ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಸೋಲಾದರೆ ಸಚಿವ ಜಮೀರ್ ತಲೆದಂಡ….?
ಬೆಂಗಳೂರು : ಚನ್ನಪಟ್ಟಣ ಸೇರಿದಂತೆ ರಾಜ್ಯದ ಮೂರು ಕ್ಷೇತ್ರಗಳ ಉಪ ಚುನಾವಣಾ ಫಲಿತಾಂಶ ನ. 23 ಬರಲಿದೆ. ಈ ಮಧ್ಯೆ ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ಅನುಭವಿಸಿದರೆ ಸಚಿವ ಜಮೀರ್ ಅಹಮ್ಮದ್ ಖಾನ್ ಅವರ ತಕೆದಂಡ ನಿಶ್ಚಿತ ಎಂದೇ ಹೇಳಲಾಗುತ್ತಿದೆ.
ಚನ್ನಪಟ್ಟಣ ಉಪ ಚುನಾವಣೆ ಪ್ರಚಾರ ಸಂದರ್ಭದಲ್ಲಿ ಕುಮಾರಸ್ವಾಮಿ ಅವರನ್ನು ಕರಿಯ ಎಂದು ಜಮೀರ್ ಆಡಿಕೊಂಡಿದ್ದರು. ಇದರಿಂದ ಒಬ್ಬರು ಸಚಿವರಾಗಿ ವ್ಯಕ್ತಿಯ ಬಣ್ಣದ ಕುರಿತು ಇಷ್ಟೊಂದು ಕೀಳುಮಟ್ಟದ ಹೇಳಿಕೆ ನೀಡಿದರೆ ಅವರಿಗೆ ಕಾನೂನು ಅಡಿಯಲ್ಲಿ ಶಿಕ್ಷೆ ಇಲ್ಲವಾ ಎಂಬ ಮಾತು ಎಲ್ಲೆಡೆ ಜೋರಾಗಿವೆ.
ಈ ಮಧ್ಯೆ ಕುಮಾರಸ್ವಾಮಿ ಅವರಿಗೆ ಕರಿಯ ಎಂದು ಕರೆದಿದ್ದಕ್ಕೆ ಸಚಿವ ಜಮೀರ್ ಅಹಮ್ಮದ್ ಅವರ ವಿರುದ್ಧ ಜೆಡಿಎಸ್ ಆಕ್ರೋಶ ಹೊರಹಾಕುತ್ತಿದೆ. ಅಷ್ಟೇ ಅಲ್ಲದೆ ಹೋರಾಟವನ್ನು ಕೈಗೊಂಡಿದೆ. ಇನ್ನೂ ಒಕ್ಕಲಿಗ ಮಹಾಸಭಾ ಕೂಡಾ ಜಮೀರ್ ಹೇಳಿಕೆಗೆ ಆಕ್ರೋಶ ಹೊರಹಾಕಿದೆ.
ಜಮೀರ್ ಅಹಮ್ಮದ್ ಹೇಳಿಕೆ ವಿಚಾರವಾಗಿ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದ್ದು ಕಾಂಗ್ರೆಸ್ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರೂ ಕ್ರಮದ ಕುರಿತು ಮಾತನಾಡಿದ್ದಾರೆ. ಇದೇ ಕಾರಣಕ್ಕೆ ಉಪ ಚುನಾವಣೆ ಫಲಿತಾಂಶದ ನಂತರ ಸಚಿವ ಜಮೀರ್ ಅಹಮ್ಮದ್ ತಲೆದಂಡ ಆದರೂ ಅಚ್ಚರಿಯಿಲ್ಲ.


