
ಹಿರಿಯ ಪತ್ರಕರ್ತ ಶಿವಪುತ್ರಪ್ಪ ಯಾದವಾಡ ನಿಧನ ; ಗಣ್ಯರ ಕಂಬನಿ

ಅಥಣಿ : ಪಟ್ಟಣದ ಹಿರಿಯ ಪತ್ರಕರ್ತ ಹಾಗೂ ಸಮಾಜಸೇವಕ ಶಿವಪುತ್ರಪ್ಪ ಯಾದವಾಡ (82) ಮಂಗಳವಾರ ರಾತ್ರಿ ನಿಧನರಾಗಿದ್ದಾರೆ.
ಮೂಲತಃ ಜಮಖಂಡಿ ತಾಲೂಕಿನವರಾದ ಶಿವಪುತ್ರಪ್ಪ ಈರಪ್ಪ ಯಾದವಾಡ ಬ್ಯಾಂಕ್ ನೌಕರರಾಗಿ ಅಥಣಿಗೆ ಆಗಮಿಸಿದ್ದರು. ನಂತರ ರಂಗಭೂಮಿ ಕಲಾವಿದರಾಗಿ, ಕನ್ನಡ ಮತ್ತು ಮರಾಠಿ ಪತ್ರಿಕೆಗಳಲ್ಲಿ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುವುದರ ಜೊತೆಗೆ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ 4 ಪುಸ್ತಕಗಳ ಕೊಡುಗೆ ನೀಡಿದ್ದಾರೆ.
ಅನೇಕ ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಬಹುಮುಖ ವ್ಯಕ್ತಿತ್ವ ಹೊಂದಿದ್ದರು. ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಕನ್ನಡ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ, ವಿಮೋಚನ ಸಂಸ್ಥೆಯ ಸದಸ್ಯರಾಗಿ ಹೀಗೆ ಹತ್ತು ಹಲವಾರು ಸಂಘ-ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿ ಅನೇಕ ಪ್ರಶಸ್ತಿ ಮತ್ತು ಗೌರವ ಸನ್ಮಾನಗಳನ್ನು ಪಡೆದುಕೊಂಡಿದ್ದಾರೆ.
ಶಿವಪುತ್ರಪ್ಪ ಯಾದವಾಡ ಅವರ ನಿಧನಕ್ಕೆ ಗಚ್ಚಿನ ಮಠದ ಶಿವಬಸವ ಸ್ವಾಮೀಜಿ, ಮೋಟಗಿಮಠದ ಪ್ರಭು ಚನ್ನಬಸವ ಸ್ವಾಮೀಜಿ, ಶೆಟ್ಟರ ಮಠದ ಮರುಳುಸಿದ್ದ ಸ್ವಾಮೀಜಿ, ಶಾಸಕ ಲಕ್ಷ್ಮಣ ಸವದಿ, ಮಾಜಿ ಶಾಸಕರಾದ ಶಹಜಹಾನ ಡೋಂಗರಗಾಂವ, ಮಹೇಶ ಕುಮಟಳ್ಳಿ ಸೇರಿ ಅನೇಕರು ಸಂತಾಪ ಸಲ್ಲಿಸಿದ್ದಾರೆ.
ಪತ್ನಿ, ಇಬ್ಬರು ಪುತ್ರರು, ಮೂರು ಜನ ಪುತ್ರಿಯರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಶಿವಪುತ್ರ ಯಾದವಾಡ ಅಗಲಿದ್ದಾರೆ. ಬುಧವಾರ ಮುಂಜಾನೆ ಮೋಟಗಿ ಮಠದ ರುದ್ರಭೂಮಿಯಲ್ಲಿ ವೀರಶೈವ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ಜರುಗಿತು.