ಅಪಘಾತಗೊಂಡಿದ್ದ ವ್ಯಕ್ತಿ ಜೀವ ಉಳಿಸಿದ ಮೋರೆ ಕುಟುಂಬ ; ಸಾರ್ವಜನಿಕರಿಂದ ಶ್ಲಾಘನೆ
ಬೆಳಗಾವಿ : ನಗರದಲ್ಲಿ ಕಳೆದ ಹದಿನೈದು ದಿನಗಳ ಹಿಂದೆ ಅಪಘಾತದಲ್ಲಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ವ್ಯಕ್ತಿಯನ್ನು ಕೂಡಲೇ ಆಸ್ಪತ್ರೆಗೆ ಸೇರಿಸುವ ಮೂಲಕ ವ್ಯಕ್ತಿಯ ಪ್ರಾಣ ಉಳಿಸುವ ಕೆಲಸ ಮಾಜಿ ಮೇಯರ್ ವಿಜಯ್ ಮೋರೆ ಹಾಗೂ ಕುಟುಂಬ ಮಾಡಿದೆ.
ಕಳೆದ ಹದಿನೈದು ದಿನಗಳ ಹಿಂದೆ ಪೀರನವಾಡಿಯ ಪೆಟ್ರೋಲ್ ಬಂಕ್ ಎದುರಿಗೆ ಸಂಭವಿಸಿದ್ದ ರಸ್ತೆ ಅಪಘಾತದಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದರು. ಇದರಲ್ಲಿ ಅಶೋಕ್ ಐರನ್ ವರ್ಕ್ಸ್ನಲ್ಲಿ ಕೆಲಸ ಮಾಡುತ್ತಿದ್ದ ನಿರಂಜನ್ ಮಾನೆ ಎಂಬುವವರ ಪರಿಸ್ಥಿತಿ ಗಂಭೀರವಾಗಿತ್ತು.
ಅಪಘಾತವಾದ ಸಂದರ್ಭದಲ್ಲಿ ಸಂಚರಿಸುತ್ತಿದ್ದ ಮಾಜಿ ಮೇಯರ್ ವಿಜಯ ಮೋರೆ ಹಾಗೂ ಅವರ ಪತ್ನಿ ಮರಿಯಾ ಮೋರೆ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸುವ ಮೂಲಕ ಮಾನವೀಯತೆ ಮೆರೆದಿದ್ದರು. ಸೂಕ್ತ ಸಂದರ್ಭದಲ್ಲಿ ಚಿಕಿತ್ಸೆ ದೊರೆತ ಹಿನ್ನಲೆಯಲ್ಲಿ ವ್ಯಕ್ತಿ ಬದುಕುಳಿದಿದ್ದಾರೆ.
ನಗರದ ವಿಜಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುವನ್ನು ಭೇಟಿ ಮಾಡಿರುವ ವಿಜಯ್ ಮೋರೆ ಹಾಗೂ ಅವರ ಪುತ್ರ ಅಲನ್ ಮೋರೆ ಆರೋಗ್ಯ ವಿಚಾರಿಸಿದರು. ಅಪಘಾತವಾದ ಕೂಡಲೇ ಜನರು ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸುವ ಮೂಲಕ ಪ್ರಾಣ ಉಳಿಸಬೇಕು ಎಂದು ಮನವಿ ಮಾಡಿದ್ದಾರೆ.


