ಈ ನಾಲ್ವರಲ್ಲಿ ಮಹಾಲಕ್ಷ್ಮಿ ಕೊಂದವರು ಯಾರು..? ಫ್ರಿಡ್ಜ್ ಗೆ ತುಂಬುವ ಮುಂಚೆ ಸೂಟ್ ಕೇಸ್ ಗೆ ಯತ್ನ..!
ಬೆಂಗಳೂರು : ಒಂಟಿ ಮನೆಯಲ್ಲಿ ವಾಸವಿದ್ದ ಯುವತಿಯನ್ನು ಹತ್ಯೆ ಮಾಡಿ ಆಕೆಯನ್ನು ಫ್ರಿಡ್ಜ್ ನಲ್ಲಿ ತುಂಬಲಾಗಿತ್ತು. ಈ ಮುಂಚೆ ದುರುಳರು ಏನೆಲ್ಲಾ ಮಾಡಿದ್ದರು ಎಂಬುದು ತನಿಖೆ ಮೂಲಕ ಬಯಲಾಗುತ್ತಿದೆ.
ಕೊಲೆಯಾದ ವೈಯ್ಯಾಲಿಕಾವಲ್ ಮಹಾಲಕ್ಷ್ಮಿ ಗೆ ಅನ್ಯ ಯುವಕರ ಜೊತೆ ಸಲುಗೆ ಇದ್ದಿದ್ದೆ ಕೊಲೆಗೆ ಪ್ರಮುಖ ಕಾರಣವಾ ಎಂಬ ಅನುಮಾನ ಮೂಡಿದೆ. ಸಧ್ಯ ಸುನೀಲ್, ಶಶಿಧರ್, ಅಶ್ರಫ್, ಮುಕ್ತಿ ಎಂಬ ನಾಲ್ವರ ಮೇಲೆ ಮಹಾಲಕ್ಷ್ಮಿ ಕುಟುಂಬದವರು ಅನುಮಾನ ಹೊರ ಹಾಕಿದ್ದಾರೆ.
ರಾಜಸ್ಥಾನ ಮೂಲದ ಮುಕ್ತಿ ಹಾಗೂ ಉತ್ತರಖಾಂಡ್ ಮೂಲದ ಅಶ್ರಫ್ ಜೊತೆಗೆ ಮೃತ ಮಹಾಲಕ್ಷ್ಮಿ ನಿಕಟ ಸಂಪರ್ಕ ಹೊಂದಿದ್ದಳು. ಮುಕ್ತಿ ಹಾಗೂ ಮಹಾಲಕ್ಷ್ಮಿ ಒಂದೇ ಮಾಲ್ ನಲ್ಲಿ ಕೆಲಸ ಮಾಡುತ್ತಿದ್ದರು. ಮಹಾಲಕ್ಷ್ಮಿ ಯನ್ನು ಇದೇ ಮುಕ್ತಿ ಮನೆಬಳಿ ಡ್ರಾಪ್ ಪಿಕ್ ಅಪ್ ಮಾಡುತ್ತಿದ್ದ.
ಕೊಲೆಯಾದ ದಿನ ಸೆಪ್ಟೆಂಬರ್ 02 ರಂದು ಮುಕ್ತಿ ಜೊತೆ ಮಹಾಲಕ್ಷ್ಮೀ ಜಗಳ ಮಾಡಿಕೊಂಡು ಕೆಲಸ ಬಿಟ್ಟಿದ್ದಳು. ಮಹಾಲಕ್ಷ್ಮಿ ಕೆಲಸಬಿಟ್ಟ ನಂತರ ಮುಕ್ತಿಯೂ ಕೆಲಸಬಿಟ್ಟಿದ್ದ.
ಸಧ್ಯ ಈ ರಾಜಸ್ಥಾನ ಮೂಲದ ಮುಕ್ತಿ ನಾಪತ್ತೆಯಾಗಿದ್ದಾನೆ. ಈ ಕುರಿತು ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ.
ಇನ್ನೂ ಇದೇ ಪ್ರಕರಣದಲ್ಲಿ ಅಶ್ರಫ್ ಎಂಬಾತನ ಹೆಸರು ತಳಕುಹಾಕಿಕೊಂಡಿದೆ. ಉತ್ತರಖಾಂಡ್ ಮೂಲದ ಅಶ್ರಫ್
ಸಲೂನ್ ಒಂದರಲ್ಲಿ ಕೆಲಸ ಮಾಡುತ್ತಿದ್ದ. ಮೃತ ಮಹಾಲಕ್ಷ್ಮಿ ವೈಯ್ಯಾಲಿಕಾವಲ್ ನಿವಾಸಕ್ಕೆ ಆಗಾಗ್ಗೆ ಬಂದು ಹೋಗುತ್ತಿದ್ದ ಎಂಬ ಮಾಹಿತಿ ಲಭಿಸಿದೆ. ಇದೇ ಅಶ್ರಫ್ ವಿಚಾರವಾಗಿ ಕಳೆದ ವರ್ಷ ಮೃತ ಮಹಾಲಕ್ಷ್ಮಿ ಹಾಗೂ ಆಕೆಯ ಪತಿ ಹೇಮಂತ್ ದಾಸ್ ಮಧ್ಯೆ ಗಲಾಟೆ ನಡೆದಿತ್ತು.
ಈ ವಿಚಾರಕ್ಕೆ ಹೇಮಂತ್ ಪತ್ನಿಯ ಗೆಳೆಯ ಅಶ್ರಫ್ ವಿರುದ್ದ ನೆಲಮಂಗಲ ಪೊಲೀಸರಿಗೆ ದೂರು ನೀಡಿದ್ದ. ಗೆಳೆಯನ ಮೇಲೆ ಪತಿ ದೂರು ನೀಡಿದ್ದಕ್ಕೆ ಕೋಪಗೊಂಡಿದ್ದ ಮಹಾಲಕ್ಷ್ಮಿ ಪತಿಯನ್ನ ಬಿಟ್ಟಿದ್ದಳು. ನಂತರ ನೆಲಮಂಗಲದಿಂದ ವೈಯ್ಯಾಲಿಕಾವಲ್ ನಲ್ಲಿ ಒಬ್ಬಂಟಿಯಾಗಿ ವಾಸವಿದ್ದಳು.
ಸೆಪ್ಟೆಂಬರ್ 02 ರಂದು ಮೃತ ಮಹಾಲಕ್ಷ್ಮಿ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಸಿಸಿಟಿವಿಯಲ್ಲಿ ಸೆಪ್ಟೆಂಬರ್ 02 ರಂದು ಮಹಾಲಕ್ಷ್ಮಿಯ ಕಡೆಯ ಚಲನವಲನ ಕೂಡ ಪತ್ತೆಯಾಗಿವೆ. ಆದರೆ ಕೊಲೆ ಮಾಡಿದ್ದು ಮುಕ್ತಿನಾ ಅಥವಾ ಅಶ್ರಫ್ ಎನ್ನೋದು ಯಕ್ಷ ಪ್ರಶ್ನೆಯಾಗಿದ್ದು ಪೊಲೀಸರು ಆರೋಪಿಗಳಿಗೆ ಬಲೆ ಬೀಸಿದ್ದಾರೆ.


