ನಾನೇ ಮುಂದಿನ ಅಭ್ಯರ್ಥಿ..! ; ಶಾಸಕ ಕಾಗೆ ಈ ಪರಿಸ್ಥಿತಿಗೆ ಕಾರಣ ಯಾರು…?
ಬೆಳಗಾವಿ : 2028 ಕ್ಕೆ ರಾಜ್ಯ ವಿಧಾನಸಭೆಗೆ ಸಾರ್ವತ್ರಿಕ ಚುನಾವಣೆ ನಡೆಯುತ್ತದೆ. ಆದರೆ ಎರಡುವರೆ ವರ್ಷಕ್ಕೆ ಮೊದಲೇ ಒಬ್ಬ ಹಾಲಿ ಶಾಸಕ ನಾನೇ ಮುಂದಿನ ಅಭ್ಯರ್ಥಿ ಎಂದು ಹೆಳುವ ಪ್ರಸಂಗ ಬಂದೊದಗಲು ಕಾರಣ ಏನು ಎಂಬ ಪ್ರಶ್ನೆ ಸಧ್ಯ ಕಾಗವಾಡ ಮತಕ್ಷೇತ್ರದಲ್ಲಿ ಬಂದೊದಗಿದೆ.
ರಾಜಕಾರಣದಲ್ಲಿ ತಮ್ಮದೇ ವೈಯಕ್ತಿಕ ಛಾಪು ಮೂಡಿಸಿರುವ ಕಾಗವಾಡ ವಿಧಾನಸಭಾ ಕ್ಷೇತ್ರದ ಶಾಸಕ ರಾಜು ಕಾಗೆ ಸಧ್ಯ ಮುಂದಿನ ಅಭ್ಯರ್ಥಿ ನಾನೇ ಎಂದು ಹೇಳಿಕೊಳ್ಳುತ್ತಿದ್ದಾರೆ. ಪದೇ ಪದೇ ಈ ಪ್ರಶ್ನೆ ಮೂಡಿಬರಲು ಇದರ ಹಿಂದೆ ಅನೇಕ ರಾಜಕೀಯ ಲೆಕ್ಕಾಚಾರಗಳೂ ಅಡಗಿವೆ. ಹಾಗಾದರೆ ಆ ಲೆಕ್ಕಾಚಾರ ಏನು ಎಂಬುದನ್ನು ನಿಮ್ಮ ಬೆಳಗಾವಿ ವಾಯ್ಸ್ ಪ್ರಸ್ತುತಪಡಿಸಲಿದೆ.
ಸುದೀರ್ಘ ಅವಧಿಯಲ್ಲಿ ರಾಜಕಾರಣ ಮಾಡಿರುವ ಕಾಗವಾಡ ಶಾಸಕ ರಾಜು ಕಾಗೆ ಹಾಗೂ ಅಥಣಿ ಶಾಸಕ ಲಕ್ಷ್ಮಣ ಸವದಿ ಆಪ್ತ ಮಿತ್ರರು. ಯಾವುದೇ ಸಂದರ್ಭ ಬಂದರೂ ಇಬ್ಬರೂ ಸ್ನೇಹಿತರು ತಮ್ಮ ಸ್ನೇಹವನ್ನು ಮುರಿದುಕೊಂಡವರಲ್ಲ. ಆದರೆ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಶಾಸಕ ರಾಜು ಕಾಗೆ ಮನಸ್ಸು ನೊಂದುಕೊಂಡಂತೆ ಕಾಣಿಸುತ್ತಿದೆ.
ಶಾಸಕ ರಾಜು ಕಾಗೆ ಅವರ ಮುನಿಸಿದೆ ನಿಜವಾದ ಕಾರಣ ಶಾಸಕ ಲಕ್ಷ್ಮಣ ಸವದಿ ಪುತ್ರ ಚಿದಾನಂದ ಸವದಿ ನಡೆ ಎಂಬುದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ಕಾಗವಾಡ ಕ್ಷೇತ್ರದ ಮೇಲೆ ಕಣ್ಣಿಟ್ಟ ಲಕ್ಷ್ಮಣ ಸವದಿ ಪುತ್ರನಿಗೆ ರಾಜಕೀಯ ಭವಿಷ್ಯ ರೂಪಿಸಲು ತಯಾರಿ ನಡೆಸಿದ್ದಾರೆ ಎಂಬ ಮಾತು ಜೋರಾಗಿವೆ.
ಚಿದಾನಂದ ಸವದಿ ಅಭಿಮಾನಿ ಬಳಗ ಯಾವಾಗ ಸಾಮಾಜಿಕ ಜಾಲತಾಣದಲ್ಲಿ ಕಾಗವಾಡದ ಮುಂದಿನ ಅಭ್ಯರ್ಥಿ ಎಂದು ಪ್ರಚಾರ ಮಾಡಲು ಪ್ರಾರಂಭಿಸಿದರು ಆ ಸಮಯದಲ್ಲೇ ಶಾಸಕ ರಾಜು ಕಾಗೆ ಸವದಿ ಕುಟುಂಬದಿಂದ ಅಂತರ ಕಾಯ್ದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಸಾಮಾಜಿಕ ಜಾಲತಾಣದಲ್ಲಿ ಶಾಸಕ ರಾಜು ಕಾಗೆ ಹಾಗೂ ಚಿದಾನಂದ ಸವದಿ ಬೆಂಬಲಿಗರ ನಡುವಿನ ವಾಗ್ವಾದ ಮುಂದುವರಿದಿದೆ. ಈ ನಡುವೆ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರನ್ನಾಗಿ ಕಾಗೆಯನ್ನು ಆಯ್ಕೆ ಮಾಡುವ ಮೂಲಕ ಜಾರಕಿಹೊಳಿ ಸಹೋದರರು ಮಾಸ್ಟರ್ ಸ್ಟ್ರೋಕ್ ಕೊಟ್ಟಿದ್ದಾರೆ.
ಹಾಲಿ ಶಾಸಕ ನಾನೇ ಮುಂದಿನ ಅಭ್ಯರ್ಥಿ ಎಂದು ಹೇಳುವ ಮಟ್ಟಿಗೆ ಕಾಗವಾಡ ರಾಜಕಾರಣ ಬದಲಾಗಿದ್ದು ಇದರ ಹಿಂದೆ ಕಾಣದ ಕೈಗಳ ಆಟ ಇದೆ ಎಂಬುದು ಸಾರ್ವಜನಿಕರ ಮಾತು.


