ಚರಂತಿಮಠ ಬೆನ್ನಿಗೆ ಹಿಂದೂ ಹುಲಿ ಯತ್ನಾಳ್ ; ರಂಗೇರಿದ ಬಾಗಲಕೋಟೆ ಉಪ ಚುನಾವಣೆ ಅಖಾಡ..!
ಬೆಂಗಳೂರು : ಬಾಗಲಕೋಟೆ ಉಒ ಚುನಾವಣಾ ಅಖಾಡ ರಂಗೇರಿದ್ದು ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದಲ್ಲಿ ಟಿಕೆಟ್ ಯಾರಿಗೆ ಕೊಡಬೇಕು ಎಂಬ ಕಸರತ್ತು ನಡೆಯುತ್ತಿದೆ. ಬಿಜೆಪಿಯಿಂದ ಹಾಲಿ ಶಾಸಕ ವೀರಣ್ಣ ಚರಂತಿಮಠ ಅವರಿಗೆ ಬಿಜೆಪಿ ಮತ್ತೊಮ್ಮೆ ಅವಕಾಶ ನೀಡುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ.
ಈಗಾಗಲೇ ಚುನಾವಣಾ ಆಯೋಗ ಉಪ ಚುನಾವಣೆ ದಿನಾಂಕ ಘೋಷಣೆ ಮಾಡಿದ್ದು ಬರುವ ಎಪ್ರಿಲ್ 9 ರಂದು ಚುನಾವಣೆ ನಡೆಯಲಿದೆ. ಶಾಸಕ ಹೆಚ್.ವೈ ಮೇಟಿ ಅವರ ನಿಧನದಿಂದ ತೆರವಾದ ಬಾಗಲಕೋಟೆ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ಬಂದೊದಗಿದ್ದು ಈಗಾಗಲೇ ಎರಡೂ ಪಕ್ಷಗಳು ಚುನಾವಣಾ ತಯಾರಿ ನಡೆಸಿವೆ.
ಪ್ರಚಾರಕ್ಕೆ ಬರುತ್ತಾರಾ ಯತ್ನಾಳ್..? : ಬಿಜೆಪಿಯಿಂದ ಉಚ್ಚಾಟನೆ ಆಗಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು ಬಾಗಲಕೋಟೆ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡುತ್ತಾರಾ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡಿದೆ. ಒಂದು ಕಡೆ ಬಿಜೆಪಿ ಭರ್ಜರಿ ಪ್ರಚಾರಕ್ಕೆ ತಂತ್ರ ಹೆಣೆಯುತ್ತಿದ್ದರೆ ಇತ್ತ ಹಿಂದೂ ಮತ ಸೆಳೆಯಲು ಯತ್ನಾಳ್ ಪ್ರಚಾರವೂ ಅಷ್ಟೇ ಮಹತ್ವ ಪಡೆದುಕೊಂಡಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಬಿಜೆಪಿ ಸಂಭವನೀಯ ಅಭ್ಯರ್ಥಿ ವೀರಣ್ಣ ಚರಂತಿಮಠ. ಯತ್ನಾಳ್ ಜೊತೆಗೆ ನಾನು ವೈಯಕ್ತಿಕ ಸ್ನೇಹ ಹೊಂದಿದ್ದು, ಈ ಆಧಾರದ ಮೇಲೆ ಅವರು ಪ್ರಚಾರಕ್ಕೆ ಬರಬಹುದು ಎಂದು ಹೇಳಿದ್ದಾರೆ. ಹಿಂದೂಪರ ಸಂಘಟನೆಗಳಲ್ಲಿ ಕೆಲಸ ಮಾಡಿರುವ ಯತ್ನಾಳ್ ಅವರು ಪ್ರಚಾರಕ್ಕೆ ಬರುತ್ತಾರೆ ಎಂಬ ವಿಶ್ವಾಸವನ್ನು ಚರಂತಿಮಠ ಹೊರಹಾಕಿದ್ದಾರೆ.
ಯತ್ನಾಳ್ ಬರುವುದು ಪಕ್ಕಾ…? ಬಿಜೆಪಿಂದ ಯತ್ನಾಳ್ ದೂರ ಆಗಿದ್ದರೂ ಅಲ್ಲಿನ ನಾಯಕರ ಜೊತೆ ಉತ್ತಮ ಸಂಬಂಧ ಹೊಂದಿದ್ದಾರೆ. ಮಾಜಿ ಶಾಸಕ ವೀರಣ್ಣ ಚರಂತಿಮಠರ ಮೇಲೆ ಅಪಾರ ಪ್ರೀತಿ ಹಾಗೂ ಸ್ನೇಹ ಹೊಂದಿರುವ ಯತ್ನಾಳ್ ಅವರು ಗೌರವವನ್ನು ನೀಡುತ್ತಾರೆ. ಈ ಹಿನ್ನಲೆಯಲ್ಲಿ ಬಾಗಲಕೋಟೆ ಉಪ ಚುನಾವಣೆ ಪ್ರಚಾರಕ್ಕೆ ಕಣಕ್ಕೆ ಯತ್ನಾಳ್ ಬರುವುದು ನಿಶ್ಚಿತ ಎಂದೇ ಹೇಳಲಾಗುತ್ತಿದೆ.
ಯಡಿಯೂರಪ್ಪ ನಾಲ್ಕು ದಿನ ವಾಸ್ತವ್ಯ : ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರು ಬಾಗಲಕೋಟೆ ಉಪ ಚುನಾವಣೆ ಪ್ರಚಾರದ ಹಿನ್ನಲೆಯಲ್ಲಿ ನಾಲ್ಕು ದಿನ ವಾಸ್ತವ್ಯ ಹೂಡುವುದಾಗಿ ತಿಳಿಸಿದ್ದಾರೆ ಎಂದು ಚರಂತಿಮಠ ಹೇಳಿದರು. ಚುನಾವಣೆಯಲ್ಲಿ ಸದಾಕಾಲವೂ ಹುರುಪಿನಿಂದ ಕೆಲಸ ಮಾಡುವ ಯಡಿಯೂರಪ್ಪ ಬಿಜೆಪಿ ಗೆಲ್ಲಿಸಲು ವಯಸ್ಸು ಲೆಕ್ಕಿಸದೆ ಕೆಲಸ ಮಾಡಲಿದ್ದಾರೆ ಎನ್ನುತ್ತಾರೆ ಪಕ್ಷದ ಮುಖಂಡರು.
2023 ರ ಚುನಾವಣಾ ಫಲಿತಾಂಶ :
ಹೆಚ್.ವೈ ಮೇಟಿ – 79,336 ಮತಗಳು – ಕಾಂಗ್ರೆಸ್
ವೀರಣ್ಣ ಚರಂತಿಮಠ – 73,458 ಮತಗಳು – ಬಿಜೆಪಿ
ಮಲ್ಲಿಕಾರ್ಜುನ ಚರಂತಿಮಠ – 10,116 ಮತಗಳು – ಪಕ್ಷೇತರ
ಗೆಲುವಿನ ಅಂತರ – 5,878


