ನನ್ನ ದೇಹದಲ್ಲಿ ರಾಣಿ ಚೆನ್ನಮ್ಮನ ರಕ್ತ ಹರಿಯುತ್ತಿದೆ ; ಎದುರಾಳಿಗಳಿಗೆ ಹೆಬ್ಬಾಳ್ಕರ್ ಕೌಂಟರ್
ಬೆಳಗಾವಿ : ನನ್ನ ಮೈಯಲ್ಲಿ ಸ್ವಾಭಿಮಾನಿ ಸಂಕೇತ ಕಿತ್ತೂರು ರಾಣಿ ಚೆನ್ನಮ್ಮನ ರಕ್ತ ಹರಿತಾ ಇದೆ. ನನ್ನ ಮಗನ ಮೈಯಲ್ಲಿ ಪಂಚಮಸಾಲಿ ರಕ್ತ ಹರೀತಿದೆ. ನಾವು ಬಸವಣ್ಣನ ತತ್ವವನ್ನು ಪಾಲಿಸಿಕೊಂಡು ಬಂದಿದ್ದೇವೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಲಕ್ಷ್ಮೀ ಹೆಬ್ಬಾಳ್ಕರ್ ಕುಟುಂಬದವರು ಪಂಚಮಸಾಲಿ ಸಮುದಾಯವರಲ್ಲ ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ ಆರೋಪಕ್ಕೆ ಉತ್ತರಿಸಿದ ಸಚಿವರು. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದ ಆಶಯದಂತೆ ನಡೆಯುತ್ತಿದ್ದೇವೆ. ಪಂಚಮಸಾಲಿ ಹೋರಾಟದಲ್ಲಿ ನಾನು ಮತ್ತು ನನ್ನ ಕುಟುಂಬದ ಸದಸ್ಯರು ಸಕ್ರಿಯವಾಗಿ ಪಾಲ್ಗೊಂಡಿದ್ದೇವೆ. ಮುರುಗೇಶ್ ನಿರಾಣಿ ಅವರಿಗೆ ನಿರಾಸೆಯಾಗಿದ್ದು ಆ ಕಾರಣಕ್ಕೆ ಈಬರೀತಿಯ ಆರೋಪ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.
ಈ ಚುನಾವಣೆ ಬೆಳಗಾವಿ ಜಿಲ್ಲೆಯ ಜನರ ಸ್ವಾಭಿಮಾನದ ಪ್ರಶ್ನೆ. ಇದು ನಮ್ಮ ನೆಲ ಜಲದ ಹೋರಾಟ ಹಾಗೂ ಅಳಿವು ಉಳಿವಿನ ಪ್ರಶ್ನೆಯಾಗಿದೆ. ಬೆಳಗಾವಿ ಜನತೆ ಸ್ವಾಭಿಮಾನಿಗಳು, ಈ ಕ್ಷೇತ್ರದ ಮನೆ ಮಗ ಮೃಣಾಲ್ ಹೆಬ್ಬಾಳ್ಕರ್ಗೆ ಆಶೀರ್ವಾದ ಮಾಡಲಿದ್ದಾರೆ. ಸಾಮಾನ್ಯವಾಗಿ ಮಾತನಾಡುವಂತೆ ರಾಜಕೀಯ ಅಂದುಕೊಂಡಷ್ಟು ಸುಲಭವಲ್ಲ. 24 ಗಂಟೆ ಜನರ ಕಷ್ಟ ನಷ್ಟಗಳಿಗೆ ಸ್ಪಂದಿಸಬೇಕಾಗುತ್ತದೆ. ನಮ್ಮ ಮಕ್ಕಳು ವಿದೇಶದಲ್ಲಿ ಓದಿದ್ದಾರೆ. ವಿದೇಶದಲ್ಲೇ ನೌಕರಿ ಪಡೆದು, ಅಲ್ಲೆ ಉಳಿದುಕೊಳ್ಳಬಹುದಿತ್ತು. ಆದರೆ ನಮ್ಮ ದಾರಿಯಲ್ಲೇ ಬಂದು ಸಮಾಜ ಸೇವೆ ಮಾಡುತ್ತಿದ್ದಾರೆ ಎಂದು ಹೇಳಿದರು.
ಬೆಳಗಾವಿ ಕ್ಷೇತ್ರದ ಅಭ್ಯರ್ಥಿ, ನನ್ನ ಮಗ ಮೃಣಾಲ್ ಹೆಬ್ಬಾಳ್ಕರ್ ಹಾಗೂ ಸಚಿವ ಸತೀಶ್ ಜಾರಕಿಹೊಳಿ ಅವರ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಇಬ್ಬರು ವಿದ್ಯಾವಂತರು. ಬುದ್ದಿವಂತರಿದ್ದಾರೆ, ಪ್ರಭುದ್ಧರಿದ್ದಾರೆ ಎಂದು ಹೇಳಿದರು.


