಟಕ, ಗೋವಾ ಮತ್ತು ಮಹಾರಾಷ್ಟç ರಾಜ್ಯದ ಸಹಸ್ರಾರು ಭಕ್ತಾಧಿಗಳು ಭಾಗವಹಿಸಿದ್ದು ಯಾತ್ರೆಯಲ್ಲಿ ಭಕ್ತಿಯ ಸುಧೆ ಹರಿಯುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ ಎಂದರು.
ಪೀಠಾಧಿಪತಿ ಬ್ರಹ್ಮಾನಂದ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಚಿಕ್ಕೋಡಿ ಸಂಪಾದನಾ ಸ್ವಾಮೀಜಿ, ಹುಕ್ಕೇರಿ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ವಿರಕ್ತಮಠದ ಶಿವಬಸವ ಸ್ವಾಮೀಜಿ, ಜಾರಕಿಹೊಳಿ ಕೃಪಾನಂದ ಸ್ವಾಮೀಜಿ, ಬೆಳವಿ ಮೃತ್ಯುಂಜಯ ಸ್ವಾಮೀಜಿ, ಮುಖಂಡರಾದ ರಾಜೇಂದ್ರ
ಪಾಟೀಲ, ಶಂಕರಯ್ಯ ಮಠದ, ಸುರೇಶ ತಳವಾರ, ಮುಕುಂದ ಮಠದ, ರಮೇಶ ಹುಂಜಿ, ಗೋಪಾಲ ಮಠದ, ಆನಂದ ಹೊಸಮನಿ, ರವಿ ಕಾಂಬಳೆ, ಎಸ್.ಆರ್.ಗಸ್ತಿ, ರಾಜು ಕಾಳೆನಟ್ಟಿ, ಸುರೇಶ ಭೀಮನಾಯ್ಕ ಮತ್ತಿತರರು ಉಪಸ್ಥಿತರಿದ್ದರು.
ಪ್ರತಿ ವರ್ಷದಂತೆ ಈ ಬಾರಿ ಕಾಳಿಕಾದೇವಿ ಯಾತ್ರಾ ಮಹೋತ್ಸವ ಸಡಗರ-ಸಂಭ್ರಮದೊಂದಿಗೆ ಅದ್ದೂರಿಯಾಗಿ ನಡೆಯಿತು. ಸಂಜೆ ನಡೆದ ರಥೋತ್ಸವ, ಕುಂಬೋತ್ಸವ ಹಾಗೂ ಪಲ್ಲಕ್ಕಿ ಉತ್ಸವ ಕಣ್ಮನ ಸೆಳೆಯಿತು.
ಉಡಿ ತುಂಬುವ ಕಾರ್ಯಕ್ರಮ, ಪೂರ್ಣಾಹುತಿ, ಶಿವಾನುಭವ ಗೋಷ್ಠಿ, ಪ್ರಕೃತಿ ವಿಕೋಪ ಶಾಂತತೆಗೆ ಗಣಹೋಮ, ವನಸ್ಪತಿ ಹೋಮ, ಹವನಾದಿ, ಲೋಕ ಕಲ್ಯಾಣಕ್ಕಾಗಿ ಗಾಯತ್ರಿ ವಿಶ್ವಮಂಗಲ ಚಂಡಿಕಾ ಹೋಮ, ಕಾಮೇಷ್ಠಿ ಯಜ್ಞ ಹೋಮ, ಭಜನಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.


