Select Page

Advertisement

ಇನ್ನೈದು ವರ್ಷದಲ್ಲಿ ರಾಜಹಂಸಗಡ ಉತ್ಕೃಷ್ಟ ಪ್ರವಾಸಿ ಕೇಂದ್ರ ಆಗಲಿದೆ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಇನ್ನೈದು ವರ್ಷದಲ್ಲಿ ರಾಜಹಂಸಗಡ ಉತ್ಕೃಷ್ಟ ಪ್ರವಾಸಿ ಕೇಂದ್ರ ಆಗಲಿದೆ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಬೆಳಗಾವಿ : ರಾಜಹಂಸಗಡ ಕೊಟೆಯಲ್ಲಿ ಛತ್ರಪತಿ ಶಿವಾಜಿಯ ಬೃಹತ್ ಮೂರ್ತಿ ಪ್ರತಿಷ್ಠಾಪನೆಯ ನಂತರ ದೊಡ್ಡ ಮಟ್ಟದಲ್ಲಿ ಪ್ರವಾಸಿಗರನ್ನು ಸೆಳೆಯುತ್ತಿದೆ. ಮುಂದಿನ 5 ವರ್ಷದಲ್ಲಿ ಇದೊಂದು ಉತ್ತಮ ಪ್ರವಾಸಿ ಕೇಂದ್ರವಾಗಿ ಬೆಳೆಯುವ ಜೊತೆಗೆ, ಗ್ರಾಮವೂ ಸಾಕಷ್ಟು ಅಭಿವೃದ್ದಿಯಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.

ರಾಜಹಂಸಗಡ ಗ್ರಾಮದಲ್ಲಿ ನೂತನ ಶ್ರೀ ಮರಗಾಯಿ ಮೂರ್ತಿಯ ಪ್ರತಿಷ್ಠಾಪಣೆ ಹಾಗೂ ಮಹಾಪ್ರಸಾದ ಸೇವೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಚಿವರು, ರಾಜಹಂಸಗಡ ಕೋಟೆಯಲ್ಲಿ ಛತ್ರಪತಿ ಶಿವಾಜಿಯ ಮಾದರಿ ಮೂರ್ತಿ ಸ್ಥಾಪನೆ ಮಾಡಲಾಗಿದೆ. ಮಹಾರಾಷ್ಟ್ರದಿಂದ ಆಗಮಿಸಿದ್ದ ಹಲವಾರು ಮುಖಂಡರು ತಮ್ಮ ರಾಜ್ಯದಲ್ಲೂ ಇಷ್ಟೊೆದು ಉತ್ತಮವಾದ ಮೂರ್ತಿ ಇಲ್ಲ ಎನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಈಗ ರಾಜಹಂಸಗಡ ಕೊಟೆ ಸಾಕಷ್ಟು ಪ್ರವಾಸಿಗರನ್ನು ಸೆಳೆಯುತ್ತಿದೆ. ಇಲ್ಲಿಯ ಭೂಮಿಗೂ ಉತ್ತಮ ಬೆಲೆ ಬರಲಿದೆ. ಜನರಿಗೆ ಉದ್ಯೋಗಾವಕಾಶ ಹೆಚ್ಚಲಿದೆ. ವ್ಯಾಪಾರ ವಹಿವಾಟು ಸುಧಾರಣೆಯಾಗಲಿದೆ. ಒಟ್ಟಾರೆ ಗ್ರಾಮ ಉತ್ತಮ ರೀತಿಯಲ್ಲಿ ಬೆಳವಣಿಗೆ ಕಾಣಲಿದೆ ಎಂದು ಹೇಳಿದರು.


ಕ್ಷೇತ್ರದ ಯಾವುದೇ ಭಾಗದ ಜನರು ಬಂದು ಕೇಳಿದರೂ ಕೆಲಸ ಮಾಡಿಕೊಡುತ್ತಿದ್ದೇನೆ. ಮೊದಲು ಬೆಳಗಾವಿ ಗ್ರಾಮೀಣ ಕ್ಷೇತ್ರ ಎನ್ನುವುದು ಯಾರಿಗೂ ಗೊತ್ತಿರಲಿಲ್ಲ. ಈಗ ರಾಜ್ಯದ ಯಾವ ಮೂಲೆಗೆ ಹೋದರೂ ಬೆಳಗಾವಿ ಗ್ರಾಮೀಣ ಕ್ಷೇತ್ರ ಚಿರಪರಿಚಿತವಾಗಿದೆ.

ಬಾರಾಮತಿಯ ಮಾದರಿಯಲ್ಲಿ ಗ್ರಾಮೀಣ ಕ್ಷೇತ್ರವನ್ನು ಅಭಿವೃದ್ಧಿ ಮಾಡಬೇಕೆನ್ನುವ ಕನಸು ಹೊತ್ತು ಕೆಲಸ ಮಾಡುತ್ತಿದ್ದೇನೆ. ಚುನಾವಣೆ ಮುಗಿದ ನಂತರ ಯಾವುದೇ ರಾಜಕಾರಣವಿಲ್ಲದೆ ಎಲ್ಲರನ್ನೂ ಒಟ್ಟಾಗಿಸಿಕೊಂಡು ಕೆಲಸ ಮಾಡುತ್ತಿದ್ದೇನೆ. ಕ್ಷೇತ್ರದಲ್ಲಿ 140ಕ್ಕೂ ಹೆಚ್ಚು ಮಂದಿರಗಳನ್ನು ನಿರ್ಮಾಣ ಮಾಡಲಾಗಿದೆ. ಎಂದು ಸಚಿವರು ಹೇಳಿದರು.

ಎಪಿಎಂಸಿ ಮಾಜಿ ಅಧ್ಯಕ್ಷ ಯುವರಾಜ ಕದಂ ಮಾತನಾಡಿ, ಲಕ್ಷ್ಮೀ ಹೆಬ್ಬಾಳಕರ್ ಸಚಿವರಾದ ನಂತರ ಕ್ಷೇತ್ರ ಸಾಕಷ್ಟು ಅಭಿವೃದ್ಧಿ ಕಂಡಿದೆ. ಪಕ್ಷ ಭೇದ ಮರೆತು ಎಲ್ಲರ ಕೆಲಸ ಮಾಡಿಕೊಡುತ್ತಿದ್ದಾರೆ. ಸಾಕಷ್ಟು ಜನರಿಗೆ ಉದ್ಯೋಗಕ್ಕೆ, ಶಿಕ್ಷಣಕ್ಕೆ ನೆರವಾಗಿದ್ದಾರೆ. ಇಂತಹ ಶಾಸಕರನ್ನು ಹಿಂದೆಂದೂ ಕಂಡಿರಲಿಲ್ಲ. ಇಂತವರನ್ನು ಬೆಂಬಲಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಸ್ಥಳೀಯ ಮಹಿಳೆಯರಿಗೆ ವಿವಿಧ ಮಾಸಾಶನಗಳ ಆದೇಶ ಪತ್ರಗಳನ್ನು ಸಚಿವರು ಹಸ್ತಾಂತರಿಸಿದರು. ಕಾರ್ಯಕ್ರಮದಲ್ಲಿ ಸಿದ್ದಪ್ಪ ಛತ್ರೆ, ದತ್ತಾ ಪವಾರ್, ಬಾಹು ಪವಾರ, ಲಕ್ಷ್ಮಣ ಚೌಹಾನ್, ಪರಶುರಾಮ ನಿಲಜಕರ್, ಸಿದ್ದಪ್ಪ ಪಂಜಾಕರ್, ರಾಮಾ ಥೋರಾವತ್, ರಾಜು ಯಳೇಬೈಲಕರ್, ರಾಮಚಂದ್ರ ಗಡ್ಕರಿ, ಯಲ್ಲಪ್ಪ ಥೋರಾವತ್, ಗುಂಡು ನಿಲಗಟ್ಕರ್, ಸಿ.ಪಿ‌.ಆಯ್ ನಾಗನಗೌಡ, ಕೃಷ್ಣ ತಾವಸೆ ಮೊದಲಾದವರು ಉಪಸ್ಥಿತರಿದ್ದರು.

Advertisement

Leave a reply

Your email address will not be published. Required fields are marked *

error: Content is protected !!