ಬೆಳಗಾವಿ : ಯಾವುದೇ ಪರಿಸ್ಥಿತಿ ಬಂದರೂ ನಾವು ಬಿಜೆಪಿ ತೊರೆಯುವುದಿಲ್ಲ. ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೊಸ ಪಕ್ಷ ಸ್ಥಾಪನೆ ಮಾಡುವುದಿಲ್ಲ.‌ ಒಂದು ವೇಳೆ ಮಾಡಿದರೂ ನಾವು ಬಿಜೆಪಿ ಪಕ್ಷ ತೊರೆಯುವ ಪ್ರಶ್ನೆ ಇಲ್ಲ ಎಂದು ಶಾಸಕ ರಮೇಶ್ ಜಾರಕಿಹೊಳಿ ಹೇಳಿದರು.

ಬೆಳಗಾವಿ ನಗರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು. ಯತ್ನಾಳ್ ಬಿಜೆಪಿಯಲ್ಲೇ ಮುಂದುವರಿಯುತ್ತಾರೆ. ಅವರನ್ನು ಪುನಃ ಪಕ್ಷಕ್ಕೆ ಕರೆತರಲು ಪ್ರಯತ್ನ ಮಾಡುತ್ತೇವೆ. ನಾವು ಪಕ್ಷ ತೊರೆಯುತ್ತೇವೆ ಎಂಬುವುದು ಕೇವಲ ಊಹಾಪೋಹ, ಯಾವುದೇ ಕಾರಣಕ್ಕೂ ಬಿಜೆಪಿ ತೊರೆಯುವ ಪ್ರಶ್ನೆ ಇಲ್ಲ. ಪಕ್ಷಕ್ಕೆ ಮುಜುಗರ ತರುವ ಹೇಳಿಕೆ ನೀಡದಂತೆ ಮೊನ್ನೆ ನಡೆದ ಸಭೆಯಲ್ಲಿ ಯತ್ನಾಳ್ ಅವರಿಗೆ ತಿಳಿಸಿದ್ದೇವೆ ಎಂದರು.

ಹಿಂದುತ್ವಕ್ಕೆ ಆರ್ ಎಸ್ ಎಸ್ ಹಾಗೂ ಬಿಜೆಪಿ ಇದೆ. ಯತ್ನಾಳ್ ಹೊಸ ಪಕ್ಷ ಸ್ಥಾಪನೆ ಮಾಡುವುದಿಲ್ಲ ಎಂಬ ವಿಶ್ವಾಸ ನಮಗೆ ಇದೆ. ಶೀಘ್ರದಲ್ಲೇ ಬಿಜೆಪಿ ವರಿಷ್ಠರನ್ನು ಭೇಟಿಯಾಗಿ ಯತ್ನಾಳ್ ಅವರನ್ನು ವಾಪಸ್ ‌ಪಕ್ಷಕ್ಕೆ ಕರೆತರುವ ಪ್ರಯತ್ನ ಮಾಡುತ್ತೇವೆ. ಮುಂದೆ ಕರೆಯುವ ಸಭೆಯಲ್ಲಿ ಹೊಸ ಪಕ್ಷ ಸ್ಥಾಪನೆ ಮಾಡದಂತೆ ಮನವಿ ಮಾಡುತ್ತೇವೆ ಎಂದರು.‌