ಅಥಣಿ : ಹೆತ್ತ ತಂದೆಯನ್ನೇ ಹೊಡೆದು ಕೊಂದ ಪಾಪಿ ಮಗ
ಅಥಣಿ: ಮದ್ಯ ವ್ಯಸನಿ ಮಗನಿಂದ ಮಾರಣಾಂತಿಕ ಹಲ್ಲೆಗೊಳಗಾಗಿದ್ದ ತಂದೆ ಚಿಕಿತ್ಸೆ ಫಲಿಸದೆ ಮಹಾರಾಷ್ಟ್ರದ ಮಿರಜ ಸಿವಿಲ್ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಶನಿವಾರ ನಡೆದಿದೆ.
ಅಥಣಿ ತಾಲೂಕಿನ ಮದಬಾವಿ ಗ್ರಾಮದ ಮಲ್ಲು ತುಕಾರಾಮ ವನಖಂಡೆ (89) ಹಲ್ಲೆಗೊಳಗಾಗಿದ್ದ ಮೃತ ತಂದೆ. ಹಲ್ಲೆಗೈದಿದ್ದ ಮಗ ಬಾಳಾಸಾಬ ಮಲ್ಲು ವನಖಂಡೆ (49) ಈತನನ್ನು ಅಥಣಿ ಪೊಲೀಸರು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಕ್ಷುಲ್ಲಕ ಕಾರಣಕ್ಕಾಗಿ ಮದ್ಯ ವ್ಯಸನಿ ಬಾಳಾಸಾಬ ಅ.24ರಂದು ತಂದೆ ಮಲ್ಲು ವನಖಂಡೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ. ಗಂಭೀರವಾಗಿ ಗಾಯಗೊಂಡಿದ್ದ ಮಲ್ಲು ಅವರನ್ನು ಮಿರಜ್ ನ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ, ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಅಥಣಿ ಪಿಎಸ್ಐ ಎಂ.ಬಿ.ಬಿರಾದಾರ, ಎಎಸ್ಐ ಯಶವಂತ ರಾಮೋಜಿ, ತನಿಖಾ ಸಹಾಯಕ ಪಿ.ಸಿ ಕಂಟಿಗೊಂಡ, ಸಿಬ್ಬಂದಿ ಸುಭಾಸ ಬಬಲೇಶ್ವರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

