ಕಂಪ್ಲೆಂಟ್ ಕೊಟ್ಟವನೇ ಮಹಾಕಳ್ಳ ; ಅಕ್ಕಿ ಕದ್ದ ಅಧಿಕಾರಿ ಅಂದರ್
ಯಾದಗಿರಿ : ಜಿಲ್ಲೆಯ ಶಹಾಪುರ ನಗರದ ಸರಕಾರಿ ಗೋದಾಮನಲ್ಲಿ 2.66 ಕೋಟಿ ರು. ಅಕ್ಕಿ ಕಳ್ಳತನ ಪ್ರಕರಣಕ್ಕೆ ಇದೀಗ ಮಹತ್ವದ ತಿರುವು ಸಿಕ್ಕಿದ್ದು, ಕಳ್ಳತನವಾಗಿದ್ದ ಕುರಿತು ದೂರು ನೀಡಿದ್ದ ಅಧಿಕಾರಿಯೇ ಆರೋಪಿಯಾಗಿದ್ದಾನೆ.
ಈ ಕುರಿತು ತನಿಖೆ ನಡೆಸಿರುವ ಪೊಲೀಸರು 17 ಜನರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದು, ಪ್ರಕರಣದ ಬಗ್ಗೆ ದೂರು ನೀಡಿದ್ದ ಆಹಾರ ನಾಗರೀಕ ಸರಬರಾಜು ಇಲಾಖೆ ಉಪನಿರ್ದೇಶಕರಾಗಿದ್ದ ಭೀಮರಾಯ ಮಸಾಳಿ ಎ14 ಆರೋಪಿಯಾಗಿರುವುದು ಬಹಿರಂಗವಾಗಿದೆ.
ಅಲ್ಲದೆ ಇವರ ಜೊತೆಗೆ ಶಹಾಪುರ ಆಹಾರ ನಿರೀಕ್ಷಕ ವಿಜಯರೆಡ್ಡಿ, ಶಿರಸ್ತೆದಾರ ಪ್ರಮೀಳಾ, ವಡಗೇರಾ ಆಹಾರ ನಿರೀಕ್ಷಕ ನಾಗಪ್ಪ ಪ್ರಮುಖ ಸರಕಾರಿ ಅಧಿಕಾರಿಗಳು ಸಹ ಆರೋಪಿಯಾಗಿದ್ದಾರೆ.
ಕಳೆದ 9 ತಿಂಗಳಿನಿಂದ ತನಿಖೆ ನಡೆಸಿ ಆರೋಪಿಗಳಿಂದ 52 ಲಕ್ಷ ರು.ನಗದು, 1120 ಕ್ವಿಂಟಾಲ್ ಅಕ್ಕಿ(41 ಲಕ್ಷ ರು. ಅಕ್ಕಿ ಬೆಲೆ) ಸಾಗಾಣೆ ಮಾಡಲು ಬಳಸಿದ ವಿವಿಧ ವಾಹನಗಳು, ನಾಲ್ಕು ಮೊಬೈಲ್, ಜಪ್ತಿ ಮಾಡಿರುವ ಬಗ್ಗೆ ಪೊಲೀಸರು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿದ್ದಾರೆ.
2023 ಡಿ.4 ರಂದು ಶಹಾಪುರ ಪೊಲೀಸ್ ಠಾಣೆಯಲ್ಲಿ , ಸರಕಾರಿ ಗೋದಾಮಿನಲ್ಲಿ 6,677 ಕ್ವಿಂಟಾಲ್ ಅಕ್ಕಿ ಕಳ್ಳತನವಾಗಿರುವ ಕುರಿತು ಯಾದಗಿರಿ ಜಿಲ್ಲಾ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ಉಪ ನಿರ್ದೇಶಕನಾಗಿದ್ದ
ಭೀಮರಾಯ ಮಸಾಳಿ, ತಾಲೂಕಾ ಒಕ್ಕಲುತನ ಹುಟ್ಟುವಳಿ ಸಹಕಾರ ಸಂಘ ನಿಯಮಿತ ವಿರುದ್ಧ ದೂರು ದಾಖಲಿಸಿದ್ದರು.
ಈ ದೂರಿನ ಮೇರೆಗೆ ತನಿಖೆ ಕೈಗೊಂಡು ಸುದೀರ್ಘ 9 ತಿಂಗಳು ನಂತರ ಇದೀಗ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದಾರೆ.


