ಶಾಲೆಯ ಅಡುಗೆ ಸಿಬ್ಬಂದಿ ಸರಸ ಸಲ್ಲಾಪ…!

ಹೆಚ್.ಡಿ ಕೋಟೆ : ಗಿರಿಜನ ಮಕ್ಕಳ ಭವಿಷ್ಯ ರೂಪಿಸುವ ಕೇಂದ್ರ ಸ್ಥಾನವಾದ ಆಶ್ರಮ ಶಾಲೆಯಲ್ಲಿ ಅಡುಗೆ ಸಿಬ್ಬಂದಿಯವರ ಸರಸ ಸಲ್ಲಾಪದಿಂದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಮುಜುಗರ ಪಡುವಂತಾಗಿದೆ.
ತಾಲ್ಲೂಕಿನ ಗಡಿ ಭಾಗದ ಜಕ್ಕಹಳ್ಳಿ ಗ್ರಾಮದಲ್ಲಿರುವ ಗಿರಿಜನ ಆಶ್ರಮ ಶಾಲೆಯಲ್ಲಿ ಅಡುಗೆ ಸಿಬ್ಬಂದಿಯವರು ಬಹಿರಂಗವಾಗಿ ನಡೆಸುತ್ತಿರುವ ಸರಸ ಸಲ್ಲಾಪದಿಂದ ವಿದ್ಯಾರ್ಥಿಗಳು ಮಾತ್ರವಲ್ಲದೆ, ಸಂಬಂಧಪಟ್ಟ ಇಲಾಖೆಯವರೂ ತಲೆ ತಗ್ಗಿಸುವಂತಾಗಿದೆ.
ಈ ಭಾಗದಲ್ಲಿ ಗಿರಿಜನ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗಾಗಿ ಸರ್ಕಾರ ಆಶ್ರಮ ಶಾಲೆಗಳನ್ನು ತೆರೆದು ಪ್ರತಿ ವರ್ಷ ಲಕ್ಷಾಂತರ ರೂ. ಅನುದಾನವನ್ನು ಪರಿಶಿಷ್ಟ ಪಂಗಡ ಇಲಾಖೆಗೆ ನೀಡುತ್ತಿದೆ.ಗಿರಿಜನ ಮಕ್ಕಳು ಶೈಕ್ಷಣಿಕವಾಗಿ ಮುಂದೆ ಬರುವ ಸಲುವಾಗಿ ಇಂಥ ಆಶ್ರಮ ಶಾಲೆಗಳನ್ನು ಅವಲಂಬಿಸಿಕೊಂಡು ಶಿಕ್ಷಣ ಪಡೆಯುತ್ತಿದ್ದಾರೆ.
ಅನೇಕ ಮೂಲಸೌಕರ್ಯಗಳ ಕೊರತೆ ಮತ್ತು ಆಹಾರ ಪದಾರ್ಥದ ಸಮಸ್ಯೆಗಳು ಎದುರಾದರೂ ಅವುಗಳನ್ನು ಲೆಕ್ಕಿಸದೆ ಆಶ್ರಮ ಶಾಲೆಗಳಲ್ಲಿ ವಾಸ್ತವ್ಯ ಮಾಡಿ ವ್ಯಾಸಂಗ ಮಾಡುತ್ತಿದ್ದಾರೆ. ಆದರೆ, ಹಾಡಹಗಲೇ ವಿದ್ಯಾರ್ಥಿ ವಿದ್ಯಾರ್ಥಿನಿಯರು ಇರುವ ಸಂದರ್ಭದಲ್ಲಿ ಇಲ್ಲಿನ ಅಡುಗೆ ಸಿಬ್ಬಂದಿ ಸಿನಿಮಾ ಶೈಲಿಯಲ್ಲಿ ಸರಸ ಸಲ್ಲಾಪ ನಡೆಸುತ್ತಿದ್ದಾರೆ. ಇವರ ಚೆಲ್ಲಾಟ ನೋಡಿದ ಅನೇಕ ವಿದ್ಯಾರ್ಥಿನಿಯರು ತಲೆ ತಗ್ಗಿಸಿಕೊಂಡು ಹೋಗು ವಂತಾಗಿದೆ.
ಆದರೆ, ಶಾಲೆಯ ಜವಾಬ್ದಾರಿ ಹೊತ್ತಿರುವ ವಾರ್ಡನ್ ಮತ್ತು ಮುಖ್ಯ ಶಿಕ್ಷಕರು ಆಶ್ರಮ ಶಾಲೆಗಳಲ್ಲಿ ವಾಸ್ತವ್ಯ ಹೂಡದೇ ಮತ್ತು ಸಮರ್ಪಕವಾಗಿ ಕೆಲಸ ನಿರ್ವಹಿಸದೇ ಇರುವುದರಿಂದ ಇಂತಹ ಪ್ರಕರಣಗಳು ನಡೆಯುತ್ತಿವೆ ಎನ್ನುವುದು ಸಾರ್ವಜ ನಿಕರ ಆರೋಪ.


