ಅಥಣಿ – ಸಚಿವೆ ಹೆಬ್ಬಾಳ್ಕರ್ ಬಂದ್ರು ಹಣ ಪಡೆದು ಅರ್ಜಿ ಹಾಕುವೆ ಎಂದವನ ಗ್ರಾಮ ಒನ್ ಕೇಂದ್ರ ಸೀಜ್
ಅಥಣಿ : ತಾಲೂಕಿನ ಅವರಖೋಡ ಗ್ರಾಮದ ಗ್ರಾಮ ಒನ್ ಕೇಂದ್ರದಲ್ಲಿ ಜನರಿಂದ ಹಣ ವಸೂಲಿ ಮಾಡಿ ಗೃಹಲಕ್ಷ್ಮೀ ಅರ್ಜಿ ಹಾಕುತ್ತಿದ್ದ ಗ್ರಾಮ ಒನ್ ಕೇಂದ್ರವನ್ನ ಅಧಿಕಾರಿಗಳು ಸೀಜ್ ಮಾಡಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಗೃಹಲಕ್ಷ್ಮೀ ಅರ್ಜಿ ಹಾಕುವಾಗ ಹಣ ಪಡೆದರೆ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತದೆ ಎಂದು ಹೇಳಿದ್ದಾರೆ. ಜೊತೆಗೆ ಅವರಖೋಡದಲ್ಲಿನ ಗ್ರಾಮ ಒನ್ ಕೇಂದ್ರವನ್ನು ಸೀಜ್ ಮಾಡಲಾಗಿದೆ.
ಏನಾಗುತ್ತು….? ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಯಲ್ಲಿ ಒಂದಾದ ಗೃಹಲಕ್ಷೀ ಯೋಜನೆ ಅರ್ಜಿ ಪ್ರಾರಂಭವಾಗಿದ್ದು, ಗ್ರಾಮ ಒನ್ ಸಿಬ್ಬಂದಿ ಯಾವುದೇ ಹಣ ಪಡೆಯದೆ ಅರ್ಜಿ ಹಾಕಬೇಕು ಎಂದು ಸರ್ಕಾರ ಹೇಳಿದೆ. ಆದರೆ ಇಲ್ಲೊಬ್ಬ ಆಸಾಮಿ ಸಚಿವೆ ಹೆಬ್ಬಾಳ್ಕರ್ ಬಂದ್ರು ಫ್ರೀಯಾಗಿ ಅರ್ಜಿ ಹಾಕಲ್ಲ ಎಂದು ಕಿರಿಕ್ ತಗೆದಿದ್ದಾನೆ.
ಹೌದು ಚಿಕ್ಕೋಡಿ ತಾಲೂಕಿನ ಅವಖೋಡ ಗ್ರಾಮದ ಗ್ರಾಮ ಒನ್ ಕೇಂದ್ರದಲ್ಲಿ ಹಣ ಪಡೆದು ಗೃಹಲಕ್ಷ್ಮೀ ಅರ್ಜಿ ಹಾಕಲಾಗುತ್ತಿದೆ. ಇದರಿಂದ ಜನಸಾಮಾನ್ಯರು ತೊಂದರೆ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಗ್ರಾಮ ಒನ್ ಸಿಬ್ಬಂದಿ ಮಾತ್ರ ನೂರು ರೂ. ಹಣ ಪಡೆದು ಅರ್ಜಿ ಹಾಕುತ್ತಿದ್ದಾರೆ.
ಹಣ ಪಡೆದು ಅರ್ಜಿ ಯಾಕೆ ಹಾಕುವುದು ಎಂಬ ಪ್ರಶ್ನೆ ಮಾಡಿದರೆ ಗ್ರಾಮ ಒನ್ ಸಿಬ್ಬಂದಿ ವಿತ್ತಂಡವಾದ ಮಾಡುವ ಮೂಲಕ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬರಲಿ ನಾನು ಫ್ರೀಯಾಗಿ ಅರ್ಜಿ ಹಾಕಲ್ಲ. ಯಾರು ಏನು ಬೇಕಾದರು ಮಾಡಲಿ ನಾನು ಹಣ ಪಡೆಯುವೆ ಎಂದು ಕಿರಿಕ್ ತಗೆದಿದ್ದಾನೆ.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ತವರು ನೆಲದಲ್ಲೇ ಈ ರೀತಿಯಲ್ಲಿ ಹಣ ವಸೂಲಿ ಮಾಡುವ ಕೆಲಸ ನಡೆಯುತ್ತಿದ್ದರು, ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿರುವುದು ವಿಪರ್ಯಾಸವೇ ಸರಿ. ಒಟ್ಟಿನಲ್ಲಿ ಗ್ರಾಮ ಒನ್ ಸಿಬ್ಬಂದಿ ಮಾತ್ರ ಸರ್ಕಾರದ ನಿಯಮ ನಮಗೆ ಅನ್ವಯಿಸಲ್ಲ ಎಂದು ಹೇಳುವ ಮೂಲಕ ತಮ್ಮ ಕಾಯಕ ಮುಂದುವರಿಸಿದ್ದಾರೆ.


