ಸಿಎಂ ಸಿದ್ದರಾಮಯ್ಯ ಮಹತ್ವದ ಸಭೆ ; ಕಬ್ಬು ಬೆಳೆಗಾರರಿಗೆ ಖುಷಿ ಸುದ್ದಿ…?
ಬೆಳಗಾವಿ : ಪ್ರತಿ ಟನ್ ಕಬ್ಬಿಗೆ ಮೂರುವರೆ ಸಾವಿರ ರೂ. ಕೊಡುವಂತೆ ಆಗ್ರಹಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಬಿಸಿ ರಾಜ್ಯ ಸರಕಾರಕ್ಕೂ ತಟ್ಟಿದೆ. ಈ ಹಿನ್ನಲೆಯಲ್ಲಿ ಇಂದು ಸಿಎಂ ಸಿದ್ದರಾಮಯ್ಯ ಮಹತ್ವದ ಸಭೆ ನಡೆಸುತ್ತಿದ್ದಾರೆ.
ಬೆಂಗಳೂರಿನಲ್ಲಿ ನಡೆಯಲಿರುವ ಸಭೆಯಲ್ಲಿ, ರೈತ ಮುಖಂಡರು, ಸಕ್ಕರೆ ಕಾರ್ಖಾನೆ ಮಾಲಿಕರು ಹಾಗೂ ವಿರೋಧ ಪಕ್ಷದ ನಾಯಕರೂ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಬೆಲೆ ನಿಗದಿ ಆಗುವ ಸಾಧ್ಯತೆ ಇದೆ.
ಇನ್ನು ಕಬ್ಬು ಬೆಲೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ. ಎಪ್ಆರ್ಪಿ ದರ ನಿಗದಿಪಡಿಸಿರುವ ತಾವು ಬೆಲೆ ನಿಗದಿ ಮಾಡಿದ್ದೀರಿ. ರಾಜ್ಯ ಸರಕಾರ ತನ್ನ ಜವಾಬ್ದಾರಿ ನಿರ್ವಹಿಸುತ್ತಿದ್ದು ಕೇಂದ್ರವೂ ಈ ಕುರಿತು ಜವಾಬ್ದಾರಿ ನಿರ್ವಹಿಸುವಂತೆ ಆಹ್ರಹಿಸಿದ್ದಾರೆ.
ಹೆದ್ದಾರಿ ಬಂದ್ ಕೈಬಿಟ್ಟ ರೈತರು
ಸರಕಾರ ಕಬ್ಬಿಗೆ ಬೆಂಬಲ ಬೆಲೆ ಘೋಷಣೆ ಮಾಡದಿದ್ದರೆ ನ.7 ರ ಶುಕ್ರವಾರ ಬೆಂಗಳೂರು – ಪುಣೆ ರಾಷ್ಟ್ರೀಯ ಹೆದ್ದಾರಿ ತಡೆಯಲು ಮುಂದಾಗಿದ್ದ ರೈತರು ತಾತ್ಕಾಲಿಕವಾಗಿ ಮುಂದೂಡಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಶುಕ್ರವಾರ ಸಕ್ಕರೆ ಕಾರ್ಖಾನೆ ಮಾಲಿಕರ ಸಭೆ ಕರೆದಿರುವ ಹಿನ್ನಲೆಯಲ್ಲಿ ಸರಕಾರದ ನಿರ್ಧಾರ ಬಂದ ನಂತರ ಪ್ರತಿಭಟನೆ ಕೈಗೊಳ್ಳಲಿದ್ದಾರೆ.
**********
ರೈತರ ಕ್ಷಮೆ ಕೇಳಿದ ಸಚಿವ ಶಿವಾನಂದ ಪಾಟೀಲ
ಕಳೆದ ಎಂಟು ದಿನಗಳಿಂದ ರೈತರು ಹೋರಾಟ ನಡೆಸುತ್ತಿದ್ದು ಉಸ್ತುವಾರಿ ಸಚಿವರು ಹಾಗೆಯೇ ಜಿಲ್ಲಾಧಿಕಾರಿಗಳ ನಂಬಿಕೆ ಮೇಲೆ ಪ್ರತಿಭಟನಾ ಸ್ಥಳಕ್ಕೆ ಬರಲು ತಡವಾಯಿತು. ಇದಕ್ಕೆ ನಾನು ಕ್ಷಮೆ ಕೋರುತ್ತೇನೆ. ಇನ್ನೆರಡು ದಿನ ತಾವು ನನಗೆ ಸಮಯಾವಕಾಶ ನೀಡಬೇಕು. ಸಿಎಂ ನೇತೃತ್ವದ ಸಭೆ ನಂತರ ಸರಕಾರ ತನ್ನ ನಿರ್ಧಾರ ಪ್ರಕಟಿಸುತ್ತದೆ ಎಂದು ರೈತರಲ್ಲಿ ಮನವಿ ಮಾಡಿದರು.
*******
ಬೆಳಗಾವಿ ಬಂದ್ ಗೆ ಕರೆ ನೀಡಿದ ಕರವೇ
ರೈತರ ಹೋರಾಟಕ್ಕೆ ಬೆಂಬಲ ನೀಡಿರುವ ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡ ಬಣ ಬೆಳಗಾವಿ ಬಂದ್ ಗೆ ಕರೆ ನೀಡಿದೆ. ಇನ್ನೂ ರೈತರ ಹೋರಾಟಕ್ಕೆ ಬೆಂಬಲಿಸಿ ಜಿಲ್ಲೆಯ ಮೂಡಲಗಿ, ಅಥಣಿ ಪಟ್ಟಣ ಸಂಪೂರ್ಣ ಬಂದ್ ಮಾಡಿ ಬೆಂಬಲ ಸೂಚಿಸಲಾಯಿತು.


