ಸವದಿ ಕಟ್ಟಿಹಾಕಲು ಸಾಹುಕಾರ್ ಹೊಸ ತಂತ್ರ ; ಆಪ್ತರಿಗೆ ಹುದ್ದೆ…!

ಬೆಳಗಾವಿ : ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹಾಗೂ ಜಾರಕಿಹೊಳಿ ಕುಟುಂಬದ ನಡುವಿನ ರಾಜಕೀಯ ಜಿದ್ದಾಜಿದ್ದಿ ಸಧ್ಯಕ್ಕಂತೂ ಮುಗಿಯುವ ಲಕ್ಷಣ ಗೋಚರಿಸುತ್ತಿಲ್ಲ. ಅವಕಾಶ ಸಿಕ್ಕಾಗ ಲಕ್ಷ್ಮಣ ಸವದಿಗೆ ರಾಜಕೀಯ ಏಟು ನೀಡುತ್ತಿರುವ ಜಾರಕಿಹೊಳಿ ಸಹೋದರರು ಈಗ ಮತ್ತೊಂದು ಬಾಣ ಬಿಟ್ಟಿದ್ದಾರೆ.
ಹೌದು ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಅವಿರೋಧ ಆಯ್ಕೆ ಬಯಸಿದ್ದ ಲಕ್ಷ್ಮಣ ಸವದಿಗೆ ಚುನಾವಣೆ ಮೂಲಕವೇ ಗೆಲುವು ಸಾಧಿಸುವ ಅನಿವಾರ್ಯತೆಯನ್ನು ಜಾರಕಿಹೊಳಿ ಸಹೋದರರು ಮಾಡಿದ್ದರು. ನಂತರ ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಸವದಿಗೆ ಅಲ್ಲಿಯೂ ಹಿನ್ನಡೆಯಾಯಿತು. ಸಧ್ಯ ಈಗ ಮತ್ತೊಂದು ಗೇಮ್ ಮೂಲಕ ಜಾರಕಿಹೊಳಿ ಸಹೋದರರು ಟಕ್ಕರ್ ನೀಡಿದ್ದಾರೆ.
ಡಿಸಿಸಿ ಬ್ಯಾಂಕ್ ಕರ್ತವ್ಯನಿರತ ನೌಕರರ ಸಂಘದ ಅಧ್ಯಕ್ಷನ ಮೇಲೆ ನಡೆದ ಹಲ್ಲೆ ವಿಚಾರ ಸಾಕಷ್ಟು ಸೌಂಡ್ ಮಾಡಿತ್ತು. ಈ ಸಂದರ್ಭದಲ್ಲಿ ಸವದಿ ವಿರುದ್ಧ ಡಿಸಿಸಿ ಬ್ಯಾಂಕ್ ನೌಕರರು ಬೀದಿಗಿಳಿದು ಹೋರಾಟ ಮಾಡಿದ್ದರು. ಇಷ್ಟೆಲ್ಲಾ ಬೆಳವಣಿಗೆ ಮಧ್ಯೆ ಲಕ್ಷ್ಮಣ ಸವದಿ ತವರು ಕ್ಷೇತ್ರದ ಮಹಿಳೆಯನ್ನು ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ.
ಅಥಣಿ ಕಾಂಗ್ರೆಸ್ ನಲ್ಲಿ ಎರಡು ಗುಂಪು ಇದ್ದು ಮೂಲ ಕಾಂಗ್ರೆಸ್ ಬಣದಲ್ಲಿ ಗುರುತಿಸಿಕೊಂಡಿರುವ ಸುನಿತಾ ಐಹೊಳೆ ಎಂಬುವವರನ್ನು ಡಿಸಿಸಿ ಬ್ಯಾಂಕ್ ನಾಮ ನಿರ್ದೇಶಿತ ಸದಸ್ಯರನ್ನಾಗಿ ಆಯ್ಕೆ ಮಾಡಿದ್ದಾರೆ. ಈ ಮೂಲಕ ಲಕ್ಷ್ಮಣ ಸವದಿ ತವರು ಕ್ಷೇತ್ರದ ಪ್ರತಿನಿಧಿಯನ್ನು ಸಧ್ಯ ಡಿಸಿಸಿ ಬ್ಯಾಂಕಿಗೆ ತರುವ ಕೆಲಸ ಮಾಡಿದ್ದಾರೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಪರವಾಗಿ ಸಾಕಷ್ಟು ಕೆಲಸ ಮಾಡಿದ್ದ ಸುನಿತಾ ಐಹೊಳೆಯನ್ನು ಸಚಿವ ಸತೀಶ್ ಜಾರಕಿಹೊಳಿ ಅವರೇ ಡಿಸಿಸಿ ಬ್ಯಾಂಕ್ ನಾಮ ನಿರ್ದೇಶಿತ ಸ್ಥಾನಕ್ಕೆ ಶಿಪಾರಸ್ಸು ಮಾಡಿದ್ದು ತಮ್ಮ ಆಪ್ತ ವಲಯದಲ್ಲಿ ಗುರುತಿಸಿಕೊಂಡವರಿಗೆ ಮಹತ್ವದ ಸ್ಥಾನ ನೀಡುವಲ್ಲಿ ಸಫಲರಾಗಿದ್ದಾರೆ.


