ಅಥಣಿ ನೂತನ ಜಿಲ್ಲೆಗಾಗಿ ಹೆಚ್ಚಿದ ಆಗ್ರಹ
ಬೆಳಗಾವಿ : ಜಿಲ್ಲಾ ಕೇಂದ್ರದಿಂದ ಸುಮಾರು 200 ಕಿ.ಮೀಟರ್ ದೂರದಲ್ಲಿರುವ ಅಥಣಿ ತಾಲೂಕನ್ನು ಜಿಲ್ಲಾ ಕೇಂದ್ರವಾಗಿ ಘೋಷಣೆ ಮಾಡಬೇಕೆಂದು ಅಥಣಿ ಜಿಲ್ಲಾ ಹೋರಾಟ ಸಮೀತಿ ಅಧ್ಯಕ್ಷ ಪ್ರಶಾಂತ ತೋಡಕರ ಆಗ್ರಹಿಸಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಘೋಷ್ಠಿ ಉದ್ದೇಶಿಸಿ ಮಾತನಾಡಿದ ಇವರು. ಅಥಣಿ ಜಿಲ್ಲಾ ಕೇಂದ್ರವಾಗಿ ಘೋಷಣೆ ಮಾಡುವಂತೆ ಅನೇಕ ವರ್ಷಗಳಿಂದ ಹೋರಾಟ ಮುಂದುವರಿದಿದೆ. ಆದರೆ ಈವರೆಗಿನ ಸರ್ಕಾರಗಳು ಅವಕಾಶ ಕಲ್ಪಿಸಿಲ್ಲ. ಸಧ್ಯ ಸರ್ಕಾರ ಜಿಲ್ಲಾ ವಿಭಜನೆ ಚಿಂತನೆ ಹೊಂದಿದ್ದು ಅಥಣಿಯನ್ನು ಜಿಲ್ಲೆಯಾಗಿ ವಿಂಗಡಿಸಿ ನ್ಯಾಯ ಕೊಡಬೇಕು ಎಂದರು.
ಬೆಳಗಾವಿ ಜಿಲ್ಲಾ ವಿಭಜನೆ ಪೂರ್ವದಲ್ಲಿ ವಿಶೇಷ ಜಿಲ್ಲಾ ವಿಭಜನಾ ಆಯೋಗ ರಚನೆ ಮಾಡಬೇಕು. ಪ್ರಾದೇಶಿಕ ಅಸಮಾನತೆ ಹೋಗಲಾಡಿಸಲು ಅಥಣಿ ಜಿಲ್ಲಾ ಕೇಂದ್ರವಾಗಿ ಘೋಷಣೆ ಮಾಡಬೇಕು. ಅನೇಕ ವರ್ಷಗಳಿಂದ ಅಥಣಿ ತಾಲೂಕಿನ ಅನೇಕ ಹಳ್ಳಿಗಳಿಗೆ ಅನ್ಯಾಯವಾಗುತ್ತಿದೆ, ಇದೆಲ್ಲವನ್ನೂ ಸರಿಪಡಿಸಿ ಮುಂಬರುವ ದಿನಗಳಲ್ಲಿ ಜಿಲ್ಲೆಯಾಗುವ ವಿಶ್ವಾಸ ಇದೆ ಎಂದರು.
ಹತ್ತಾರು ದಶಕಗಳ ಹಿಂದಿನಿಂದಲೂ ಅಥಣಿ ವ್ಯಾಪಾರ ಕೇಂದ್ರವಾಗಿ ಬೆಳೆದಿದೆ. ಆದರೆ ಇಲ್ಲಿನ ಜನ ಸರ್ಕಾರದಿಂದ ಮೂಲಭೂತ ಸೌಕರ್ಯ ಪಡೆಯಲು ಸಾಧ್ಯವಾಗುತ್ತಿಲ್ಲ. ಅಥಣಿ ತಾಲೂಕಿನ ವ್ಯಾಪ್ತಿಯಲ್ಲಿ ಸುಮಾರು ತಾಲೂಕುಗಳು ಬರುತ್ತವೆ. ಅವೆಲ್ಲವನ್ನೂ ಒಟ್ಟುಗೂಡಿಸಿ ಅಥಣಿ ಜಿಲ್ಲಾ ಕೇಂದ್ರವನ್ನಾಗಿ ಮಾಡಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಅಥಣಿ ಜಿಲ್ಲಾ ಹೋರಾಟ ಸಮಿತಿ ಸದಸ್ಯರಾದ. ದೀಪಕ್ ಬುರ್ಲಿ, ಅಕಾಶ್ ನಂದಗಾಂವ, ಶಶಿಧರ ಬರ್ಲಿ, ಪ್ರಶಾಂತ್ ಸೋಂಕರ್, ಬಾಲಾಜಿ ಗಾಡಿ ವಡ್ಡರ್, ದೇವೇಂದ್ರ ಬಿ ಸಾಗರ್ ಉಪಸ್ಥಿತರಿದ್ದರು.


