ಕೊರಳು ಬಿಚ್ಚಿದ ಜೋಡೆತ್ತು ; ಸಾಹುಕಾರ್ ಹೆಗಲಿಗೆ ಜೋಡಿಯಾಯ್ತು…!
ಬೆಳಗಾವಿ : ನಾವಿಬ್ಬರೇ ಒಂದು ಬಣ. ನಾವೇ ಜೋಡೆತ್ತು ಎಂದು ಹೇಳಿದ್ದ ರಾಜು ಕಾಗೆ ಸದ್ದಿಲದೆ ಬಾಲಚಂದ್ರ ಜಾರಕಿಹೊಳಿ ಬಣ ಸೇರಿದರಾ ಎಂಬ ಪ್ರಶ್ನೆ ಮೂಡಿದೆ.
ಡಿಸಿಸಿ ನಿರ್ದೇಶಕ ಸ್ಥಾನಕ್ಕೆ ಕಾಗವಾಡದಿಂದ ಸ್ಪರ್ಧೆ ಮಾಡಿದ್ದ ಶಾಸಕ ರಾಜು ಕಾಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಆಪ್ತ ಸ್ನೇಹಿತ ಲಕ್ಷ್ಮಣ ಸವದಿ ಒಬ್ಬಂಟಿಯಾಗಿ ಚುನಾವಣೆ ಎದರಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ.
ರಾಜು ಕಾಗೆ ಅವರನ್ನು ತಮ್ಮ ಬಣಕ್ಕೆ ಸೆಳೆಳುವಲ್ಲಿ ಜಾರಕಿಹೊಳಿ ಸಹೋದರರು ಯಶಸ್ವಿಯಾದರಾ ಎಂಬ ಪ್ರಶ್ನೆ ಮೂಡಿದೆ. ಅತ್ತ ರಮೇಶ್ ಜಾರಕಿಹೊಳಿ ಆಪ್ತ ಶ್ರೀಮಂತ ಪಾಟೀಲ್ ಅವರ ಪುತ್ರನ ಮನವೊಲಿಸುವ ಮೂಲಕ ಕಾಗೆ ಯನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ಆದರೆ ಆಪ್ತ ಸ್ನೇಹಿತ ಲಕ್ಷ್ಮಣ ಸವದಿ ವಿರುದ್ಧ ಇದೇ ರಮೇಶ್ ಜಾರಕಿಹೊಳಿ ಆಪ್ತ ಮಹೇಶ್ ಕುಮಠಳ್ಳಿ ಸ್ಪರ್ಧೆಗಿಳಿದಿದ್ದಾರೆ. ಅಥಣಿಯಲ್ಲಿ ಆಗದ ಅವಿರೋಧ ಆಯ್ಕೆ ಕಾಗವಾಡದಲ್ಲಿ ಹೇಗೆ ಸಾಧ್ಯವಾಯಿತು ಎಂಬುದರ ಹಿಂದೆ ಹಲವು ತಂತ್ರಗಳೂ ಅಡಗಿವೆ.
ರಾಜು ಕಾಗೆ ಋಣ ತೀರಿಸುವ ಮಾತನಾಡಿದ್ದ ಲಕ್ಷ್ಮಣ ಸವದಿ ಕೇವಲ ತಮ್ಮ ನಿರ್ದೇಶಕ ಸ್ಥಾನದ ಚುನಾವಣೆ ಮಾಡಬೇಕಾಗಿದೆ. ಜೋಡೆತ್ತಿನಲ್ಲಿ ಈಗ ಒಂದು ಎತ್ತು ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಮತ್ತೊಬ್ಬರಿಗೆ ಹೆಗಲು ಕೊಟ್ಟಿದ್ದಂತು ನಿಜ.


