ಬೆಳಗಾವಿ ಬಿಜೆಪಿಯಿಂದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವೆ – ಮಹಾಂತೇಶ್ ವಕ್ಕುಂದ
ಬೆಳಗಾವಿ : ಪ್ರಧಾನಿ ನರೇಂದ್ರ ಮೋದಿ ಕೈ ಬಲ ಪಡಿಸಲು ಬೆಳಗಾವಿ ಲೋಕಸಭಾ ಮತಕ್ಷೇತ್ರದಿಂದ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ನಡೆಸಲು ತೀರ್ಮಾನಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮಾ.30 ಭಾನುವಾರ ಸ್ವಾಭಿಮಾನಿ ಸಭೆ ಕರೆಯಲಾಗಿದೆ ಎಂದು ಬಿಜೆಪಿ ಟಿಕೆಟ್ ವಂಚಿತ ಮಹಾಂತೇಶ ವಕ್ಕುಂದ ಹೇಳಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಸುಮಾರು ವರ್ಷಗಳಿಂದ ಬಿಜೆಪಿ ಪದಾಧಿಕಾರಿಯಾಗಿ ಪಕ್ಷ ಸಂಘಟನೆ ಮಾಡುವಲ್ಲಿ ಶ್ರಮಿಸಿದ್ದೇನೆ. ನನ್ನನ್ನು ಸೇರಿ ಸಾಕಷ್ಟು ಆಕಾಂಕ್ಷಿಗಳು ಇದ್ದರು. ಆದರೆ ಯಾವೊಬ್ಬ ಸ್ಥಳೀಯ ನಾಯಕನಿಗೆ ಪಕ್ಷ ಮಣೆ ಹಾಕದೆ, ಬೇರೆ ಪಕ್ಷಕ್ಕೆ ಹೋಗಿ, ಪ್ರಧಾನಿ ಮೋದಿ ಸೇರಿ ಹಲವು ನಾಯಕರನ್ನು ಬಾಯಿಗೆ ಬಂದಂತೆ ಬೈದಿದವರಿಗೆ ಟಿಕೆಟ್ ನೀಡಲಾಗಿದೆ.
ಜಗದೀಶ್ ಶೆಟ್ಟರ್ ಬೆಳಗಾವಿ ಲೋಕಸಭಾ ಮತಕ್ಷೇತ್ರಕ್ಕೆ ಬೇಡವಾದ ಅಭ್ಯರ್ಥಿಗೆ ಬಿಜೆಪಿ ಟಿಕೆಟ್ ನೀಡಿದ್ದಾರೆ. ಶೀಘ್ರದಲ್ಲೇ ಸ್ವಾಭಿಮಾನಿಗಳ ಸಮಾವೇಶ ನಡೆಸಿ ಬಂಡಾಯ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ನಡೆಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಬೆಳಗಾವಿ ಲೋಕಸಭಾ ಮತಕ್ಷೇತ್ರದ ಬಿಜೆಪಿ ಆಕಾಂಕ್ಷಿಗಳು ಮಹಾಂತೇಶ ಕವಟಗಿಮಠ, ಈರಣ್ಣ ಕಡಾಡಿ, ಸಂಜಯ ಪಾಟೀಲ ಹಾಗೂ ನಾನು ಸೇರಿ ಮತ್ತಿತರರು ಟಿಕೆಟ್ ಕೇಳಿದ್ದರು. ಆದರೆ ಪಕ್ಷ ಇವರನ್ನು ಕಡೆಗಣಿಸಿ ಬೇರೆಯವರಿಗೆ ಟಿಕೆಟ್ ನೀಡಿದ್ದು ಬೆಳಗಾವಿ ಸ್ವಾಭಿಮಾನಕ್ಕೆ ಧಕ್ಕೆ ಬಂದಿದೆ ಎಂದರು.
ಬೆಳಗಾವಿ ಮನೆ ಮಗ, ಜಿಲ್ಲೆಯಲ್ಲಿ ಪಕ್ಷ ಬೆಳೆಸಿದ ನಾನು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮುಂದಾಗಿದ್ದೇನೆ. ಸ್ವಾಭಿಮಾನಿ ಬೆಳಗಾವಿಗರಾಗಿ, ಬೆಳಗಾವಿಯಲ್ಲಿ ಸ್ಥಳೀಯರಿಗೆ ಅವಕಾಶ ನೀಡಬೇಕು ಎನ್ನುವ ಬೇಡಿಕೆ ಇತ್ತು. ಆದರೆ ಅದನ್ನು ಕಡೆಗಣನೆ ಮಾಡಿರುವುದು ಬಿಜೆಪಿ ಕಾರ್ಯಕರ್ತರಿಗೆ ನೋವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇಲ್ಲಿಯವರಗೂ ಬಿಜೆಪಿ ನಾಯಕರು ನನ್ನ ಯಾರೂ ಸಂಪರ್ಕಿಸಿಲ್ಲ. ನನ್ನ ಸಂಪರ್ಕಿಸಲಿ ಬಿಡಲಿ, ನಮ್ಮ ಪ್ರಯತ್ನ ಮುಂದುವರಿಯುತ್ತದೆ. ಬಿಜೆಪಿ ಪಕ್ಷದ ನಿರ್ಧಾರದ ವಿರುದ್ಧ ನಮ್ಮ ಹೋರಾಟ ಇದೆ. ಇದು ಬೆಳಗಾವಿಗರ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ. ನಮ್ಮ ಬೆಂಬಲಿಗರ ಅಭಿಪ್ರಾಯ ಸಂಗ್ರಹಿಸುತ್ತೇವೆ. ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದು, ಮೋದಿ ತಂಡವನ್ನು ಸೇರಿಕೊಳ್ಳುತ್ತೇನೆ ಎಂದರು.
ಬೆಳಗಾವಿ ಕ್ಷೇತ್ರದ ಎಲ್ಲ ಎಲ್ಲ ತಾಲ್ಲೂಕುಗಳಿಗೆ ಭೇಟಿ ನೀಡಿ ಬಂದಿದ್ದೇನೆ. ನಾನು ಮನೆ ಮಗ, ಕಟ್ಟಾ ಹಿಂದೂತ್ವವಾದಿ, ನಾನು ಜಾತಿ ರಾಜಕಾರಣ ಯಾವತ್ತೂ ಮಾಡೋದಿಲ್ಲ. ಮೋದಿ ಅವರನ್ನು ಬೈದವರಿಗರೆ ಅವಕಾಶ ನೀಡಿದ್ದಾರೆ. ಇದು ಬೆಳಗಾವಿ ಮೋದಿ ಅಭಿಮಾನಿಗಳಿಗೆ ಬೇಸರ ತಂದಿದೆ ಎಂದರು.
ಬೆಳಗಾವಿ ನನ್ನ ಜನ್ಮಭೂಮಿ, ಕರ್ಮಭೂಮಿ, ಸ್ಥಾನಿಕ ವ್ಯಕ್ತಿ. ಬೆಳಗಾವಿಗೆ ಬರಬೇಕಿದ್ದ ಸಾಕಷ್ಟು ಯೋಜನೆಗಳನ್ನು ಹುಬ್ಬಳ್ಳಿ ಧಾರವಾಡಕ್ಕೆ ತೆಗೆದುಕೊಂಡು ಹೋದ ಶ್ರೇಯ ಶೆಟ್ಟರ್ ಅವರಿಗೆ ಸಲ್ಲುತ್ತದೆ. ಶೆಟ್ಟರ್ ಕೊಡುಗೆ ಬೆಳಗಾವಿಗೆ ಏನೂ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಾಗಿ ನಡೆಸಿದ ಸರ್ವೇ ಎಂಬುದೇ ಸುಳ್ಳು. ಇದರಲ್ಲಿ ಜಗದೀಶ್ ಶೆಟ್ಟರ್ ಅವರ ಹೆಸರು ಇರಲೇ ಇಲ್ಲ. ಯಾವ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಶೆಟ್ಟರ್ ಗೆ ಟಿಕೆಟ್ ನೀಡಿದ್ದು ನಮ್ಮ ವಿರೋಧ ಇದೆ ಎಂದರು.


