Select Page

ಜಾರಕಿಹೊಳಿ ಸಹೋದರರ ವಿರುದ್ಧ ಸಿಡಿದ ಸಚಿವೆ ಹೆಬ್ಬಾಳ್ಕರ್…! ಬೆಳಗಾವಿ ದಂಗಲ್

ಜಾರಕಿಹೊಳಿ ಸಹೋದರರ ವಿರುದ್ಧ ಸಿಡಿದ ಸಚಿವೆ ಹೆಬ್ಬಾಳ್ಕರ್…! ಬೆಳಗಾವಿ ದಂಗಲ್

ಬೆಳಗಾವಿ : ಲೋಕಸಭಾ ಚುನಾವಣೆ ಫಲಿತಾಂಶದ ನಂತರ ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು ಎರಡು ಕುಟುಂಬಗಳ ನಡುವಿನ ಜಿದ್ದಾಜಿದ್ದಿ ಸಮರ ಮುಂದುವರಿದಿದೆ. ಅತ್ತ ಚಿಕ್ಕೋಡಿ ಲೋಕಸಭಾ ಚುನಾವಣೆಯಲ್ಲಿ ಪುತ್ರಿಯನ್ನು ಕಣಕ್ಕೆ ಇಳಿಸಿ ಗೆಲ್ಲಿಸುವಲ್ಲಿ ಸಚಿವ ಸತೀಶ್ ಯಶಸ್ವಿಯಾಗಿದ್ದರೆ, ಇತ್ತ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಪುತ್ರ ಮೃಣಾಲ್ ಸೋಲು ಕೆಲವರನ್ನು ಕಂಗೆಡಿಸಿದೆ. ಈ ನಡುವೆ ಎರಡು ಕುಟುಂಬದ ಮಧ್ಯೆ ಮಾತಿನ ಸಮಯ ಜೋರಾಗಿದ್ದು ಸಧ್ಯ ಸಾರ್ವಜನಿಕ ವಲಯದಲ್ಲಿ ಚರ್ಚೆ ಜೋರಾಗುತ್ತಿದೆ.

ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಪುತ್ರ ಮೃಣಾಲ್‌ ಅವರನ್ನು ಬೆಳಗಾವಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಘೋಷಣೆ ಮಾಡುತ್ತಿದ್ದಂತೆ ಅತ್ತ ಆ್ಯಕ್ಟಿವ್ ಆಗಿದ್ದ ರಮೇಶ್ ಜಾರಕಿಹೊಳಿ ಚುನಾವಣಾ ರಣತಂತ್ರ ಹೆಣೆಯುವಲ್ಲಿ ಯಶಸ್ವಿಯಾಗಿದ್ದರು‌. ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರನ್ನೇ ಬಿಜೆಪಿ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದರ ಹಿಂದೆ ರಮೇಶ್ ಜಾರಕಿಹೊಳಿ ಆಸಕ್ತಿ ಇತ್ತು ಎಂಬುದು ಗುಟ್ಟಾಗಿ ಉಳಿದಿಲ್ಲ.

ಚುನಾವಣೆ ಮುಗಿಯುವ ವರೆಗೆ ನಾನು ಒಂದು ಮಾತು ಆಡಲ್ಲ ಎಂದು ಹೇಳುವ ಮೂಲಕ ಸಹೋದರ ಬಾಲಚಂದ್ರ ಜಾರಕಿಹೊಳಿ ಅವರಿಗೆ ಕೊಟ್ಟ ಮಾತಿನಂತೆ ಲೋಕಸಭಾ ಚುನಾವಣೆ ಫಲಿತಾಂಶದ ವರೆಗೂ ರಮೇಶ್ ಜಾರಕಿಹೊಳಿ ಸೈಲೆಂಟ್ ಆಗಿದ್ದರು‌. ಯಾವಾಗ ಫಲಿತಾಂಶದಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು, ಆಗಲೆ ಸಚಿವೆ ಹೆಬ್ಬಾಳ್ಕರ್ ಹಾಗೂ ಡಿಸಿಎಂ ಡಿಕೆಶಿ ವಿರುದ್ಧ ಬಹಿರಂಗ ವಾಗ್ದಾಳಿ ನಡೆಸಿದ್ದರು.

ಸಚಿವೆ ಹೆಬ್ಬಾಳ್ಕರ್ ವಿಷಕನ್ಯೆ, ಅಂಗನವಾಡಿ ಕಾರ್ಯಕರ್ತೆಯರಿಂದ ಲಂಚ ಪಡೆದಿದ್ದರ ಕಾರಣಕ್ಕೆ ಆ ಶಾಪದಿಂದ ಸೋಲಾಯಿತು, ಡಿಸಿಎಂ ಹಾಗೂ ಹೆಬ್ಬಾಳಕರ್ ಸೊಕ್ಕಿನಿಂದ ಇಬ್ಬರೂ ಸೋಲು ಅನುಭವಿಸಿದರು. ಹಾಗೆಯೇ ಹಣದಿಂದ ಚುನಾವಣೆ ಮಾಡಲು ಹೊರಟವರಿಗೆ ಜನ ಬುದ್ದಿ ಕಲಿಸಿದ್ದಾರೆ ಎಂಬ ಮಾತುಗಳನ್ನು ಆಡುವ ಮೂಲಕ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದರು.

ಇತ್ತ ಸಹೋದರ ಹಾಗೂ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಕೂಡಾ, ಬೆಳಗಾವಿಯಲ್ಲಿ ಕಾಂಗ್ರೆಸ್ ಸೋಲಿನ ಕುರಿತು ಅನೇಕ ಟಿಪ್ಪಣಿ ಮಾಡಿದ್ದರು. ವಿರೋಧಿಗಳ ತಂತ್ರ ಅರ್ಥಮಾಡಿಕೊಳ್ಳುವಲ್ಲಿ ನಮ್ಮವರು ವಿಫಲರಾದರು ಎಂದು ಪರೋಕ್ಷವಾಗಿ ಸಚಿವೆ ಹೆಬ್ಬಾಳ್ಕರ್ ವಿರುದ್ಧ ಮಾತನಾಡಿದ್ದರು. ಅಷ್ಟೇ ಅಲ್ಲದೆ ಸಚಿವೆ ಹೆಬ್ಬಾಳ್ಕರ್ ಆಪ್ತ ಬಳಗದ ಶಾಸಕರಾದ ಲಕ್ಷ್ಮಣ ಸವದಿ ಹಾಗೂ ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ವಿರುದ್ಧ ಸತೀಶ್ ಜಾರಕಿಹೊಳಿ ಆರೋಪ ಮಾಡಿದ್ದರು.

ಸಧ್ಯ ಜಾರಕಿಹೊಳಿ ಸಹೋದರರು ಮಾಡಿದ್ದ ಆರೋಪಕ್ಕೆ ಸಚಿವೆ ಹೆಬ್ಬಾಳ್ಕರ್ ತೀಕ್ಷ್ಣವಾಗಿಯೇ ತಿರುಗೇಟು ನೀಡಿದ್ದಾರೆ‌. ಶುಕ್ರವಾರ ನಡೆದ ಅಂಗನವಾಡಿ ಕಾರ್ಯಕರ್ತೆಯರ ಸಮಾವೇಶದಲ್ಲಿ ತಮ್ಮ ವಿರುದ್ಧ ಹೇಳಿಕೆ ನೀಡಿದವರಿಗೆ ಟಾಂಗ್ ನೀಡುವ ಮೂಲಕ ಭಹಿರಂಗ ಸಮರಕ್ಕೆ ಇಳಿದಿದ್ದಾರೆ. ಸಚಿವೆ ಹೆಬ್ಬಾಳ್ಕರ್ ಮಾತನಾಡಿ.

ನನ್ನ ಕುರಿತು ಯಾರು ಏನೇ ಅಂದರು ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ಅವರು ಏನು ಅಂತ ರಾಜ್ಯದ ಜನ ನೋಡಿದೆ ಎಂದು ನೇರವಾಗಿ ರಮೇಶ್ ಜಾರಕಿಹೊಳಿ ವಿರುದ್ಧ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಗುಡುಗಿದ್ದಾರೆ.

ರಮೇಶ್ ಜಾರಕಿಹೊಳಿ ಸಚಿವೆ ಹೆಬ್ಬಾಳ್ಕರ್ ಅವರಿಗೆ ವಿಷಕನ್ಯೆ ಎಂದು ಹೇಳಿದ್ದ ವಿಷವಾಗಿ ಪ್ರತಿಕ್ರಿಯೆ ನೀಡಿ, ಭಾರತೀಯ ಸಂಸ್ಕೃತಿ ಮೇಲೆ ವಿಶ್ವಾಸ ಇಟ್ಟವರು ನಾವು. ಅವರು ನನ್ನ ಕುರಿತು ಏನೇ ಹೇಳಿಕೆ ನೀಡಿದರು ಜನ ಉತ್ತರ ಕೊಡುತ್ತಾರೆ. ಅವರು ಏನು? ಅವರ ಸಂಸ್ಕೃತಿ ಎಂತಹದು ಎಂದು ರಾಜ್ಯದ ಜನ ನೋಡಿದ್ದಾರೆ ಎಂದು ತಿರುಗೇಟು ನೀಡಿದರು.

ದುಡ್ಡಿನಿಂದ ಚುನಾವಣೆ ಮಾಡಲು ಹೊರಟ್ಟಿದ್ದೀರಿ ಎಂಬ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು. ನಾನು ಹೆಸರಿಗೆ ಮಾತ್ರ ಲಕ್ಷ್ಮೀ ನಮ್ಮ ಬಳಿ ಎಲ್ಲಿಂದ ಹಣ ಬರುತ್ತದೆ. ಅವರೇ ಸಾಹುಕಾರರು ಎಂದು ಮಾರ್ಮಿಕವಾಗಿ ಉತ್ತರಿಸಿದರು. ಅಂಗನವಾಡಿ ಕಾರ್ಯಕರ್ತೆಯರ ಬಳಿ ಒಂದು ಲಕ್ಷ ರೂ. ಹಣ ಪಡೆದ ಆರೋಪ ಅವರು ಮಾಡುತ್ತಿದ್ದಾರೆ, ಅವರ ಬಳಿ ದಾಖಲೆ ಇದ್ದರೆ ತಗೆದುಕೊಂಡು ಬಂದು ಸಾಬೀತು ಮಾಡಲಿ ಎಂದು ಗುಡುಗಿದರು.

ಲೋಕಸಭಾ ಚುನಾವಣೆ ಸಂದರ್ಭದಲ್ಲಿ ವಿರೋಧ ಪಕ್ಷಗಳ ತಂತ್ರ ಅರಿಯುವಲ್ಲಿ ನಮ್ಮವರು ವಿಫಲರಾದರು ಎಂಬ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿ. ಚುನಾವಣೆ ಸತೀಶ್ ಜಾರಕಿಹೊಳಿ ಅವರು ಕೊಟ್ಟ ಪ್ರತಿಕ್ರಿಯೆ ಅದು ಅವರ ಅಭಿಪ್ರಾಯ. ನಾನು ಸೋತ ಮಾತ್ರಕ್ಕೆ ಯಾರ ವಿರುದ್ಧ ಆರೋಪ ಮಾಡುವುದಿಲ್ಲ‌. ಈ ಕುರಿತು ಚರ್ಚೆ ನಡೆಸುತ್ತೇವೆ. ನಾನು ಪಕ್ಷ ಸಂಘಟನೆ ಕೆಲಸ ಮುಂದುವರಿಸುವೆ ಎಂದರು.

ವಿಧಾನ ಪರಿಷತ್ ಚುನಾವಣೆಯಲ್ಲಿ ಯಾರ ಸೊಕ್ಕಿನಿಂದ ಏನಾಯಿತು ಎನ್ನುವುದು ರಾಜ್ಯದ ಜನರಿಗೆ ಗೊತ್ತಾಗಿದೆ. ಇಡೀ ಕರ್ನಾಟಕ ರಾಜ್ಯದಲ್ಲಿ ಹೆಚ್ಚಿನ ಮತಗಳಿಂದ ಚನ್ನರಾಜ ಹಟ್ಟಿಹೊಳಿ ಗೆಲುವು ಸಾಧಿಸಿದರು. ಬಳಿಕ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಗ್ರಾಮೀಣ ಮತಕ್ಷೇತ್ರದಲ್ಲಿ ಶತಾಯಗತಾಯ ನನಗೆ ಸೋಲಿಸಬೇಕು ಎಂದು ಬಂದಿದ್ದರು. ಅದಕ್ಕೆ ಜನ ಏನೂ ಉತ್ತರ ಕೊಟ್ಟಿದ್ದಾರೆ ಎನ್ನುವುದು ಗೊತ್ತು ಎಂದು ತಿರುಗೇಟು ನೀಡಿದರು.

Advertisement

Leave a reply

Your email address will not be published. Required fields are marked *

error: Content is protected !!