ಸವದಿಗೆ ತಪ್ಪದ ಜಾರಕಿಹೊಳಿ ಸಹೋದರರ ಕಾಟ ; ರಾಹುಲ್ ಪಾಲಾಯಿತು ಮಹತ್ವದ ಹುದ್ದೆ…!
ಬೆಳಗಾವಿ : ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರಿಗೆ ಜಾರಕಿಹೊಳಿ ಸಹೋದರರು ಶಾಕ್ ನೀಡಿದ್ದಾರೆ.
ಹೌದು ಕಳೆದ ಮೂರು ದಶಕಗಳಿಂದ ಸವದಿ ಹಾಗೂ ಕತ್ತಿ ಕುಟುಂಬದ ಹಿಡಿತದಲ್ಲಿದ್ದ ಬೆಳಗಾವಿ ಡಿಸಿಸಿ ಬ್ಯಾಂಕ್ ಆಡಳಿತ ಸಧ್ಯ ಜಾರಕಿಹೊಳಿ ಕುಟುಂಬದ ಪಾಲಾಗಿತ್ತು. ಅಷ್ಟೇ ಅಲ್ಲದೆ ಜಾರಕಿಹೊಳಿ ಸಹೋದರರು ತಮ್ಮ ಕುಟುಂಬದ ಇಬ್ಬರನ್ನು ನಿರ್ಧೇಶಕದ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆ ಮಾಡಿಕೊಂಡಿದ್ದರು.
ಸಧ್ಯ ವಿರೋಧಿ ಬಣಕ್ಕೆ ಶಾಕ್ ನೀಡಿದ್ದು ಲಕ್ಷ್ಮಣ ಸವದಿ ಅವರದಿದ್ದ ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಸ್ಥಾನವನ್ನು ಜಾರಕಿಹೊಳಿ ಕುಟುಂಬ ತಮ್ಮ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ.
ಡಿಸಿಸಿ ಬ್ಯಾಂಕ್ ನಿಂದ ಅಪೆಕ್ಸ್ ಬ್ಯಾಂಕಿಗೆ ಆಯ್ಕೆಯಾಗುತ್ತಿದ್ದ ಸ್ಥಾನ ಈ ಬಾರಿ ಸವದಿ ಬದಲಿಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಪುತ್ರ ರಾಹುಲ್ ಜಾರಕಿಹೊಳಿ ಅವರನ್ನು ಆಯ್ಕೆ ಮಾಡಲಾಗಿದೆ.
ಮೊನ್ನೆ ನಡೆದ ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನದ ಚುನಾವಣೆಯಲ್ಲಿ ಬೆಳಗಾವಿ ತಾಲೂಕಿನಿಂದ ಅವಿರೋಧವಾಗಿ ರಾಹುಲ್ ಜಾರಕಿಹೊಳಿ ಆಯ್ಕೆಯಾಗಿದ್ದರು. ಸಧ್ಯ ಅಪೆಕ್ಸ್ ಬ್ಯಾಂಕ್ ಸ್ಥಾನ ಪಡೆಯುವ ಮೂಲಕ ಚಿಕ್ಕ ವಯಸ್ಸಿನಲ್ಲೇ ಮಹತ್ವದ ಹುದ್ದೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.


