ಬೆಳಗಾವಿ: ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಹಾಗೂ ಪ್ರವಚನ ಪಿತಾಮಹ ಪರಮಪೂಜ್ಯ ಲಿಂಗಾನಂದ ಸ್ವಾಮೀಜಿ ಅವರ ಸಂಸ್ಮರಣೋತ್ಸವ ಪ್ರಯುಕ್ತ ರಕ್ತದಾನ ಮತ್ತು ನೇತ್ರದಾನಕ್ಕೆ ವಾಗ್ದಾನ ಕಾರ್ಯಕ್ರಮ ಭಾನುವಾರ ಹಮ್ಮಿಕೊಳ್ಳಲಾಗಿತ್ತು.

ಮಹಾಂತೇಶ ನಗರದ ವಿಶ್ವಗುರು ಬಸವ ಮಂಪಟದಲ್ಲಿ ಬಸವ ಕಾಯಕ ಜೀವಿಗಳ ಸಂಘ ಹಾಗೂ ರಾಷ್ಟ್ರೀಯ ಬಸವ ದಳದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ 132 ಜನರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು. ಜಂಬಗಿ ಕಣ್ಣಿನ ಆಸ್ಪತ್ರೆ ವೈದ್ಯರು 110 ಜನರಿಗೆ ಕಣ್ಣು ತಪಾಸಿಸಿದರು. 30 ಜನರು ನೇತ್ರದಾನಕ್ಕೆ ತಮ್ಮ ಹೆಸರು ನೋಂದಣಿ ಮಾಡಿಸಿಕೊಂಡರು. ರಕ್ತದಾನ ಮಾಡಿದವರಿಗೆ 1 ಲಕ್ಷ ರೂ. ಅಪಘಾತ ವಿಮಾ ಸೌಲಭ್ಯ ನೀಡಲಾಯಿತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ವಿಧಾನಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, “ರಕ್ತದಾನವು ಮತ್ತೊಬ್ಬರ ಜೀವ ಉಳಿಸುವ ಶ್ರೇಷ್ಠ ಹಾಗೂ ಪುಣ್ಯದ ಕಾರ್ಯ. ಅಪಘಾತಕ್ಕೊಳಗಾದವರು ಹಾಗೂ ಕ್ಯಾನ್ಸರ್ ರೋಗಿಗಳಿಗೆ ರಕ್ತದ ಮಹತ್ವ ಹೆಚ್ಚು ತಿಳಿಯುತ್ತದೆ. ಬಸವಣ್ಣನವರ ಕಾಯಕ ಮತ್ತು ದಾಸೋಹ ತತ್ವದಂತೆ ನಮ್ಮ ಕಾರ್ಯಗಳು ಸಮಾಜಮುಖಿಯಾಗಿರಬೇಕು. ಆ ನಿಟ್ಟಿನಲ್ಲಿ ರಕ್ತದಾನ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ. ರಕ್ತದಾನಿಗಳಿಗೆ ವಿಶೇಷ ಅಭಿನಂದನೆ ಸಲ್ಲಿಸುತ್ತೇನೆ ಎಂದರು.



ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಶಾಸಕರು ಆಗಿರುವ ಅನಿಲ್ ಬೆನಕೆ ಮಾತನಾಡಿ, ರಕ್ತದಾನಿಗಳಿಗೆ ಒಂದು ಲಕ್ಷ ರೂಪಾಯಿವರೆಗೆ ಉಚಿತ ಆರೋಗ್ಯ ವಿಮೆ ವಿತರಿಸಿರುವ ರಾಷ್ಟ್ರೀಯ ಬಸವದಳ ಮತ್ತು ಬಸವ ಜೀವಿಗಳ ಕಾಯಕ ಸಂಘದ ಕಾರ್ಯ ಇತರೆ ಸಂಘಟನೆಗಳಿಗೆ ಮಾದರಿ ಆಗಿದೆ. ಭವಿಷ್ಯದಲ್ಲಿ ಮತ್ತಷ್ಟು ಸಮಾಜಮುಖಿ ಕೆಲಸಗಳು ತಮ್ಮಿಂದ ಆಗಲಿ ಎಂದು ಶುಭ ಹಾರೈಸಿದರು.

ಲಿಂಗಾಯತ ಮುಖಂಡ ಶಂಕರ ಗುಡಸ ಮಾತನಾಡಿ, ರಕ್ತದಾನ ಶಿಬಿರಕ್ಕೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. 132 ಜನರು ರಕ್ತದಾನ ಮಾಡಿದ್ದಾರೆ. ಅದರಲ್ಲಿ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದ ನಾಲ್ವರು ಮಹಿಳೆಯರು ರಕ್ತದಾನ ಮಾಡಿರುವುದು ವಿಶೇಷವಾಗಿದೆ. ಬಸವ ತತ್ವದಡಿ ಬಡ ಮಕ್ಕಳಿಗೆ ಉಚಿತ ವಸತಿ ನಿಲಯ ಸೇರಿದಂತೆ ಹಲವು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಈ ವೇಳೆ ಡಾ. ಅಮೋಘ ಜಂಬಗಿ, ರಾಷ್ಟ್ರೀಯ ಬಸವದಳ ಜಿಲ್ಲಾಧ್ಯಕ್ಷ ಅಶೋಕ ಬೆಂಡಿಗೇರಿ, ಮುಖಂಡರಾರ ಆನಂದ ಗುಡಸ, ಕೆ.ಶರಣ ಪ್ರಸಾದ, ಮಹಾಂತೇಶ ಗುಡಸ, ಸೂರ್ಯಕಾಂತ ಭಾಂವಿ, ಸಂತೋಷ್ ಗುಡಸ, ನಿತಿನ ಗುಡಸ ಸೇರಿದಂತೆ ಮತ್ತಿತರು ಇದ್ದರು.