ಪರಿಹಾರ ವಿಳಂಬ ; ಎಸಿ ಕಚೇರಿ ಕಂಪ್ಯೂಟರ್ ಹೊತ್ತೊಯ್ದ ರೈತರು
ಬೆಳಗಾವಿ : ರೈತರ ಜಮೀನು ಒತ್ತುವರಿ ಮಾಡಿಕೊಂಡ ನಂತರ ಪರಿಹಾರ ನೀಡಲು ವಿಳಂಬ ಮಾಡಿದ ಕಾರಣಕ್ಕೆ ಆಕ್ರೋಶಗೊಂಡ ರೈತರು ಎಸಿ ಕಚೇರಿ ಪೀಠೋಪಕರಣ ಹೊತ್ತೊಯ್ದ ಘಟನೆ ನಡೆದಿದೆ.
ತಾಲೂಕಿನ ಸಾಂಬ್ರಾ ವಿಮಾನ ನಿಲ್ದಾಣ ವಿಸ್ತರಣೆ ಹಿನ್ನಲೆಯಲ್ಲಿ 2008 ರಲ್ಲಿ ರೈತರ 270 ಎಕರೆ ಜಮೀನನ್ನು ಜಿಲ್ಲಾಡಳಿತ ವಶಕ್ಕೆ ಪಡೆದುಕೊಂಡಿತ್ತು. ನಂತರ ವಿಮಾನ ನಿಲ್ದಾಣದ ವಿಸ್ತರಣೆ ಸೇರಿದಂತೆ ಅನೇಕ ಅಭಿವೃದ್ಧಿ ಕಾಮಗಾರಿಗಳು ನಡೆದು ವರ್ಷಗಳೇ ಕಳೆದರು ಈವರೆಗೂ ರೈತರಿಗೆ ಅಧಿಕಾರಿಗಳು ಪರಿಹಾರ ನೀಡಿಲ್ಲ.
ರೈತರಿಂದ ವಶಕ್ಕೆ ಪಡೆದಿದ್ದ ಕೃಷಿ ಜಮೀನಿಗೆ ಒಂದು ಎಕರೆಗೆ 2 ಲಕ್ಷ ರು. ಪರಿಹಾರ ನಿಗದಿ ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ರೈತರು 2011 ರಲ್ಲಿ ನ್ಯಾಯಾಲಯದ ಮೊರೆ ಹೋಗಿದ್ದರು.
ಈ ಕುರಿತು ವಿಚಾರಣೆ ನಡೆಸಿದ್ದ ಹಿರಿಯ ಶ್ರೇಣಿಯ ಸಿವಿಲ್ ನ್ಯಾಯಾಲಯ 2018 ರಲ್ಲಿ ಒಂದು ಗುಂಟೆ ಜಮೀನಿಗೆ ರು. 40 ಸಾವಿರ ಪರಿಹಾರ ನೀಡುವಂತೆ ಆದೇಶ ಹೊರಡಿಸಿತ್ತು.
ನ್ಯಾಯಾಲಯದ ಆದೇಶ ಇದ್ದರೂ ಸರ್ಕಾರ ಈವರೆಗೂ ರೈತರಿಗೆ ಪರಿಹಾರ ನೀಡದೆ ವಿಳಂಬ ನೀತಿ ಅನುಸರಿಸುತ್ತಿದೆ. ಜೊತೆಗೆ ಕೋರ್ಟ್ ಕೂಡಾ ಎಸಿ ಕಚೇರಿ ಪೀಠೋಪಕರಣ ಜಪ್ತಿ ಮಾಡುವಂತೆ ಆದೇಶ ಹೊರಡಿಸಿತ್ತು. ಈ ಹಿನ್ನಲೆಯಲ್ಲಿ ರೈತರು ಬುಧವಾರ ಬೆಳಗಾವಿ ಡಿಸಿ ಕಚೇರಿ ಆವರಣದಲ್ಲಿನ ಉಪವಿಭಾಗಧಿಕಾರಿ ಕಚೇರಿಯ ಕಂಪ್ಯೂಟರ್, ಪ್ರಿಂಟರ್ ಸೇರಿದಂತೆ ಅಗತ್ಯ ವಸ್ತುಗಳನ್ನು ಹೊತ್ತೊಯ್ದಿದ್ದಾರೆ. ಜೊತೆಗೆ ಅಧಿಕಾರಿಗಳ ನಡೆಗೆ ರೈತರು ಅಸಮಾಧಾನ ಹೊರಹಾಕಿದ್ದಾರೆ.


