BREAKING: ಜೈಶಂಕರ್ ಸಂಧಾನದ ಫಲಶೃತಿ -ಭಾರತದ ಹಡಗುಗಳಿಗೆ ಹಾರ್ಮುಜ್ ದಾಟಲು ಅನುಮತಿ!

ನವದೆಹಲಿ: ಜಾಗತಿಕ ಇಂಧನ ಬಿಕ್ಕಟ್ಟು ಉಲ್ಬಣಗೊಳ್ಳುತ್ತಿರುವ ನಡುವೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಗ್ಚಿ ಅವರ ನಡುವೆ ಮಾತುಕತೆ ಪ್ರಗತಿ ಸಾಧಿಸಿದೆ. ಇದರಿಂದಾಗಿ ಭಾರತದ ಧ್ವಜ ಹೊತ್ತ ಟ್ಯಾಂಕರ್ಗಳಿಗೆ ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗಲು ಇರಾನ್ ಅವಕಾಶ ನೀಡಿದೆ.
ವಿದೇಶಾಂಗ ಸಚಿವಾಲಯದ ಪ್ರಯತ್ನದ ಫಲವಾಗಿ ಇದೀಗ ಇರಾನ್ ಭಾರತದ ಧ್ವಜ ಹೊತ್ತ ಹಡಗುಗಳಿಗೆ ಹಾರ್ಮುಜ್ ಜಲಸಂಧಿಯನ್ನು ದಾಟಲು ಅವಕಾಶ ನೀಡಿದೆ. ಈ ಬೆಳವಣಿಗೆಯ ನಂತರ ಭಾರತೀಯ ಟ್ಯಾಂಕರ್ಗಳಾದ ಪುಷ್ಪಕ್ ಮತ್ತು ಪರಿಮಲ್ ಈಗಾಗಲೇ ಜಲಸಂಧಿಯ ಮೂಲಕ ಸುರಕ್ಷಿತವಾಗಿ ಸಂಚರಿಸುತ್ತಿದೆ ಎಂದು ವರದಿಯಾಗಿದೆ.
ಆದರೆ ಈ ಅವಕಾಶ ಸದ್ಯ ಭಾರತಕ್ಕೆ ಮಾತ್ರ ಸಿಕ್ಕಿದ್ದು, ಅಮೆರಿಕ, ಯುರೋಪ್ ಮತ್ತು ಇಸ್ರೇಲ್ನ ಹಡಗುಗಳು ಇನ್ನು ಕೂಡಾ ನಿರ್ಬಂಧಗಳನ್ನು ಎದುರಿಸುತ್ತಿವೆ.
ಎರಡು ದಿನಗಳ ಹಿಂದೆ ಭಾರತೀಯನೊಬ್ಬನ ನಾಯಕತ್ವದಲ್ಲಿ ಸೌದಿ ಅರೇಬಿಯಾದ ಕಚ್ಚಾ ತೈಲವನ್ನು ಸಾಗಿಸುತ್ತಿದ್ದ ಲೈಬೀರಿಯನ್ ಧ್ವಜ ಹೊತ್ತ ಟ್ಯಾಂಕರ್ ಹಾರ್ಮುಜ್ ಜಲಸಂಧಿಯನ್ನು ಸುರಕ್ಷಿತವಾಗಿ ದಾಟಿ ಪ್ರಸ್ತುತ ಮುಂಬೈ ಬಂದರಿಗೆ ಬಂದಿಳಿದಿದೆ. ಅಮೆರಿಕ ಮತ್ತು ಇಸ್ರೇಲ್ ಇರಾನ್ ಮೇಲೆ ದಾಳಿ ಮಾಡಿದ ನಂತರ ಸಮುದ್ರ ಸಂಚಾರ ಬಹುತೇಕ ಸ್ಥಗಿತಗೊಂಡ ಬಳಿಕ ಈ ಜಲಮಾರ್ಗವನ್ನು ಸುರಕ್ಷಿತವಾಗಿ ದಾಟಿದ ಮೊದಲ ಭಾರತ ತಲುಪಬೇಕಾದ ಹಡಗು ಇದಾಗಿದೆ.
ಇರಾನ್ ವಿರುದ್ಧದ ಅಮೆರಿಕ ಹಾಗೂ ಇಸ್ರೇಲ್ ನಡೆಸುತ್ತಿರುವ ಯುದ್ಧ 12 ನೇ ದಿನಕ್ಕೆ ಕಾಲಿಟ್ಟಿದ್ದು, ಸಂಘರ್ಷ ಅಂತ್ಯ ಕಾಣುವ ಸೂಚನೆ ಸಿಗುತ್ತಿಲ್ಲ. ಸಮುದ್ರ ಸಂಚಾರ ಬಹುತೇಕ ಸ್ಥಗಿತಗೊಂಡ ಕಾರಣ ಪೂರೈಕೆ ಸಿಗದೆ ಜಾಗತಿಕ ತೈಲ ಬೆಲೆಗಳು ಗಗನಕ್ಕೇರಿದೆ.
ಹಾರ್ಮುಜ್ ಜಲಸಂಧಿ ಇರಾನ್ ಮತ್ತು ಓಮನ್ ನಡುವಿನ 55 ಕಿಲೋಮೀಟರ್ ಅಗಲದ ಜಲಮಾರ್ಗವಾಗಿದ್ದು, ಪರ್ಷಿಯನ್ ಕೊಲ್ಲಿಯನ್ನು ಅರೇಬಿಯನ್ ಸಮುದ್ರದಿಂದ ಬೇರ್ಪಡಿಸುತ್ತದೆ. ಇಂಧನ ವಲಯದ ದೃಷ್ಟಿಯಿಂದ ಇದು ಜಾಗತಿಕ ರಿಯಲ್ ಎಸ್ಟೇಟ್ನ ಒಂದು ಪ್ರಮುಖ ಭಾಗವಾಗಿದೆ ಮತ್ತು ವಿಶ್ವದ ಮಹತ್ವದ ಹಡಗು ಮಾರ್ಗಗಳಲ್ಲಿ ಇದು ಒಂದಾಗಿದೆ.


