Belagavi – ಮಹಿಳೆಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿದ ದುರುಳರು
ಬೆಳಗಾವಿ : ಮಹಿಳೆಯೊಬ್ಬರು ಬ್ಲ್ಯಾಕ್ ಮೇಲ್ ಮಾಡಿ ಹಣಕ್ಕೆ ಭೇಡಿಕೆ ಇಡುತ್ತಾಳೆ ಎಂದು ಆರೋಪಿಸಿ ಆಕೆಯ ಕೊರಳಿಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿರುವ ಅಮಾನವೀಯ ಘಟನೆ ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನ ಘಟಪ್ರಭಾ ಪಟ್ಟಣದಲ್ಲಿ ನಡೆದಿದೆ.
ಶುಕ್ರವಾರ ಸಾಯಂಕಾಲ ಘಟಪ್ರಭಾ ಪಟ್ಟಣದ ಮೃತ್ಯುಂಜಯ ಸರ್ಕಲ್ ನಲ್ಲಿ ಸೇರಿದ್ದ ಕೆಲವರು, ಶ್ರೀದೇವಿ ಗೊಡಚಿ ಎಂಬ ಮಹಿಳೆ ಕೊರಳಿಗೆ ಚಪ್ಪಲಿ ಹಾರ ಹಾಕಿ ಅಮಾನವೀಯವಾಗಿ ಮೆರವಣಿಗೆ ಮಾಡಿದ್ದಾರೆ.
ದುಷ್ಕರ್ಮಿಗಳಿಂದ ದೌರ್ಜನ್ಯಕ್ಕೆ ಒಳಗಾಗಿರುವ ಮಹಿಳೆ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಘಟನೆ ಕುರಿತು ಮಾತನಾಡಿರುವ ಮಹಿಳೆ. ಕಳೆದ ತಿಂಗಳು 30 ರಂದು ದಲಿತ ಸಂಘಟನೆಯವರು ನನ್ನ ಬಳಿ ಬಂದು ಐದು ಲಕ್ಷ ರೂ. ಕೊಡು, ಇಲ್ಲವಾದರೆ ನಿನ್ನ ಗಡಿಪಾರು ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದರು. ಆಗ ನಾನು ಭೀಕ್ಷೆ ಬೇಡಿಕೊಂಡು ಜೀವನ ಮಾಡುತ್ತಿದ್ದು ಎಲ್ಲಿಂದ ಹಣ ಕೊಡಬೇಕು ಎಂದು ಪ್ರಶ್ನಿಸಿದ್ದೆ.
ಆದರೆ ಶುಕ್ರವಾರ ರಾತ್ರಿ ನಮ್ಮ ಮನೆಗೆ ಬಂದ ಕೆಲವರು ಐದು ಲಕ್ಷ ಕೊಡು ಎಂದು ಪೀಡಿಸಿದರು. ನಾನ್ಯಾಕೆ ಹಣ ಕೊಡಬೇಕು ಎನ್ನುತ್ತಿದ್ದಂತೆ ನನಗೆ ಸಿಕ್ಕಾಪಟ್ಟೆ ಹೊಡೆದರು. ಬಳಿಕ ಚಪ್ಪಲಿ ಮಾಲೆ ಹಾಕಿ ಮೆರವಣಿಗೆ ಮಾಡಿದರು ಎಂದು ಕಣ್ಣೀರು ಹಾಕಿದ್ದಾರೆ.


