ಶಿಕ್ಷಣದ ಜೊತೆಗೆ ಆಧ್ಯಾತ್ಮ ಅತ್ಯವಶ್ಯ : ಮಹೇಶ್ ಕುಮಠಳ್ಳಿ
ಅಥಣಿ : ಶಿಕ್ಷಣದ ಜೊತೆ ಆಧ್ಯಾತ್ಮ ಸೇರಿದರೆ ಮಾತ್ರ ಪರಿಪೂರ್ಣ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯ. ಇಂದಿನ ಆಧುನಿಕ ಜಗತ್ತಿನಲ್ಲಿ ಹಣ ಗಳಿಸಬಹುದು ಆದರೆ ನೆಮ್ಮದಿ ಬೇಕಾದರೆ ಆಧ್ಯಾತ್ಮ ಬೇಕೆಂದು ಮಾಜಿ ಶಾಸಕ ಮಹೇಶ್ ಕುಮಠಳ್ಳಿ ಹೇಳಿದರು.
ಶನಿವಾರ ಸಪ್ತಸಾಗರ ಗ್ರಾಮದಲ್ಲಿ ಜರುಗಿದ ಶಿವಬಸವ ಗುರುಮಂದಿರ ಲೋಕಾರ್ಪಣೆ ಅಂಗವಾಗಿ ಜರುಗಿದ ಪ್ರವಚನ ಕಾರ್ಯಕ್ರಮದಲ್ಲಿ ಇವರು ಮಾತನಾಡಿದರು. ಶಿವಬಸವ ಶಿವಯೋಗಿಗಳು ಈ ನಾಡಿನ ಮಹಾನ್ ಸಂತರು. ಇವರು ಜನಿಸಿದ ಸಪ್ತಸಾಗರ ಗ್ರಾಮದಲ್ಲಿ ಗುರುಮಂದಿರ ಉದ್ಘಾಟನೆಯಾಗುತ್ತಿರುವುದು ಖುಷಿಯ ಸಂಗತಿ ಎಂದರು.
ಸಾವಯವ ಕೃಷಿ ಕುರಿತು ಚಿಂತನ ಸಂಪದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಸಾವಯವ ಕೃಷಿ ತಜ್ಞ ಕಲ್ಮೇಶ ಯಲಡಗಿ, ಸಾವಯವ ಕೃಷಿ ಕುರಿತು ರೈತರಿಗೆ ತಿಳುವಳಿಕೆ ಬೇಕು. ರಾಸಾಯನಿಕ ಗೊಬ್ಬರ ಬಳಸುವುದರಿಂದ ಭೂಮಿಗೆ ಹಾನಿಯಾಗುವುದು ನಿಶ್ಚಿತ. ನಮ್ಮ ಹಿರಿಯರು ಕೊಟ್ಟ ಭೂಮಿಯನ್ನು ಉಳಿಸಿಕೊಳ್ಳುವಲ್ಲಿ ನಾವು ಹಿಂದೆ ಬಿದ್ದಿದ್ದೇವೆ. ನಮ್ಮ ಭೂಮಿಯಲ್ಲಿ ನಾವು ದುಡಿಯುವ ನಿರ್ಧಾರ ಮಾಡಬೇಕು ಎಂದರು.
ಗ್ರಾಮಗಳಿಗೆ ಆಸ್ಪತ್ರೆ ಹಾಗೂ ಪೊಲೀಸ್ ಠಾಣೆ ಬರಬಾರದು. ಆ ಗ್ರಾಮ ಉದ್ಧಾರವಾಗದು. ಶೇಗುಣಸಿ ಪೂಜ್ಯರು ಸಾವಯವ ಕೃಷಿಗೆ ಹೆಚ್ಚಿನ ಮಹತ್ವ ನೀಡಿದ್ದಾರೆ. ಧಾರ್ಮಿಕ ಕಾರ್ಯಕ್ರಮದಲ್ಲಿ ಕೃಷಿ ಚಿಂತನಾ ಗೋಷ್ಠಿ ಆಯೋಜಿಸುತ್ತಿರುವುದು ವಿಶೇಷ. ಭೂಮಿಯ ಫಲವತ್ತತೆ ಉಳಿಸಲು ರೈತರು ಕೈಜೋಡಿಸಬೇಕು ಎಂದುರು.
ಸಾವಯವ ಕೃಷಿ ಪಂಡಿತ ಬಸಣ್ಣ ತೇಲಿ ಮಾತನಾಡಿ. ನಿರಂತರ ಬೇಸಾಯ ಮಾಡುವ ಮೂಲಕ ಭೂಮಿಯ ಫಲವತ್ತತೆ ಹಾಳಾಗುತ್ತಿದೆ. ರಸಾಯನಿಕ ಗೊಬ್ಬರ ಬಳಕೆಯನ್ನು ಕಡಿಮೆ ಮಾಡಿ ಸಾವಯವ ಗೊಬ್ಬರ ಬಳಕೆ ಮಾಡಿದರೆ ಉತ್ತಮ ಗುಣಮಟ್ಟದ ಬೆಳೆ ಬೆಳೆಯಲು ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಜುಂಜರವಾಡದ ಬಸವರಾಜ ಶರಣರು ಮಾತನಾಡಿದರು. ಕಾರ್ಯಕ್ರಮದಲ್ಲಿ ಶೇಗುಣಸಿ ವಿರಕ್ತಮಠದ ಡಾ. ಮಹಾಂತಪ್ರಭು ಮಹಾಸ್ವಾಮಿಜಿ, ಹಾವೇರಿ ಹುಕ್ಕೇರಿಮಠದ ಸದಾಶಿವ ಮಹಾಸ್ವಾಮಿಜಿ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಭಕ್ತರು ಉಪಸ್ಥಿತರಿದ್ದರು.


