ಗೋಕಾಕ್ ನಲ್ಲಿ ಲಕ್ಷ್ಮೀ ದೇವಿ ಜಾತ್ರೆ ಸಡಗರ
ಗೋಕಾಕ : ಗ್ರಾಮ ದೇವತೆಯರ ಜಾತ್ರಾ ಮಹೋತ್ಸವದ ಎರಡನೇ ದಿನವಾದ ಮಂಗಳವಾರದಂದು ಗ್ರಾಮ ದೇವತೆಯರು ಸೇರಿದಂತೆ ನಗರದ ಎಲ್ಲ ದೇವಸ್ಥಾನಗಳಲ್ಲ ಪುರ ಜನರಿಂದ ನೈವೇದ್ಯ ಅರ್ಪಣೆ ಜರುಗಿತು.
ಮುಂಜಾನೆ 3 ಗಂಟೆಯಿಂದಲೇ ಪ್ರಾರಂಭವಾದ ಪುರ ಜನತೆಯ ನೈವೇದ್ಯ ಅರ್ಪಣೆ ಕಾರ್ಯಕ್ರಮದ ಸಂಜೆಯವರೆಗೂ ಜರುಗಿತು. ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಭಕ್ತಿ ಭಾವದಿಂದ ಶ್ರೀದೇವಿಯರಿಗೆ ನೈವೇದ್ಯ ಅರ್ಪಿಸಿ ದೇವಿಯರ ಅನುಗ್ರಕ್ಕೆ ಪಾತ್ರರಾದರು.
ನಗರದ ಎರಡು ಶ್ರೀ ಮಹಾಲಕ್ಷ್ಮಿ ದೇವಿಯರಿಗೆ ಮುಂಜಾನೆ 6ರಿಂದ 8ರವರೆಗೆ ಅಭಿಷೇಕ ಮತ್ತು ವಿಶೇಷ ಪೂಜಾ ಸಮಾರಂಭ ಜರುಗಿತು. ಸಂಜೆ 4ರಿಂದ ಶ್ರೀ ಮಹಾಲಕ್ಷ್ಮಿ ದೇವಿಯರ ಪಲ್ಲಕ್ಕಿ ಹಾಗೂ ಮುತ್ತೈದೇಯರು ಮತ್ತು ಪುರ ಜನತೆ ಕೂಡಿ ಊರೋಳಗಿನ ಶ್ರೀ ಮಹಾಲಕ್ಷ್ಮಿ
ದೇವಸ್ಥಾನದಿಂದ ಸಕಲ ವಾದ್ಯಮೇಳದೊಂದಿಗೆ ವಿಜೃಂಭಣೆಯಿಂದ ನಗರದ ಮುಖ್ಯ ಬೀದಿಗಳಲ್ಲಿ ಸಂಚರಿಸಿ ಶ್ರೀ ದ್ಯಾಮವ್ವನ ಗುಡಿಗೆ ಆಗಮಿಸಿ ಪುನಃ ಶ್ರೀ ಮಹಾಲಕ್ಷ್ಮಿ ಗುಡಿಗೆ ತಲುಪಿತು. ನಗರದ ಎಲ್ಲೇಡೆ ಮಹಿಳೆಯರು ಮಕ್ಕಳು ದೇವ ಮಂದಿರಗಳಲ್ಲಿ ಕಂಡು ಬಂದರು.
ನೈವೇದ್ಯ ಅರ್ಪಣೆ ಮತ್ತು ಉಡಿ ತುಂಬುವ ಸ್ಥಳಗಳಲ್ಲಿ ಪೋಲಿಸ್ ಇಲಾಖೆಯಿಂದ ಬ್ಯಾರಿಕೇಡಗಳನ್ನು ಅಳವಢಿಸಿ ಸುವ್ಯವಸ್ಥೆಯಿಂದ ದೇವಿಯರ ದರ್ಶನ ಮಾಡಲು ಅವಕಾಶ ಕಲ್ಪಿಸಿದ್ದರು. ನಗರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪುರಜನರಿದ್ದರು.
ಶಾಂತಿಯುತವಾಗಿ ಭಕ್ತಿಭಾವದಿಂದ ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಂಡಿದ್ದರು. ನಗರದಲ್ಲಿ ಟ್ರಾಫೀಕ್ ಸಮಸ್ಯೆಯಾಗದಂತೆ ಪ್ರಮುಖ ದೇವಾಲಗಳಿಗೆ ಸಾಗುವ ರಸ್ತೆಗಳಿಗೆ ಸುಮಾರು ಅರ್ಧ ಕೀಲೊ ಮೀಟರ್ನಷ್ಟು ಮೊದಲೇ ಬ್ಯಾರಿಕೇಡ ಅಳವಢಿಸಿ ವಾಹನಗಳ ಒಡಾಟವನ್ನು ನಿಷೇಧಿಸಲಾಗಿತ್ತು.
ಶಾಸಕ ಹಾಗೂ ಶ್ರೀ ಮಹಾಲಕ್ಷ್ಮೀ ದೇವಿ ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ರಮೇಶ ಜಾರಕಿಹೊಳಿ, ಹಿರಿಯ ರಾಜಕೀಯ ಮುಖಂಡ ಅಶೋಕ ಪೂಜಾರಿ ಸೇರಿದಂತೆ ಗಣ್ಯರು ಗ್ರಾಮ ದೇವತೆಯರ ದರ್ಶನ ಪಡೆದರು.


