ಬಂಗಾರವನ್ನೇ ಜನ ಹೆಚ್ಚು ಪರೀಕ್ಷೆ ಮಾಡುವುದು ಕಬ್ಬಿಣವಲ್ಲ : ಬಿಗ್ ಬಾಸ್ ಮನೆಯಿಂದ ಹೊರಬಂದ ಪ್ರದೀಪ್ ಈಶ್ವರ್ ಡಿಚ್ಚಿ
ಬೆಂಗಳೂರು : ಬಿಗ್ ಬಾಸ್ ಮನೆ ಪ್ರವೇಶ ಮಾಡಿ ಟ್ರೋಲ್ ಗೆ ಒಳಗಾಗಿದ್ದ ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಮನೆಯಿಂದ ಹೊರಬಂದು ವಿರೋಧಿಗಳಿಗೆ ಟಾಂಗ್ ನೀಡಿದ್ದಾರೆ.
ಪ್ರದೀಪ್ ಈಶ್ವರ್ ( pradeep Eshwar ) ವಿರುದ್ಧ ಮಾಜಿ ಸಚಿವ ಸುಧಾಕರ್ ವ್ಯಂಗ್ಯವಾಡಿದ್ದರು. ದೇಶದ ಇತಿಹಾಸದಲ್ಲೇ ಶಾಸಕ ಬಿಗ್ ಬಾಸ್ ಮನೆಗೆ ಹೋಗಿರಲಿಲ್ಲ. ಈಗ ಸ್ಥಳೀಯ ಶಾಸಕ ಚಿಕ್ಕಬಳ್ಳಾಪುರ ಮರ್ಯಾದೆ ಹರಾಜು ಮಾಡಿದ್ದಾರೆ ಎಂದು ಆರೋಪಿಸಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಪ್ರದೀಪ್ ಈಶ್ವರ್. ಜನ ಚಿನ್ನವನ್ನು ಹೆಚ್ಚು ಪರೀಕ್ಷೆ ಮಾಡುವುದು ಕಬ್ಬಿಣವನ್ನಲ್ಲ. ಮಾಜಿ ಶಾಸಕರಿಗೆ ನನ್ನ ವಿರುದ್ಧ ಪ್ರತಿಭಟಿಸಲು ಬರುವುದಿಲ್ಲ. ಅವರಿಗೆ ಯಾವ ರೀತಿ ಪ್ರಶ್ನೆ ಮಾಡಿ ರಾಜಕೀಯವಾಗಿ ಬಳಸಿಕೊಳ್ಳಬೇಕೆಂಬುದು ಗೊತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ರಿಯಾಲಿಟಿ ಶೋ ನಡಿಸುವ ನನ್ನ ಗೆಳೆಯರು ಆಹ್ವಾನ ನೀಡಿದ್ದರು. ನಾನು ಬಿಗ್ ಬಾಸ್ ( Bigg boss Kannada – 10 ) ಮನೆಗೆ ಅತಿಥಿಯಾಗಿ ಹೋಗಿದ್ದು, ಅಲ್ಲಿ ಆಟವಾಡಲು ಹೋಗಿರಲಿಲ್ಲ. ಮನೆಯಲ್ಲಿರುವ ಸದಸ್ಯರಿಗೆ ಮೋಟಿವೇಶನ್ ಮಾಡಿರುವೆ. ಅದನ್ನೇ ಅಪರಾಧ ಅಂದರೆ ಹೇಗೆ ಎಂದು ಪ್ರಶ್ನೆ ಮಾಡಿದ್ದಾರೆ.
ಒಟ್ಟಿನಲ್ಲಿ ತಮ್ಮ ಮಾತಿನ ಮೂಲಕ ಎಲ್ಲರನ್ನೂ ಬೆರಗು ಮಾಡುವ ಶಾಸಕ ಪ್ರದೀಪ್ ಈಶ್ವರ್ ಮತ್ತೊಮ್ಮೆ ತಮ್ಮ ವಿರೋಧಿಗಳಿಗೆ ಟಾಂಗ್ ನೀಡುವ ಮೂಲಕ ತಮ್ಮ ನಡೆ ಸಮರ್ಥಿಸಿಕೊಂಡಿದ್ದಾರೆ.


