ಹಂಪಿ ಉತ್ಸವದಲ್ಲಿ ಕುಂದಾನಗರಿ ಕಲರವ ; ಗೆದ್ದು ಬೀಗಿದ ಬೆಳಗಾವಿ ತಂಡ…!
ಹಂಪಿ : ಹಂಪಿ ಉತ್ಸವದಲ್ಲಿ ಜನರ ಆಕರ್ಷಣೆಯಾಗಿದ್ದ ಅಂಗವಿಕಲರ ಕಬಡ್ಡಿ ಕ್ರೀಡಾಕೂಟದಲ್ಲಿ ಬೆಳಗಾವಿ ತಂಡ ಗೆಲುವು ಸಾಧಿಸಿದೆ.
ಹೊಸಪೇಟೆ ಹಾಗೂ ಹರಪನಹಳ್ಳಿ ತಂಡಗಳ ನಡುವೆ ನಡೆದ ಲೀಗ್ ಪಂದ್ಯದಲ್ಲಿ ಹರಪನಹಳ್ಳಿ ತಂಡ ಜಯಗಳಿಸಿತು, ಮತ್ತೊಂದು ಬೆಳಗಾವಿ ಮತ್ತು ಹೂವಿನಹಡಗಲಿ ನಡುವಿನ ಪಂದ್ಯದಲ್ಲಿ ಬೆಳಗಾವಿ ವಿಜಯದ ನಗೆ ಬೀರಿತು.
ಅಂತಿಮ ಲೀಗ್ ಪಂದ್ಯ ಹರಪನಹಳ್ಳಿ ಮತ್ತು ಹಗರಿಬೊಮ್ಮನಳ್ಳಿ ನಡುವೆ ನಡೆಯಿತು. ಹರಪನಹಳ್ಳಿ ತಂಡ ಜಯಗಳಿಸಿ ಫೈನಲ್ ಹಂತಕ್ಕೆ ತಲುಪಿತು. ಅಂತಿಮ ಫೈನಲ್ ಹಣಾಹಣಿಯಲ್ಲಿ ಬೆಳಗಾವಿ ತಂಡ ಹರಪನಹಳ್ಳಿ ತಂಡವನ್ನು 15-11 ಅಂಕಗಳ ಅಂತರದಲ್ಲಿ ಸೋಲುಣಿಸಿತು.
ರಾಹುಲ್ ಅತ್ಯುತ್ತಮವಾಗಿ ರೈಡ್ ಮಾಡಿದರೆ, ಸದಾಶಿವ ಟ್ಯಾಕಲ್ ಮಾಡಿ ಪಂದ್ಯವನ್ನು ಗೆಲುವಿನ ದಡ ಸೇರಿಸಿದರು. ಪಂದ್ಯ ಭಾರಿ ರೋಚಕತೆಯಿಂದ ಕೂಡಿತ್ತು, ಹರಪನಹಳ್ಳಿ ತಂಡ ವಿರೋಚಿತ ಹೋರಾಟ ನಡೆಸಿ ಸೋಲು ಒಪ್ಪಿಕೊಂಡಿತು.
ನೆರೆದಿದ್ದ ಕ್ರೀಡಾಪ್ರೇಮಿಗಳು ಕೇಕೆ, ಶಿಳ್ಳೆಗಳ ಮೂಲಕ ಎರಡೂ ತಂಡಗಳ ಕ್ರೀಡಾಪಟುಗಳನ್ನು ಹುರಿದುಂಬಿಸಿದರು. ಜಯಗಳಿಸಿದ ತಂಡಕ್ಕೆ ಜಿಲ್ಲಾಡಳಿತ ₹20 ಸಾವಿರ ನಗದು, ರನ್ನರ್ ಅಪ್ ತಂಡಕ್ಕೆ ₹10 ಸಾವಿರ ನಗದು ಬಹುಮಾನ ನೀಡಲಾಯಿತು.
ಶಿವಕುಮಾರ್, ಜಿ.ಗೋಪಿ, ಪ್ರಶಾಂತ್, ಶ್ರೀಧರ್ ನಿರ್ಣಾಯಕರಾಗಿದ್ದರು, ಜಿಲ್ಲಾ ಪಂಚಾಯ್ತಿ ಯೋಜನಾಧಿಕಾರಿ ಉಮೇಶ್, ದೈಹಿಕ ಶಿಕ್ಷಣ ಶಿಕ್ಷಕ ಅಶೋಕ್ ಕ್ರೀಡಾಕೂಡದ ಉಸ್ತುವಾರಿ ವಹಿಸಿಕೊಂಡಿದ್ದರು.


