ಗೌಡ್ತಿಯ ಅನೈತಿಕ ಸಂಬಂಧಕ್ಕೆ ಕೊಲೆಯಾದ ಅಮಾಯಕ ಗೌಡ ; ಕೊಲೆ ರಹಸ್ಯ ಬಯಲು
ಬೆಳಗಾವಿ : ಪ್ರಿಯಕರನ ಜೊತೆ ದೂರವಿರುವಂತೆ ಹೇಳಿದ್ದಕ್ಕೆ ಗಂಡನನ್ನು ಕೊಲೆ ಮಾಡುವಂತೆ ಸುಪಾರಿ ನೀಡಿದ್ದಲ್ಲದೆ ಕೊಲೆ ದೃಶ್ಯವನ್ನು ವೀಡಿಯೋ ಕರೆ ಮೂಲಕ ದೃಢಪಡಿಸಿಕೊಂಡಿದ್ದ ಮಹಿಳೆಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಏಪ್ರಿಲ್ 2 ರಂದು ಖಾನಾಪುರ ತಾಲೂಕಿನ ಬಲೋಗಾ ಗ್ರಾಮದ ಶಿವನಗೌಡ ಪಾಟೀಲ್ (47) ನ್ನು ಬರ್ಬರವಾಗಿ ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಿದ್ದ ಪ್ರಕರಣ ರೋಚಕ ತಿರುವು ಪಡೆದುಕೊಂಡಿದ್ದು, ಅನೈತಿಕ ಸಂಬಂಧಕ್ಕೆ ಪತಿ ಅಡ್ಡ ಬಂದಿದ್ದಕ್ಕೆ ಮಹಿಳೆ ತನ್ನ ಪ್ರಿಯಕರನಿಗೆ ಕೊಲೆ ಮಾಡಲು ಸುಪಾರಿ ನೀಡಿದ್ದಾಗಿ ಒಪ್ಪಿಕೊಂಡಿದ್ದು ಸಧ್ಯ ಪೊಲೀಸ್ ಅತಿಥಿಯಾಗಿದ್ದಾಳೆ.
ಮೃತ ವ್ಯಕ್ತಿ ಬಲೋಗಿ ಗ್ರಾಮದ ಶಿವನಗೌಡ ಪಾಟೀಲ್ ನ ಪತ್ನಿ ಶೈಲಾ ಪಾಟೀಲ್ ಹಾಗೂ ರುದ್ರಪ್ಪ ಹೊಸೆಟ್ಟಿ ಎಂಬುವನ ಜೊತೆ ಅನೈತಿಕ ಸಂಬಂಧ ಇತ್ತು. ಈ ವಿಷಯ ಕಳೆದ 6 ತಿಂಗಳ ಹಿಂದೆ ಪತಿ ಶಿವನಗೌಡನಿಗೆ ಗೊತ್ತಾಗಿದ್ದು, ಆತನಿಂದ ದೂರ ಇರುವಂತೆ ತಾಕೀತು ಮಾಡಿದ್ದ. ಇದೇ ವಿಚಾರವಾಗಿ ಶೈಲಾ ಗಂಡನನ್ನೇ ಕೊಂದರೆ ನಮ್ಮಿಬ್ಬರ ಪ್ರೀತಿಗೆ ಯಾರೂ ಅಡ್ಡ ಬರುವುದಿಲ್ಲವೆಂದು ಪ್ರಿಯಕರನ ಜೊತೆಗೂಡಿ ಗಂಡನನ್ನು ಕೊಲ್ಲಿಸಲು ಸಂಚು ಮಾಡಿದ್ದಳು.
ಆರೋಪಿ ರುದ್ರಪ್ಪ ಹೊಸೆಟ್ಟಿ ಕಳೆದ ಏಪ್ರಿಲ್ 2 ರಂದು
ಖಾನಾಪುರ ತಾಲೂಕಿನ ಗಾಡಿಕೊಪ್ಪ ಗ್ರಾಮದ ಬಳಿ ಶಿವನಗೌಡನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದ. ಈ ಸಂದರ್ಭದಲ್ಲಿ ಶೈಲಾ ಪಾಟೀಲ್ ಕೊಲೆ ವೇಳೆ ವೀಡಿಯೋ ಕಾಲ್ ಮೂಲಕ ಗಂಡನ ಸಾವಿನ ಕೊನೆ ಕ್ಷಣವನ್ನೂ ನೋಡಿದ್ದಳು. ಗಂಡನ ಕೊಲೆ ಬಳಿಕ ಗೋಳಾಡಿ ಕಣ್ಣೀರಿಟ್ಟಿದ್ದು ನಾಟಕ ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.
ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ಖಾನಾಪುರ ಠಾಣೆ ಪೊಲೀಸರು ಆರೋಪಿ ಶೈಲಾಳ ಫೋನ್ ನಲ್ಲಿ ಕರೆ ಮಾಡಿದ್ದ ದಾಖಲೆ ಪರಿಶೀಲನೆ ಮಾಡಿದಾಗ ಕೊಲೆ ಸಂಚು ಬಯಲಾಗಿದೆ. ಕೊಲೆ ಆರೋಪಿ ರುದ್ರಪ್ಪ ಹೊಸೆಟ್ಟಿಯನ್ನು ಪೊಲೀಸರು ಬಂಧಿಸಿದ್ದು ಆರೋಪಿಗಳನ್ನು ಹಿಂಡಲಗಾ ಜೈಲಿಗೆ ಹಾಕಿದ್ದಾರೆ.


